ಬಾಂಗ್ಲಾದೇಶ ವಿರುದ್ಧ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದು ಅದ್ಭುತ ಸಾಧನೆ ಮಾಡಿದೆ. ಇನ್ನೊಂದೆಡೆ ಚೆನ್ನೈ ಟೆಸ್ಟ್ ಸೋಲಿನ ನಂತರ ಬಾಂಗ್ಲಾದೇಶ ನಾಯಕ ನಜ್ಮುಲ್ ಹಸನ್ ಶಾಂತೊ ಕೋಪಗೊಂಡಿದ್ದಾರೆ.
ನಜ್ಮುಲ್ ಹಸನ್ ಶಾಂತೊ ಅವರು ತಮ್ಮದೇ ತಂಡದ ಆಟಗಾರರನ್ನು ಸೋಲಿಗೆ ಹೊಣೆಗಾರಿಕೆ ಮಾಡಿದ್ದಾರೆ. ಬಹುಮುಖ್ಯವಾಗಿ ಬಾಂಗ್ಲಾದೇಶದ ಟಾಪ್ ಆರ್ಡರ್ ಬ್ಯಾಟರ್ಗಳ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ಪಂದ್ಯದ ಸೋಲಿನ ಬಳಿಕ ಮಾತನಾಡಿದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹಸನ್ ಶಾಂತೊ, 'ಮೊದಲ ಇನಿಂಗ್ಸ್ನಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಅದು ಪಂದ್ಯದ ಪ್ರಮುಖ ಹಂತವಾಗಿತ್ತು. ಟಾಪ್ ಆರ್ಡರ್ನಲ್ಲಿ ಉತ್ತಮ ಜೊತೆಯಾಟ ಇದ್ದಿದ್ದರೆ ನಾವು ಉತ್ತಮ ಸ್ಥಿತಿಯಲ್ಲಿರುತ್ತಿದ್ದೆವು. ಮೊದಲ ಇನಿಂಗ್ಸ್ನಲ್ಲಿ ಟಾಪ್ ಆರ್ಡರ್ ಬ್ಯಾಟರ್ಗಳು ಸುಧಾರಿಸಿಕೊಳ್ಳುವುದು ಸವಾಲಾಗಿತ್ತು. ಈ ಸವಾಲನ್ನು ನಾವು ಹೇಗೆ ಎದುರಿಸುತ್ತಿದ್ದೇವೆ ಎಂಬುದು ಮುಖ್ಯವಾಗಿತ್ತು. ನಾವು ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದೆವು. ಆದರೆ ನಾವು ಬಯಸಿದ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಪಂದ್ಯದಲ್ಲಿ ವಿಕೆಟ್ ಉಳಿಸಿಕೊಂಡು ಆಡುವುದು ಉತ್ತಮ. ಆದರೆ ಇಂದು ಅದು ಸಾಕಾಗಲಿಲ್ಲ. ಇದು ಎರಡನೇ ಟೆಸ್ಟ್ನಲ್ಲಿ ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತದೆ. ಆರಂಭಿಕ ಜೋಡಿಗೆ ಈ ರನ್ಗಳು ಬಹಳ ಮುಖ್ಯವಾಗಿವೆ. ಹೀಗಾಗಿ ಮುಂದಿನ ಟೆಸ್ಟ್ ಪಂದ್ಯದಲ್ಲಿ ಅವರಿಂದ ಉತ್ತಮ ಪ್ರದರ್ಶನವನ್ನು ನಾವು ನಿರೀಕ್ಷಿಸುತ್ತೇವೆ' ಎಂದು ನಜ್ಮುಲ್ ಹಸನ್ ಶಾಂತೊ ಹೇಳಿದ್ದಾರೆ.
'ನನ್ನ ಯೋಜನೆ ಸ್ಪಷ್ಟವಾಗಿತ್ತು. ಪ್ರತಿಯೊಬ್ಬರೂ ವಿಭಿನ್ನ ತಂತ್ರವನ್ನು ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ. ಭಾರತ ಮುಂದಿನ ಪಂದ್ಯವನ್ನು ವಿಭಿನ್ನ ತಂತ್ರದೊಂದಿಗೆ ಆಡಲಿದೆ. ಮೊದಲ ಟೆಸ್ಟ್ನ ನಾಲ್ಕನೇ ದಿನದ ಬೆಳಿಗ್ಗೆ ಬ್ಯಾಟಿಂಗ್ಗೆ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ ಎಂದು ಸೋಲಿಗೆ ಕಾರಣವನ್ನು ಬಾಂಗ್ಲಾದೇಶ ತಂಡದ ನಾಯಕ ಕೊಟ್ಟಿದ್ದಾರೆ.
ಎರಡನೇ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶದ ಆರಂಭಿಕ ಜೋಡಿ ಮೊದಲ ವಿಕೆಟ್ಗೆ 62 ರನ್ ಸೇರಿಸಿತು. ಆದರೆ ಬಾಂಗ್ಲಾದೇಶ 4 ವಿಕೆಟ್ಗೆ 158 ರನ್ಗಳಿಂದ ನಾಲ್ಕನೇ ದಿನದಾಟ ಆರಂಭಿಸಿತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬೌಲಿಂಗ್ ಎದುರಿಸಲು ಶಾಂತೊ ಕೂಡ ಕಷ್ಟಪಡುತ್ತಿದ್ದರು.
ಶಕೀಬ್ ಅಲ್ ಹಸನ್ ಮತ್ತು ಶಾಂತೊ ಅವರ ಜೊತೆಯಾಟವನ್ನು ಮುರಿಯಲು, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಮ್ಮ ಸ್ಪಿನ್ ಅಸ್ತ್ರ ರವಿಚಂದ್ರನ್ ಅಶ್ವಿನ್ ಅವರನ್ನು ದಾಳಿಗೆ ಕರೆತಂದರು. ಅಶ್ವಿನ್ ತಮ್ಮ ನಾಯಕನನ್ನು ನಿರಾಸೆಗೊಳಿಸಲಿಲ್ಲ. ಇದಾದ ಬಳಿಕ ಉಳಿದ ವಿಕೆಟ್ಗಳು 40 ರನ್ಗಳ ಅಂತರದಲ್ಲಿ ಪತನಗೊಂಡವು. ಎರಡನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ ಆರು ವಿಕೆಟ್ಗಳನ್ನು ಪಡೆದು ಮಿಂಚಿದರು.