
ನೇಪಾಳ ಕ್ರಿಕೆಟ್ ಅಭಿಮಾನಿಗಳ ಅಭಿಮಾನ ಏನು ಎನ್ನುವುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ನ ಪಂದ್ಯದಲ್ಲಿ ನೇಪಾಳ ಯುಎಇ ವಿರುದ್ಧ 9 ರನ್ಗಳ ಜಯ ದಾಖಲಿಸಿದೆ. ನೇಪಾಳದ ಕೀರ್ತಿಪುರದಲ್ಲಿ ಈ ಪಂದ್ಯ ನಡೆಯಿತು.
ಪಂದ್ಯಕ್ಕಿಂತ ಹೆಚ್ಚಾಗಿ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಗಳನ್ನು ಕಂಡು ಕ್ರಿಕೆಟ್ ಜಗತ್ತು ಮೂಕವಿಸ್ಮಿತವಾಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟ್ ಆಟವನ್ನು ಆರಾಧಿಸುವ ಅಭಿಮಾನಿಗಳು ಹೆಚ್ಚಿದ್ದಾರೆ. ಭಾರತ ತಂಡ ವಿಶ್ವದ ಯಾವುದೇ ಮೈದಾನದಲ್ಲಿ ಆಡಿದರೂ ಸ್ಟೇಡಿಯಂ ಹೌಸ್ಫುಲ್ ಆಗುತ್ತದೆ.
ಆದರೆ, ಈಗ ತಾನೆ ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ನೇಪಾಳ ತಂಡಕ್ಕೆ ಅಲ್ಲಿನ ಅಭಿಮಾನಿಗಳೇ ದೊಡ್ಡ ಶಕ್ತಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿ, ಕೀರ್ತಿಪುರದ ತ್ರಿಭುವನ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನವು ಅಭಿಮಾನಿಗಳಿಂದ ತುಂಬಿತ್ತು.
ಮೈದಾನದಲ್ಲಿ ಜಾಗ ಸಾಕಾಗದೆ ಅಭಿಮಾನಿಗಳು ಕ್ರೀಡಾಂಗಣದ ಸುತ್ತ ಇದ್ದ ಮರಗಳನ್ನು ಏರಿ ಪಂದ್ಯವನ್ನು ವೀಕ್ಷಿಸುವ ಮೂಲಕ ತಮ್ಮ ತಂಡಕ್ಕೆ ಬೆಂಬಲ ನೀಡಿದರು. ಹಲವು ಮಾಜಿ ಕ್ರಿಕೆಟಿಗರು ಈ ಚಿತ್ರವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದ ನೇಪಾಳ
ಅಪಾರ ಅಭಿಮಾನಿಗಳ ಮುಂದೆ ಪಂದ್ಯವನ್ನಾಡಿದ ನೇಪಾಳ, ಅವರನ್ನು ನಿರಾಸೆಗೊಳಿಸಲಿಲ್ಲ. ಯುಎಇ ವಿರುದ್ಧ 9 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಮನರಂಜನೆ ನೀಡಿದರು. ಟಾಸ್ ಗೆದ್ದ ಯುಎಇ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.
ನಾಯಕ ಮುಹಮ್ಮದ್ ವಾಸಿಮ್ 49 ಎಸೆತಗಳಲ್ಲಿ 69 ರನ್ ಗಳಿಸಿದರೆ, ಅರವಿಂದ್ 138 ಎಸೆತಗಳಲ್ಲಿ 94 ರನ್ ಗಳಿಸಿದರು. ಆಸಿಫ್ ಖಾನ್ ಕೇವಲ 42 ಎಸೆತಗಳಲ್ಲಿ 4 ಬೌಂಡರಿ 11 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಗಳಿಸಿದರು. ಆಸಿಫ್ ಖಾನ್ ಶತಕದ ನೆರವಿನಿಂದ ಯುಎಇ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 310 ರನ್ ಗಳಿಸಿತು.

ಪಂದ್ಯಕ್ಕೆ ಅಡ್ಡಿಯಾದ ಮಳೆ
ನಂತರ ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನೇಪಾಳ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭದಲ್ಲಿ ವಿಕೆಟ್ ಕಳೆದುಕೊಂಡರು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಮಿಂಚಿದರು. ಆರಂಭಿಕ ಆಟಗಾರ ಕುಶಾಲ್ ಭುರ್ತೆಲ್ 35 ಎಸೆತಗಳಲ್ಲಿ 3 ಬೌಂಡರಿ 4 ಸಿಕಸ್ರ್ ನೆರವಿನಿಂದ 50 ರನ್ ಗಳಿಸಿ ಔಟಾದರು.
ಭಿಮ್ ಶಾರ್ಕಿ 67 ರನ್ ಗಳಿಸಿದರೆ, ಆರಿಫ್ ಶೇಕ್ 52 ರನ್ ಗಳಿಸಿದರು. ಗುಲ್ಸನ್ ಜಾ 48 ಎಸೆತಗಳಲ್ಲಿ 50 ರನ್ ಗಳಿಸಿದರು. 44 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿದ್ದ ನೇಪಾಳ ಗೆಲುವಿನ ಸಮೀಪದಲ್ಲಿದ್ದಾಗ ಮಳೆ ಅಡ್ಡಿಪಡಿಸಿತು. ನಂತರ ಮಳೆಯಿಂದಾಗಿ ಪಂದ್ಯವನ್ನು ಮುಂದುವರೆಸದ ಕಾರಣ ಡಿಎಲ್ಎಸ್ ನಿಯಮದಂತೆ ವಿಜೇತರನ್ನು ನಿರ್ಣಯಿಸಲಾಯಿತು. ಡಿಎಲ್ಎಸ್ ನಿಯಮದ ಪ್ರಕಾರ 9 ರನ್ಗಳಿಂದ ಮುಂದಿದ್ದ ನೇಪಾಳ ತಂಡ ಜಯ ಸಾಧಿಸಿ ಸಂಭ್ರಮಿಸಿತು.