ನವೆಂಬರ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಅನೇಕ ಆಟಗಾರರ ಅದೃಷ್ಟ ಖುಲಾಯಿಸಿದೆ. ಆದರೆ ಕೆಲವು ಆಟಗಾರರು ಅನ್ಸೋಲ್ಡ್ ಆಗುವ ಮೂಲಕ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇಂತಹ ಆಟಗಾರರು ವಿಜಯ್ ಹಜಾರೆ ಟ್ರೋಫಿ 2025ರ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಶಿಷ್ಯನ ಹೆಸರು ಸೇರ್ಪಡೆಗೊಂಡಿದೆ. ಒಂದೇ ಓವರ್ನಲ್ಲಿ 6 ಬೌಂಡರಿ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ತಮಿಳುನಾಡಿನ ಸ್ಟಾರ್ ಬ್ಯಾಟರ್ ಜಗದೀಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಅವರು ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಈ ಇನ್ನಿಂಗ್ಸ್ನಲ್ಲಿ ಅವರು 10 ಬೌಂಡರಿಗಳನ್ನು ಸಿಡಿಸಿದ್ದಾರೆ. ಜಗದೀಸನ್ ಅವರ ಇನಿಂಗ್ಸ್ನ ವಿಶೇಷತೆ ಏನೆಂದರೆ, ಅವರು 6 ಎಸೆತಗಳಲ್ಲಿ ಆರು ಬೌಂಡರಿಗಳನ್ನು ಚಚ್ಚಿ 29 ರನ್ ಗಳಿಸಿದ್ದಾರೆ.

ರಾಜಸ್ತಾನ ತಂಡ ತಮಿಳುನಾಡಿನ ಗೆಲುವಿಗೆ 268 ರನ್ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ತಮಿಳುನಾಡು ಪರ ಜಗದೀಶನ್ ಉತ್ತಮ ಆರಂಭ ನೀಡಿದರು. ಇನಿಂಗ್ಸ್ನ ಎರಡನೇ ಓವರ್ನಲ್ಲಿಯೇ ಜಗದೀಶನ್ ಅದ್ಭುತ ಬ್ಯಾಟಿಂಗ್ ಮಾಡಿದರು. ರಾಜಸ್ಥಾನದ ವೇಗದ ಬೌಲರ್ ಅಮನ್ ಸಿಂಗ್ ಶೇಖಾವತ್ ಅವರನ್ನು ಎದುರಿಸಿದ ಜಗದೀಸನ್ 6 ಬೌಂಡರಿ ಬಾರಿಸಿ ಐಪಿಎಲ್ ಫ್ರಾಂಚೈಸಿಗಳ ಚಿತ್ತ ಕದ್ದಿದ್ದಾರೆ.
ಅಮನ್ ಸಿಂಗ್ ಶೇಖಾವತ್ ಓವರ್ನ 6 ಎಸೆತಗಳಲ್ಲಿ 6 ಬೌಂಡರಿಗಳನ್ನು ಬಾರಿಸುವ ಮೂಲಕ ಜಗದೀಶನ್ ಸಾಧನೆ ಮಾಡಿದರು. ಅಲ್ಲದೆ, ಒಂದು ಎಸೆತದಲ್ಲಿ ಬಂದ ಬೌಂಡರಿಯನ್ನು ವೈಡ್ ಎಂದು ಪರಿಗಣಿಸಲಾಯಿತು. ಹೀಗಾಗಿ ಅಮನ್ ಸಿಂಗ್ ಶೇಖಾವತ್ ಒಂದೇ ಓವರ್ನಲ್ಲಿ 7 ಬೌಂಡರಿಗಳನ್ನು ಬಿಟ್ಟುಕೊಟ್ಟರು. ಜಗದೀಶನ್ 52 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 65 ರನ್ ಗಳಿಸಿದರು.
ವಿಜಯ್ ಹಜಾರೆ ಟ್ರೋಫಿಯ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ತಾನ ವಿರುದ್ಧ ತಮಿಳುನಾಡು ಸೋಲು ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 267 ರನ್ ಕಲೆಹಾಕಿತು. ರಾಜಸ್ತಾನ ಪರ ಅಭಿಜಿತ್ ತೋಮರ್ ಅದ್ಭುತ ಬ್ಯಾಟಿಂಗ್ ಮಾಡಿ 111 ರನ್ಗಳನ್ನು ಗಳಿಸಿದರು. ನಾಯಕ ಮಹಿಪಾಲ್ ಲೊಮ್ರೋರ್ ಕೂಡ 49 ಎಸೆತಗಳಲ್ಲಿ 60 ರನ್ಗಳ ಅಮೋಘ ಇನ್ನಿಂಗ್ಸ್ ಕಟ್ಟಿದರು.
ರಾಜಸ್ಥಾನ ನೀಡಿದ 267 ರನ್ಗಳ ಗುರಿ ಬೆನ್ನಟ್ಟಿದ ತಮಿಳುನಾಡಿಗೆ ತುಷಾರ್ ಮತ್ತು ಎನ್ ಜಗದೀಸನ್ ಉತ್ತಮ ಆರಂಭ ನೀಡಿದರು. ಆದರೆ, ಉಳಿದ ತಮಿಳುನಾಡಿನ ಬ್ಯಾಟರ್ಗಳು ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ ತಮಿಳುನಾಡು ತಂಡ 248 ರನ್ಗಳಿಗೆ ಸರ್ವಪತನವಾಗುವ ಮೂಲಕ 19 ರನ್ಗಳ ಸೋಲನುಭವಿಸಿತು. ಇದರೊಂದಿಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಿಂದ ತಮಿಳುನಾಡು ಔಟಾಗಿದೆ.