ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಬುಧವಾರ (ಅಕ್ಟೋಬರ್ 16) ಆರಂಭವಾಗಲಿದೆ. ಬಾಂಗ್ಲಾದೇಶವನ್ನು ಸೋಲಿಸಿದ ನಂತರ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧವೂ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊಲದ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಪ್ರಸ್ತುತ ವಿಶ್ವಕ್ರಿಕೆಟ್ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಬಹುತೇಕ ತಂಡಗಳು ಟೀಮ್ ಇಂಡಿಯಾ ಎಂದರೆ ಹೆದರುತ್ತಿವೆ. ಇದೀಗ ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ತಂಡ ಕೂಡ ಟೀಮ್ ಇಂಡಿಯಾದ ಇಬ್ಬರು ಆಟಗಾರರಿಗೆ ಬಹಳ ಎಚ್ಚರಿಕೆ ವಹಿಸಿದೆ. ಈ ಬಗ್ಗೆ ಕಿವೀಸ್ ಪಡೆಯ ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ ಮಾಹಿತಿ ನೀಡಿದ್ದಾರೆ.

ಟೆಸ್ಟ್ ಸರಣಿಗೂ ಆರಂಭಕ್ಕೂ ಮುನ್ನ ರಚಿನ್ ರವೀಂದ್ರ ಅವರು ತಮ್ಮ ತಂಡವು ಎಚ್ಚರಿಕೆಯಿಂದ ಇರಬೇಕಾದ ಭಾರತೀಯ ಆಟಗಾರರ ಬಗ್ಗೆ ತಿಳಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿಯಿಂದ ತಮ್ಮ ತಂಡ ದೂರ ಉಳಿಯಬೇಕು ಎಂದಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಒಟ್ಟಿಗೆ 800 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಪಡೆದಿದ್ದಾರೆ. ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ಅನುಭವಿ ಬೌಲಿಂಗ್ ಜೋಡಿಯಾಗಿದ್ದಾರೆ.
ಭಾರತ ದೀರ್ಘಕಾಲ ಒಟ್ಟಿಗೆ ಬೌಲಿಂಗ್ ಮಾಡುವ ಬೌಲರ್ಗಳನ್ನು ಹೊಂದಿದೆ. ಅಂದರೆ ಸ್ಥಿರವಾಗಿ ಆಡುವ ಇಬ್ಬರು ಸ್ಪಿನ್ನರ್ಗಳಾದ ಅಶ್ವಿನ್ ಮತ್ತು ಜಡೇಜಾ. ಅವರಿಬ್ಬರು ಅತ್ಯಂತ ಅನುಭವ ಇರುವ ಬೌಲರ್ಗಳು. ಅವರು ಬ್ಯಾಟಿಂಗ್ ಕೂಡ ಮಾಡುವುದರಿಂದ ಸ್ವಲ್ಪ ಕಷ್ಟವಾಗುತ್ತದೆ. ಭಾರತ ತನ್ನ ತವರು ನೆಲದಲ್ಲಿ ಎಷ್ಟು ಉತ್ತಮವಾಗಿದೆ ಎಂಬುದು ನಮಗೆ ತಿಳಿದಿದೆ. ಒಂದು ತಂಡ ಇಲ್ಲಿಗೆ ಬಂದು ಗೆಲ್ಲುವುದು ಎಷ್ಟು ಕಷ್ಟ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅಶ್ವಿನ್ ಮತ್ತು ಜಡೇಜಾ ಭಯದಲ್ಲಿ ಕಿವೀಸ್ ಪಡೆ ಇರುವುದನ್ನು ಪರೋಕ್ಷವಾಗಿ ರಚಿನ್ ರವೀಂದ್ರ ಹೇಳಿದ್ದಾರೆ.
ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ರಚಿನ್ ಭಾರತದಲ್ಲಿ ಕ್ರಿಕೆಟ್ ಆಡಿದ ತಮ್ಮ ಹಿಂದಿನ ಅನುಭವವನ್ನು ಪಡೆಯುವುದಾಗಿ ತಿಳಿಸಿದ್ದಾರೆ. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಮುನ್ನ ಕಳೆದ ವರ್ಷ ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಬೇಕಿತ್ತು ಎಂದಿದ್ದಾರೆ. ಟೆಸ್ಟ್ ಕ್ರಿಕೆಟ್ ವಿಭಿನ್ನ ಸ್ವರೂಪವಾಗಿದೆ. ಇದು ಸಂಪೂರ್ಣವಾಗಿ ವಿಭಿನ್ನವಾದ ಸವಾಲು ಎಂದುಕೊಂಡಿದ್ದೇನೆ. ಈ ಬಾರಿ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ಎದುರು ನೋಡುತ್ತೀದ್ದೇನೆ ಎಂದು ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಮತ್ತು ಜಡೇಜಾ ಭರ್ಜರಿ ಪ್ರದರ್ಶನ ನೀಡಿದ್ದರು. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಬೌಲರ್ಗಳಿಗೆ ಅಶ್ವಿನ್ ಮತ್ತು ಜಡೇಜಾ ಬೆವರಿಳಿಸಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಭಾರತ 144 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ಜಡೇಜಾ ಜೊತೆಗೂಡಿದ ಅಶ್ವಿನ್ ತಂಡವನ್ನು ಬೃಹತ್ ಮೊತ್ತದ ಕಡೆ ಮುನ್ನಡೆಸಿದ್ದರು. ಅಶ್ವಿನ್ (113) ಬಿರುಸಿನ ಶತಕ ಬಾರಿಸಿ ಬೌಲಿಂಗ್ನಲ್ಲೂ ದಾಖಲೆ ಸೃಷ್ಟಿಸಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಬಳಿಸಿ ಸಂಭ್ರಮಿಸಿದ್ದರು. ಈ ಪ್ರದರ್ಶನಕ್ಕಾಗಿ ಅವರಿಗೆ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದಿದ್ದರು. ಮತ್ತೊಂದೆಡೆ ಆಶ್ವಿನ್ ಜೊತೆ ಅಬ್ಬರಿಸಿದ ಜಡೇಜಾ ಶತಕ ವಂಚಿತರಾಗಿದ್ದರು. ಅವರು 86 ರನ್ ಗಳಿಸಿದ್ದಲ್ಲದೆ, ಎರಡೂ ಇನ್ನಿಂಗ್ಸ್ಗಳಲ್ಲಿ ಒಟ್ಟು 5 ವಿಕೆಟ್ಗಳನ್ನು ಪಡೆದು ಟೀಮ್ ಇಂಡಿಯಾ ಗೆಲುವಿಗೆ ಕೊಡುಗೆ ನೀಡಿದ್ದರು.