
ನವದೆಹಲಿ, ಮೇ 17: ಪತ್ರಕರ್ತ ರಜತ್ ಶರ್ಮ ಅವರು ಜೂನ್ 30ರಂದು ನಡೆಯಲಿರುವ ದೆಹಲಿ ಡಿಸ್ಟ್ರಿಕ್ಟ್ ಅಸೋಸಿಯೇಷನ್ (DDCA) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.
ಶರ್ಮ ಅವರು ಈ ಹಿಂದೆ ಹಿಂದಿ ಚಾನೆಲ್ ಇಂಡಿಯಾ ಟಿವಿಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಆ ಸಂದರ್ಭ ಅವರ 'ಆಪ್ ಕೀ ಅದಾಲತ್' ಶೋ ಜನಪ್ರಿಯತೆ ಗಳಿಸಿತ್ತು.
ಈ ಬಗ್ಗೆ ಮಾತನಾಡಿರುವ ಶರ್ಮ, 'ಕ್ರಿಕೆಟ್ ನಲ್ಲಿರುವ ಸಾಕಷ್ಟು ಸ್ನೇಹಿತರು ಬಹಳ ಹಿಂದಿನಿಂದಲೂ ಡಿಡಿಸಿಎ ಸೇರಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ನಾನು ಅವರ ಒತ್ತಾಯವನ್ನೆಲ್ಲಾ ತಳ್ಳಿ ಹಾಕುತ್ತಾ ಬಂದಿದ್ದೆ. ಕ್ರಿಕೆಟ್ ಉತ್ಸಾಹಿಯಾಗಿರುವ ನಾನು ಕೊನೆಗೂ ಅತ್ತ ಹೋಗುವುದರಲ್ಲಿದ್ದೇನೆ' ಎಂದು ಬುಧವಾರ ತಿಳಿಸಿದರು.
ಸ್ಪರ್ಧೆಗಿಳಿಯುವ ಮುನ್ನ ತಾನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅನುಮತಿಗೂ ಪ್ರಯತ್ನಿಸಿದ್ದಾಗಿ ಶರ್ಮ ಹೇಳಿದರು. ಹಿಂದೆ ಡಿಡಿಸಿಎ ಅಧ್ಯಕ್ಷ ಸ್ಥಾನದಲ್ಲಿ ಅರುಣ್ ಜೇಟ್ಲಿ ಕಾರ್ಯ ನಿರ್ವಹಿಸಿದ್ದರು.
'ಅರುಣ್ ಜೇಟ್ಲಿ ಅವರೊಂದಿಗೆ ಸುಮಾರು 44 ವರ್ಷಗಳಿಂದಲೂ ನಾನು ನಂಟನ್ನು ಇಟ್ಟುಕೊಂಡಿದ್ದೇನೆ. ಡಿಡಿಸಿಎಗೆ ಅರುಣ್ ಜೇಟ್ಲಿ ಕೊಡುಗೆ ಅಪಾರ' ಎಂದು ಶರ್ಮ ವಿವರಿಸಿದರು.
'ಜೇಟ್ಲಿ ಒಪ್ಪಿಗೆಯಿಲ್ಲದೆ ನಾನು ಡಿಡಿಸಿಎ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದೂ ಶರ್ಮ ಹೇಳಿದರು. ಈ ಸಂದರ್ಭ ಮಾಜಿ ಡಿಡಿಸಿಎ ಖಜಾಂಚಿ, ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ನ ಅಧ್ಯಕ್ಷ ನರೀಂದರ್ ಬಾತ್ರಾ ಇದ್ದರು.