
ಲಂಡನ್: ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋಲು ಕಂಡಿರುವ ಟೀಮ್ ಇಂಡಿಯಾ ಮುಂದೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಎದುರುಗೊಳ್ಳಲಿದೆ. ಈ ಟೆಸ್ಟ್ ಸರಣಿಗೆ ಭಾರತದ ಪ್ರಮುಖ ಅನುಭವಿ ವೇಗಿಯನ್ನು ಕರೆಸಿಕೊಳ್ಳಬೇಕು ಎಂದು ಇಂಗ್ಲೆಂಡ್ ಮಾಜಿ ನಾಯಕ ಸಾಸೆರ್ ಹುಸೇನ್ ಸಲಹೆ ನೀಡಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ಟೆಸ್ಟ್ ತಂಡದಲ್ಲಿ ಈಗಾಗಲೇ ವೇಗಿಗಳ ಸಾಲಿನಲ್ಲಿ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್ ಇದ್ದಾರೆ ಇನ್ನು ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್ ಮತ್ತು ಅರ್ಝನ್ ನಾಗ್ವಾಸ್ವಾಲ್ಲ ಮೀಸಲು ಆಟಗಾರರ ಸಾಲಿನಲ್ಲಿದ್ದಾರೆ.
ಭಾರತ ತಂಡದಲ್ಲಿ ಇಷ್ಟು ವೇಗಿಗಳಿದ್ದರೂ ನಾಸೆರ್ ಹುಸೇನ್ ಒಬ್ಬ ಬೌಲರ್ ಮಿಸ್ ಆಗಿದ್ದಾರೆ ಎಂದಿದ್ದಾರೆ. ಅವರೆಂದರೆ ಭುವನೇಶ್ವರ್ ಕುಮಾರ್. ಭುವನೇಶ್ವರ್ ಕುಮಾರ್ ಶ್ರೀಲಂಕಾಕ್ಕೆ ಪ್ರವಾಸ ಹೋಗಲಿರುವ ನಿಯಮಿತ ಓವರ್ಗಳ ಮತ್ತೊಂದು ಭಾರತ ತಂಡಕ್ಕೆ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ತಂಡಕ್ಕೆ ಶಿಖರ್ ಧವನ್ ನಾಯಕರಾಗಿದ್ದಾರೆ.
"ಇಂಗ್ಲೆಂಡ್ ಸರಣಿಗೆ ಭುವನೇಶ್ವರ್ ಕುಮಾರ್ಗೆ ಕರೆ ನೀಡಲೇಬೇಕು. ಅವರಿಗೆ ಗಾಯದ ಭೀತಿಯಿದ್ದರೂ ಏನಿಲ್ಲವೆಂದರೂ ಎರಡು ಮೂರು ಟೆಸ್ಟ್ ಪಂದ್ಯಗಳಂತೂ ಆಡಿಯೇ ಆಡ್ತಾರೆ. ಇದರಿಂದ ಭಾರತ ತಂಡಕ್ಕೆ ತುಂಬಾ ಅನುಕೂಲವಾಗಲಿದೆ," ಎಂದು ಏಜಸ್ ಬೌಲ್ ಸ್ಟೇಡಿಯಂನಲ್ಲಿ ಹುಸೇನ್ ಅಭಿಪ್ರಾಯಿಸಿದ್ದಾರೆ.