ಆಗಸ್ಟ್ 18 ಭಾನುವಾರ, ಕಳೆದ 10 ವರ್ಷಗಳಿಂದ ಭಾರತ ಎದುರು ಆಸ್ಟ್ರೇಲಿಯಾ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿಲ್ಲ. ಈ ಸೋಲಿನ ಹತಾಶೆಯಲ್ಲಿರುವ ಕಾಂಗೂರು ಪಡೆ ಭಾರತದ ಎದುರು ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಟೀಮ್ ಇಂಡಿಯಾ ಕೂಡ ತನ್ನ ಗೆಲುವಿನ ಯಾತ್ರೆಯನ್ನು ಮುಂದುವರೆಸಲು ಭರ್ಜರಿ ಯೋಜನೆ ರೂಪಿಸುತ್ತಿದೆ.
ಈ ವರ್ಷಾಂತ್ಯದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಭಾರತ ಪ್ರವಾಸ ಮಾಡಲಿದೆ. ಆದರೆ ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಸ್ಟಾರ್ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಅವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೂಲಕ ಭಾರತ ವಿರುದ್ಧದ 10 ವರ್ಷಗಳ ಸೋಲಿಗೆ ಸೇಡು ತೀರಿಸಿಕೊಳ್ಳಲಿದ್ದೇವೆ ಎಂದು ಲಿಯಾನ್ ಹೇಳಿದ್ದಾರೆ.

'ನಮ್ಮ ಕನಸು 10 ವರ್ಷಗಳಿಂದ ನನಸಾಗದೆ ಉಳಿದಿದೆ. ಇದೀಗ ಈ ಕನಸು ನನಸಾಗುವ ಸಮಯ ಬಂದಿದೆ. ವಿಶೇಷವಾಗಿ ನಮ್ಮ ಮನೆಯಲ್ಲಿ ವಿಷಯಗಳನ್ನು ಬದಲಾಯಿಸಲು ನಾವು ಹತಾಶರಾಗಿದ್ದೇವೆ ಎಂದು ನನಗೆ ತಿಳಿದಿದೆ. ನನ್ನನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ. ಆದರೆ ಭಾರತವು ಸೂಪರ್ಸ್ಟಾರ್ ಮತ್ತು ಸವಾಲಿನ ತಂಡವಾಗಿದೆ. ಆದರೆ ನಾನು ಟ್ರೋಫಿಯನ್ನು ಮರಳಿ ಪಡೆಯಲು ಹತಾಶನಾಗಿದ್ದೇನೆ ಎಂದು ಲಿಯಾನ್ ತಿಳಿಸಿದ್ದಾರೆ.
2014-15 ರಿಂದ ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ವಶಪಡಿಸಿಕೊಂಡಿಲ್ಲ. ತವರಿನಲ್ಲಿ ಸತತ ಎರಡು ಸರಣಿಗಳನ್ನು ಸೋತಿದೆ. 2020-21 ರಲ್ಲಿ ಭಾರತವು 0-1 ರಿಂದ ಹಿಂದಿತ್ತು. ಅಡಿಲೇಡ್ನಲ್ಲಿ 36 ರನ್ಗಳಿಗೆ ಆಲೌಟ್ ಆದರೆ, ನಂತರ ಭಾರತ ತಂಡವು ಮೆಲ್ಬೋರ್ನ್ನಲ್ಲಿ ಗೆದ್ದು, ಬ್ರಿಸ್ಬೇನ್ನಲ್ಲಿ ಇತಿಹಾಸವನ್ನು ಸೃಷ್ಟಿಸಿತು. ಕೊನೆಯ ಪಂದ್ಯವನ್ನು ಸಿಡ್ನಿಯಲ್ಲಿ ಗೆದ್ದು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಂಡಿತ್ತು.
ಕಾಂಗೂರು ಪಡೆ ಕ್ರಿಕೆಟ್ನ ಎಲ್ಲಾ ಮಾದರಿಯಲ್ಲೂ ಅದ್ಭುತ ಪ್ರದರ್ಶನ ನೀಡಿ ಟ್ರೋಫಿಗಳನ್ನು ಗೆದ್ದಿದೆ. ಆದರೆ ಆಸ್ಟ್ರೇಲಿಯಾ ತಂಡವು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆಲ್ಲದಿರುವುದು ಆಟಗಾರರಿಗೆ ತುಂಬಾ ನೋವುಂಟು ಮಾಡಿದೆ.