ಕೊಲಂಬೋ, ಮಾರ್ಚ್ 06: ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಪ್ರವಾಸಿ ಭಾರತೀಯ ತಂಡ ಸೋಲು ಕಂಡಿದೆ. ಭಾರತದ ಅನನುಭವಿ ಬೌಲರ್ ಗಳು ಲಂಕಾದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾಗಿದ್ದಾರೆ. ಪರಿಣಾಮ, ಶ್ರೀಲಂಕಾ 5 ವಿಕೆಟ್ ಗಳಿಂದ ಪಂದ್ಯ ಗೆದ್ದು ಕುಣಿದಾಡಿದೆ.
ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 06) ದದು ನಡೆದ ಪಂದ್ಯದಲ್ಲಿ ಭಾರತ ಒಡ್ಡಿದ್ದ 175ರನ್ ಗಳ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾವು 18.3 ಓವರ್ ಗಳಲ್ಲಿ 175/5 ಗಳಿಸುವ ಮೂಲಕ ಗೆಲುವಿನ ದಡ ಮುಟ್ಟಿತು.
ಶ್ರೀಲಂಕಾದ ರನ್ ಚೇಸ್ ಗೆ ಕುಸಲ್ ಪೆರೆರಾ ನೆರವಾದರು. 37 ಎಸೆತಗಳಲ್ಲಿ 66ರನ್ (6 ಬೌಂಡರಿ, 4ಸಿಕ್ಸರ್) ಬಾರಿಸಿ ಅದ್ಭುತ ಪ್ರದರ್ಶನ ನೀಡಿದರು. ಇದಕ್ಕೂ ಮುನ್ನ ಆರಂಭಿಕ ಆಟಗಾರರಾದ ಧನುಷ್ಕ ಗುಣತಿಲಕ ಹಾಗೂ ಕುಸಲ್ ಮೆಂಡಿಸ್ ಕ್ರಮವಾಗಿ 19 ಹಾಗೂ 11ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.
ಅಂತಿಮವಾಗಿ ದಸುನ್ ಶನಕ ಅಜೇಯ 15 ಹಾಗೂ ಥಿಸೆರಾ ಪೆರೆರಾ ಅಜೇಯ 22ರನ್ (10 ಎಸೆತಗಳು) ಗಳಿಸಿ ಗೆಲುವಿನ ಗುರಿ ಮುಟ್ಟಿಸಿದರು.
ಭಾರತದ ಇನ್ನಿಂಗ್ಸ್ : ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರ ಶಿಖರ್ ಧವನ್ ಆಸರೆಯಾದರು. ನಾಯಕ ರೋಹಿತ್ ಶರ್ಮ 0, ಸುರೇಶ್ ರೈನಾ 1 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮನೀಶ್ ಪಾಂಡೆ 37, ರಿಷಬ್ ಪಂತ್ 23, ದಿನೇಶ್ ಕಾರ್ತಿಕ್ ಅಜೇಯ 13ರನ್ ಗಳಿಸಿದರು.