

ನವದೆಹಲಿ, ಮಾರ್ಚ್ 15: ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯ ಆರಂಭದಲ್ಲಿ 2-0ಯಿಂದ ಮುನ್ನಡೆಯಲ್ಲಿದ್ದ ಭಾರತ ಅಂತಿಮವಾಗಿ 2-3ರಿಂದ ಸರಣಿ ಕೈ ಚೆಲ್ಲಿತ್ತು. ಭಾರತದ ಸದ್ಯದ ಪರಿಸ್ಥಿತಿ ನೋಡಿದರೆ ವಿಶ್ವಕಪ್ ಗೆಲುವು ಅನುಮಾನ ಎಂಬಂತಿದೆ. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಲೂ ಗೆಲುವಿನ ನಂಬಿಕೆ ಉಳಿಸಿಕೊಂಡಿದ್ದಾರೆ.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟಿ20 ಮತ್ತು ಏಕದಿನ ಎರಡೂ ಸರಣಿಗಳನ್ನು ಭಾರತ ಸೋತು ಮುಖಭಂಗ ಅನುಭವಿಸಿತ್ತು. ಈ ಸೋಲು ಭಾರತವನ್ನು ವಿಶ್ವಕಪ್ ನೆಲೆಯಲ್ಲಿ ಮರು ವಿಮರ್ಶೆಗೆ ಒಳಪಡುವಂತೆ ಮಾಡಿದೆ. ಆದರೆ ಭಾರತ ತಂಡ ವಿಶ್ವಕಪ್ನಲ್ಲಿ ಈಗಲೂ ಪ್ರಮುಖ ಸ್ಪರ್ಧಿಗಳ ಸಾಲಿನಲ್ಲಿದೆ ಎಂಬ ಅಭಿಪ್ರಾಯವನ್ನು ಕೊಹ್ಲಿ ಹೊರ ಹಾಕಿದ್ದಾರೆ.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ವಿಶ್ವಕಪ್ನಲ್ಲಿ ಸ್ಪರ್ಧಿಸುವ ಎಲ್ಲಾ ತಂಡಗಳೂ ಪ್ರತಿಸ್ಪರ್ಧಿಗಳಿಗೆ ಭೀತಿಯೊಡ್ಡುತ್ತವೆ. ವಿಶ್ವಕಪ್ನಲ್ಲಿ ಸ್ಪರ್ಧಿಸುವ ಯಾವ ತಂಡಗಳನ್ನೂ ಪ್ರಬಲ ಪೈಪೋಟಿಯಿಂದ ತಡೆಯಲಾಗದು' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕೊಹ್ಲಿ ಹೇಳಿದರು.
'ಆರಂಭಗೊಳ್ಳಲಿರುವ ವಿಶ್ವಕಪ್ನಲ್ಲಿ ಇಂಥದ್ದೇ ತಂಡ ಮೆಚ್ಚಿನದ್ದು ಅನ್ನುವಂತಿಲ್ಲ. ಯಾವುದೇ ತಂಡ ಅಪಾಯಕಾರಿಯಾಗಬಲ್ಲದು. ಉಳಿದ ಟೂರ್ನಿಗಳಲ್ಲಿ ಅಂಥದ್ದೇನೂ ಬಲ ಪ್ರದರ್ಶಿಸದ ವೆಸ್ಟ್ ಇಂಡೀಸ್, ವಿಶ್ವಕಪ್ನಲ್ಲಿ ತೀರಾ ಅಪಾಯಕಾರಿ ತಂಡವಾಗಿ ಕಾಣಿಸಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ' ಎಂದು ಕೊಹ್ಲಿ ಉದಾಹರಣೆ ನೀಡಿದರು.