
ಬೆಂಗಳೂರು ಫೆಬ್ರವರಿ 11: ವಿಧಾನಸೌಧದ ನಿಮಾತೃ ಕೆಂಗಲ್ ಹನುಮಂತಯ್ಯ ಅವರ ನೆನಪಿನಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೇಟ್ ಟೂರ್ನಮೆಂಟ್ ನಲ್ಲಿ ನಾಶ್ ಕ್ರಿಕೆಟರ್ಸ್ ಜಯಭೇರಿ ಬಾರಿಸಿದೆ.
ನಗರದ ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. 8 ಓವರ್ ಗಳ ಸೀಮಿತ ಪಂದ್ಯಾವಳಿಯಲ್ಲಿ ಹೆಬ್ಬಾಳದ ಅಚೀವರ್ಸ್ ತಂಡ ಮೂರನೇ ಸ್ಥಾನ ಪಡೆದುಕೊಂಡು 25 ಸಾವಿರ ರೂಪಾಯಿಗಳ ಬಹುಮಾನ ಪಡೆದುಕೊಂಡರೆ, ಜಯ ಕರ್ನಾಟಕ ತಂಡ 2 ನೇ ಸ್ಥಾನ ಪಡೆದುಕೊಂಡು 50 ಸಾವಿರ ರೂಪಾಯಿಗಳ ಬಹುಮಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಮಾಜಿ ಕ್ರಿಕೇಟಿಗ ದೊಡ್ಡ ಗಣೇಶ್ ಬಹುಮಾನ ವಿತರಿಸಿ ಮಾತನಾಡಿದರು. ಪಂದ್ಯಾವಳಿಯಲ್ಲಿ ಗೆಲ್ಲುವುದಕ್ಕಿಂತಾ ಭಾಗವಹಿಸುವುದು ಮುಖ್ಯ. ಸ್ಪರ್ಧಾತ್ಮಕ ಮನೋಭಾವದಿಂದ ಆಟದಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಕೆಂಗಲ್ ಹನುಂತಯ್ಯ ಮೆಮೋರಿಯಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಮಾತನಾಡಿ, ರಾಜ್ಯದ ಮೊದಲ ಚುನಾಯಿತ ಮುಖ್ಯಮಂತ್ರಿ ಹಾಗೂ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ರಾಜ್ಯಕ್ಕೆ ಹಾಗೂ ದೇಶಕ್ಕೆ ನೀಡಿದ ಕೊಡುಗೆ ಅಪಾರ. ರಾಜ್ಯದ ನಿರ್ಮಾಣಕ್ಕೆ ಸುಸ್ಥಿರ ಅಡಿಪಾಯ ಹಾಕಿದವರು. ಅಲ್ಲದೆ, ರಾಜ್ಯದ ಹಾಗೂ ದೇಶದ ಅಭಿವೃದ್ದಿಗೆ ತಮ್ಮದೇ ಅದ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಮಹನೀಯರ ಬಗ್ಗೆ ನಮ್ಮ ಯುವ ಜನಾಂಗದಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ "ಕೆಂಗಲ್ ಕಪ್" ಟೆನ್ನಿಸ್ ಬಾಲ್ ಟೂರ್ನಮೆಂಟನ್ನು ಆಯೋಜಿಸಿದ್ದೆವು ಎಂದರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಹೆಚ್ ಸಿ ಚಂದ್ರಶೇಖರ್, ಎನ್ ಸುರೇಶ್, ಕೆ ನರಸಿಂಗ ರಾವ್, ಎಂ ವಿಶ್ವನಾಥ್, ಕೆ ಎಂ ಮಂಜುನಾಥ್ ಭಾಗವಹಿಸಿದ್ದರು.