
ಮೌಂಟ್ ಮೌಂಗನ್ಯುಯಿ, ಫೆಬ್ರವರಿ 12: ಮಂಗಳವಾರ (ಫೆಬ್ರವರಿ 11) ಮೌಂಟ್ ಮೌಂಗನ್ಯುಯಿಯಲ್ಲಿ ನಡೆದಿದ್ದ ನ್ಯೂಜಿಲೆಂಡ್-ಭಾರತ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮತ್ತು ನ್ಯೂಜಿಲೆಂಡ್ ಆಟಗಾರ ಜೇಮ್ಸ್ (ಜಿಮ್ಮಿ) ನೀಶಮ್ ನಡುವೆ ಕ್ಷಣಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಭಾರತದ ಇನ್ನಿಂಗ್ಸ್ನ 19.5ನೇ ಓವರ್ನಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಐಯ್ಯರ್ ಕ್ರೀಸ್ನಲ್ಲಿದ್ದಾಗ ನೀಶಮ್ ಮತ್ತು ರಾಹುಲ್ ಮಧ್ಯೆ ಸಣ್ಣಗಿನ ಮುನಿಸು ಬಂದು ಹೋಗಿತ್ತು. ಆದರೆ ಆ ಹೊತ್ತು ಇಬ್ಬರೂ ಸಿಟ್ಟನ್ನು ದೊಡ್ಡದಾಗಿ ಪ್ರದರ್ಶಿಸಲಿಲಿಲ್ಲ. ಅಲ್ಲದೆ, ನೀಶಮ್ ಮೇಲಿನ ಆ ಕ್ಷಣದ ಕೋಪವನ್ನು ರಾಹುಲ್ ಪ್ರದರ್ಶಿದ ಪರಿಯೇ ವಿಭಿನ್ನವಾಗಿತ್ತು.
ರನ್ ಗಳಿಸಲೆತ್ನಿಸುತ್ತಿದ್ದಾಗ ತಾನು ಅಚಾನಕ್ ಅಡ್ಡ ಬಂದಿದ್ದಕ್ಕೆ ಸಿಟ್ಟಾದ ರಾಹುಲ್ಗೆ ಜೇಮ್ಸ್ ನೀಶಮ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಸಿಟ್ಟಾದ ಫೋಟೋದೊಂದಿಗೆ 'ಪೇಪರ್, ಸಿಸರ್ಸ್, ರಾಕ್ ('ಪೇಪರ್, ಕತ್ತರಿ, ಕಲ್ಲುಗಳನ್ನು ಹಿಡಿದು ಇನ್ಮುಂದೆ ಆಡಬೇಕು' ಅನ್ನೋ ಅರ್ಥದಲ್ಲಿ) ಎಂದು ಬರೆದು, ಜೊತೆಗೊಂದು ಹಲ್ಲು ಕಿಸಿಯುವ ಇಮೋಜಿಯನ್ನು ಸೇರಿಸಿ ನೀಶಮ್ ಟ್ವೀಟ್ ಮಾಡಿದ್ದಾರೆ.
ನೀಶಮ್ ತಮಾಷೆಯಾಗಿ ಮಾಡಿರುವ ಈ ಟ್ವೀಟನ್ನು ಐಸಿಸಿ ರೀ ಟ್ವೀಟ್ ಮಾಡಿ, 'ಬಹುಶಃ ನಾವು ಸೂಪರ್ ಓವರ್ನ ಬದಲು ಇದನ್ನು ಶುರುಮಾಡಬೇಕೇನೋ?,' ಎಂದು ಇನ್ನೊಂದು ತರಲೆ ಸಾಲು ಬರೆದುಕೊಂಡಿದೆ. ಮೌಂಟ್ ಮೌಂಗನ್ಯುಯಿ ಪಂದ್ಯದಲ್ಲಿ ರಾಹುಲ್ 112 ರನ್ ಬಾರಿಸಿ ಭಾರತ ಪರ ಗೆಲುವಿನ ಹೋರಾಟ ನಡೆಸಿದ್ದರಾದರೂ ತಂಡ ಪಂದ್ಯದಲ್ಲಿ 5 ವಿಕೆಟ್ ಸೋಲನುಭವಿಸಿತ್ತು.