
ಮುಂಬಯಿ, ಏಪ್ರಿಲ್ 17: ಟೀಮ್ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರ 3 ಡೈಮೆನ್ಷನ್ ಹೇಳಿಕೆಯನ್ನು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದ ಅಂಬಾಟಿ ರಾಯುಡು ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬುಧವಾರ ಸ್ಪಷ್ಟ ಪಡಿಸಿದ್ದಾರೆ.
ಮುಂಬರುವ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ರಾಯುಡು ವಿಫಲಗೊಂಡಿದ್ದರು. ಈ ಸಂದರ್ಭದಲ್ಲಿ ಆಲ್ರೌಂಡರ್ ವಿಜಯ್ ಶಂಕರ್, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರರಲ್ಲೂ ಪರಿಣಾಮಕಾರಿ ಕೊಡುಗೆ ನೀಡುವ 3 ಡೈಮೆನ್ಷನ್ ಆಟಗಾರ. ಹೀಗಾಗಿ ಅವರನ್ನು ರಾಯುಡು ಬದಲಿಗೆ ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ ಎಂದು ಎಂ.ಎಸ್.ಕೆ ಪ್ರಸಾದ್ ಹೇಳಿಕೆ ನೀಡಿದ್ದರು.
ಇದನ್ನು ಟ್ವಿಟರ್ ಮೂಲಕ ವ್ಯಂಗ್ಯ ಮಾಡಿದ ರಾಯುಡು, ವಿಶ್ವಕಪ್ ವೀಕ್ಷಿಸಲು 3ಡಿ (3 ಡೈಮೆನ್ಷನ್) ಕನ್ನಡದ ಖರೀದಿಸಿರುವುದಾಗಿ ಟ್ವೀಟ್ ಮಾಡಿದ್ದರು.
ಬಳಿಕ ರಾಯುಡುಗೆ ಕೊಂಚ ಶುಭ ಸುದ್ದಿ ಎಂಬಂತೆ ಬಿಸಿಸಿಐ ಮುಂಬರುವ ವಿಶ್ವಕಪ್ ಟೂರ್ನಿಗೆ ಕಾಯ್ದಿರಿಸಲ್ಪಟ್ಟ ಆಟಗಾರರ ಪಟ್ಟಿಯಲ್ಲಿ ಹೈದರಾಬಾದ್ನ ಅನುಭವಿ ಬ್ಯಾಟ್ಸ್ಮನ್ ಹೆಸರನ್ನು ಸೇರ್ಪಡೆ ಮಾಡಿತ್ತು. ವಿಶ್ವಕಪ್ ತಂಡದಲ್ಲಿ ಇರುವ ಆಟಗಾರರಲ್ಲಿ ಯಾರಾದರು ಗಾಯದ ಸಮಸ್ಯೆಗೆ ತುತ್ತಾದರೆ ರಾಯುಡು ಅಥವಾ ವಿಕೆಟ್ ಕೀಪರ್ ರಿಷಭ್ ಪಂತ್ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ.
"ರಾಯುಡು ಟ್ವೀಟ್ ಗಮನಿಸಿದ್ದೇವೆ. ಈ ಸಂದರ್ಭದಲ್ಲಿ ಆಟಗಾರರಲ್ಲಿ ಭಾವನಾತ್ಮಕತೆ ಹೆಚ್ಚಿರುತ್ತದೆ. ಹೀಗಾಗಿ ನಿರಾಸೆಗೊಳ್ಳುವುದು ಸಹಜ. ಇನ್ನು ಹದ್ದು ಮೀರಿದ ವರ್ತನೆ ಆಗಿಲ್ಲದ ಕಾರಣ ಈ ಕುರಿತಾಗಿ ಕ್ರಮ ಕೈಗೊಳ್ಳಲಾಗದು,'' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಾಯುಡು ಅವರ 3ಡಿ ಟ್ವೀಟ್ಗೆ 80 ಸಾವಿರಕ್ಕೂ ಅಧಿಕ ಲೈಕ್ಸ್ ಹರಿದುಬಂದಿದ್ದು, 13 ಸಾವಿರಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಆಗಿದೆ.