ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲರ್ಗಳು ದಿಟ್ಟ ಪ್ರದರ್ಶನ ತೋರಿದ್ದಾರೆ. ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಅಕ್ಸರ್ ಪಟೇಲ್, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಪಡೆದ ಮಿಂಚಿದರು. ಟೀಮ್ ಇಂಡಿಯಾ ಬೌಲರ್ಗಳ ದಾಳಿಗೆ ಇಂಗ್ಲೆಂಡ್ನ ಬ್ಯಾಟರ್ಗಳ ಬಳಿ ಉತ್ತರವೇ ಇರಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡ 132 ರನ್ಗಳಿಗೆ ಕುಸಿಯಿತು. ಸಂಕಷ್ಟದ ಪರಿಸ್ಥಿತಿಯೂ ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಏಕೈಕ ಬ್ಯಾಟರ್ ನಾಯಕ ಜೋಸ್ ಬಟ್ಲರ್.
ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜೋಸ್ ಬಟ್ಲರ್ ನಾಯಕನ ಆಟವಾಡಿದರು. ಬಟ್ಲರ್ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಇಂಗ್ಲೆಂಡ್ ಪರ ಬಿಗ್ ಸ್ಕೋರರ್ ಎನಿಸಿಕೊಂಡರು. ಬಿರುಸಿನ ಬ್ಯಾಟಿಂಗ್ ಮಾಡಿದ ಬಟ್ಲರ್ ಬಿಗ್ ಸ್ಕೋರ್ ಕಲೆ ಹಾಕುವ ಸಿಗ್ನಲ್ ಕೊಟ್ಟಿದ್ದರು. ಆದರೆ ನಿತೀಶ್ ಕುಮಾರ್ ರೆಡ್ಡಿ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಬಟ್ಲರ್ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಿದರು.

ಜೋಸ್ ಬಟ್ಲರ್ ಇಂಗ್ಲೆಂಡ್ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ಯುತ್ತಿದ್ದರು. ಇಂಗ್ಲೆಂಡ್ನ ಯಾವುದೇ ಬ್ಯಾಟರ್ಗಳು ಹೆಚ್ಚು ಕಾಲ ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗದಿದ್ದಲ್ಲಿ, ಬಟ್ಲರ್ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಕೊನೆಯ ಓವರ್ಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ಗಳನ್ನು ಬಾರಿಸುತ್ತಿರುವಾಗ ಬಟ್ಲರ್ ಅವರಿಗೆ ನಿತೀಶ್ ಕುಮಾರ್ ರೆಡ್ಡಿ ಅಡ್ಡಿಯಾದರು.
ಇಂಗ್ಲೆಂಡ್ನ 17ನೇ ಓವರ್ನಲ್ಲಿ ದಾಳಿಗಿಳಿದ ವರುಣ್ ಚಕ್ರವರ್ತಿ ಅವರ ಎರಡನೇ ಎಸೆತದಲ್ಲಿ ಬಟ್ಲರ್ ಡೀಪ್ ಸ್ಕ್ವೇರ್ ಲೆಗ್ನಲ್ಲಿ ದೊಡ್ಡ ಹೊಡೆತವನ್ನು ಆಡಿದರು. ಆದರೆ, ಚೆಂಡು ದೂರವನ್ನು ಕ್ರಮಿಸುವ ಬದಲು ಗಾಳಿಗೆ ಹೋಯಿತು. ಬೌಂಡರಿ ಗೆರೆ ಬಳಿ ನಿಂತಿದ್ದ ನಿತೀಶ್ ರೆಡ್ಡಿ ಚೆಂಡಿನ ಮೇಲೆ ಕಣ್ಣಿಟ್ಟು ಓಡಲು ಆರಂಭಿಸಿ ಮುಂದಕ್ಕೆ ಡೈವ್ ಮಾಡುವ ಮೂಲಕ ಅದ್ಭುತ ಕ್ಯಾಚ್ ಹಿಡಿದರು. ಈ ಕ್ಯಾಚ್ ನೋಡಿದ ಬಟ್ಲರ್ ಅತೃಪ್ತಿಯಿಂದ ಪೆವಿಲಿಯನ್ಗೆ ಮರಳಿದರು. ಮಿಂಚಿನ ಬ್ಯಾಟಿಂಗ್ ಪ್ರದರ್ಶನ ಮಾಡಿದ ಬಟ್ಲರ್ 44 ಎಸೆತಗಳಲ್ಲಿ 8 ಬೌಂಡರಿ ಹಾಗು 2 ಸಿಕ್ಸರ್ ನೆರವಿನಿಂದ 68 ರನ್ ಬಾರಿಸಿ ಔಟಾದರು. ಬಟ್ಲರ್ ಬ್ಯಾಟಿಂಗ್ ಅಬ್ಬರ ನೋಡಿದವರು ಶತಕ ಬಾರಿಸಬಹುದು ಎಂದುಕೊಂಡಿದ್ದರು. ಆದರೆ ನಿತೀಶ್ ಕುಮಾರ್ ರೆಡ್ಡಿ ಅದ್ಭುತ ಕ್ಯಾಚ್ ಹಿಡಯುವ ಮೂಲಕ ಜೋಸ್ ಬಟ್ಲರ್ ಆಸೆ ಅನ್ನು ನುಚ್ಚುನೂರು ಮಾಡಿದರು.
ಜೋಸ್ ಬಟ್ಲರ್ ಅರ್ಧಶತಕದ ಹೊರತಾಗಿಯೂ ಇಂಗ್ಲೆಂಡ್ ತಂಡ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ 132 ರನ್ಗಳಿಗೆ ಸರ್ವಪತನವಾಯಿತು. ಟಾಸ್ ಗೆದ್ದು ಬೌಲಿಂಗ್ ಮಾಡಲು ಬಂದ ಭಾರತ ಪರ ವರುಣ್ ಚಕ್ರವರ್ತಿ 23 ರನ್ಗಳಿಗೆ ಮೂರು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಅರ್ಷದೀಪ್ ಸಿಂಗ್ 17 ರನ್ಗಳಿಗೆ ಎರಡು ವಿಕೆಟ್ ಪಡೆದರು. ಇದರೊಂದಿಗೆ ಅರ್ಷದೀಪ್ (97) ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.