
ಟೀಂ ಇಂಡಿಯಾ ಹಾಗೂ ಮುಂಬೈ ವೇಗಿ ಅಬೇ ಕುರುವಿಲ್ಲಾ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ಸೇರಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಬಿಸಿಸಿಐ ಮೂರು ವಲಯದ ಆಯ್ಕೆ ಸಮಿತಿ ಸದಸ್ಯರನ್ನು ನೇಮಕ ಮಾಡಬೇಕಾಗಿದೆ.
ಉತ್ತರ ವಲಯದ ಸರನ್ ದೀಪ್ ಸಿಂಗ್, ಪೂರ್ವ ವಲಯದ ದೇವಾಂಗ್ ಗಾಂಧಿ ಹಾಗೂ ಪಶ್ಚಿಮ ವಲಯದ ಜತಿನ್ ಪರಾಂಜಪೆ ಅವರ ಅವಧಿ ಮುಕ್ತಾಯವಾಗಿದ್ದು, ಈ ಮೂರು ಸ್ಥಾನಗಳನ್ನು ತುಂಬಬೇಕಿದೆ.
ಅಬೇ ಕುರುವಿಲ್ಲಾ ಅವರು ಟೀಂ ಇಂಡಿಯಾ ಪರ 10 ಟೆಸ್ಟ್ ಪಂದ್ಯ ಹಾಗೂ 25 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿ, 25 ವಿಕೆಟ್ ಪಡೆದಿದ್ದಾರೆ. ಆಯ್ಕೆದಾರರಾಗಲು ನವೆಂಬರ್ 13ರಂದೇ ಸಮಿತಿ ಮುಂದೆ ಅರ್ಜಿ ಹಾಕಿದ್ದಾರೆ.
20018-12ರ ಅವಧಿಯಲ್ಲಿ ಅಬೇ ಕುರುವಿಲ್ಲಾ ಅವರು ಜ್ಯೂನಿಯರ್ ಆಯ್ಕೆ ಸಮಿತಿಯಲ್ಲಿದ್ದಾಗಲೇ 2012ರಲ್ಲಿ ಭಾರತ ಅಂಡರ್ 19 ವಿಶ್ವಕಪ್ ಗೆದ್ದಿತ್ತು. ನಂತರ ಮುಂಬೈನಲ್ಲಿ ಮುಖ್ಯ ಆಯ್ಕೆದಾರರಾಗಿದ್ದರು. ನವಿ ಮುಂಬೈ ಮೂಲದ 53 ವರ್ಷ ವಯಸ್ಸಿನ ಕುರುವಿಲ್ಲಾ ಅವರಿಗೆ ಮಾಜಿ ವೇಗಿ ಅಜಿತ್ ಅಗರ್ಕರ್ ಅವರು ಪ್ರತಿಸ್ಪರ್ಧಿಯಾಗಿದ್ದಾರೆ.
ಐದು ವಲಯದ ಸಮಿತಿಯಲ್ಲಿ ಸುನಿಲ್ ಜೋಶಿ (ದಕ್ಷಿಣ ವಲಯ) ಹಾಗೂ ಹರ್ವಿಂದರ್ ಸಿಂಗ್ (ಕೇಂದ್ರ ವಲಯ) ರನ್ನು ಮಾರ್ಚ್ ತಿಂಗಳಿನಲ್ಲಿ ಆಯ್ಕೆ ಮಾಡಲಾಗಿದ್ದು, ಉಳಿದ ಮೂರು ವಲಯಗಳ ಆಯ್ಕೆ ಸಮಿತಿದಾರರನ್ನು ನೇಮಕ ಮಾಡಬೇಕಾಗಿದೆ.