
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಸರಣಿ ಸೋಲುವ ಮೂಲಕ ಟೀಮ್ ಇಂಡಿಯಾ ನಿರಾಶಾದಾಯಕ ಆರಂಭ ಕಂಡಿತ್ತಾದರೂ ಮತ್ತೆ ಕಮ್ಬ್ಯಾಕ್ ಮಾಡಿದ ಕೊಹ್ಲಿ ಪಡೆ ಟಿ20ಐ ಸರಣಿಯನ್ನು ಗೆದ್ದುಕೊಂಡಿತ್ತು. ಟಿ20ಐ ಸರಣಿ ಗೆಲ್ಲಲು ಸ್ಫೂರ್ತಿ ತುಂಬಿದ್ದು ಕೊನೇಯ ಏಕದಿನ ಪಂದ್ಯದ ಗೆಲುವು. ಆ ಪಂದ್ಯದಲ್ಲಿ ಭಾರತದ ವೇಗಿ ಟಿ ನಟರಾಜನ್ ಅದ್ಭುತ ಪ್ರದರ್ಶನ (3 ವಿಕೆಟ್) ನೀಡಿದ್ದರು.
ಏಕದಿನ ಸರಣಿಯನ್ನು ಭಾರತ 2-1ರಿಂದ ಕಳೆದುಕೊಂಡಿದ್ದರೆ, ಟಿ20ಐ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು. ಟಿ20ಐ ಸರಣಿ ಗೆಲ್ಲುವಲ್ಲೂ ನಟರಾಜನ್ ಪಾತ್ರ ಮಹತ್ವದ್ದಾಗಿತ್ತು. 3 ಇನ್ನಿಂಗ್ಸ್ ಆಡಿದ್ದ ನಟರಾಜನ್ 3+2+1 ವಿಕೆಟ್ ಪಡೆದಿದ್ದರು. ಭಾರತ ತಂಡದಲ್ಲಿ ಮಿಂಚುತ್ತಿರುವ ನಟರಾಜನ್ಗೆ ಭಾರತದ ಮತ್ತೊಬ್ಬ ವೇಗಿ ಖಲೀಲ್ ಅಹ್ಮದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಟರಾಜನ್ ಆಡುವ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುವ ಖಲೀಲ್ ಮಾತನಾಡಿ, 'ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ನಟರಾಜನ್ ತುಂಬಾ ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಿದ್ದಾರೆ. ನಿಜಕ್ಕೂ ಖುಷಿಯಾಗಿದೆ,' ಎಂದಿದ್ದಾರೆ.
ಭಾರತ ತಂಡ 2018-19ರಂದು ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದಾಗ ಭಾರತ ಏಕದಿನ, ಟಿ20 ತಂಡದಲ್ಲಿ ಖಲೀಲ್ ಅಹಮದ್ ಇದ್ದರು. ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ನಿಯಮಿತ ಓವರ್ಗಳ ಕ್ರಿಕೆಟ್ ಈಗಾಗಲೇ ಮುಗಿದಿದ್ದು, ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.