
ನವದೆಹಲಿ, ಮೇ 15: ಇಂಗ್ಲೆಂಡ್ ನಲ್ಲಿ ನಡೆಯುವ ಕೌಂಟಿ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು ಎನ್ನುವ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕೋರಿಕೆಯನ್ನು ಸುಪ್ರೀಮ್ ಕೋರ್ಟ್ ನಿರಾಕರಿಸಿದೆ. ಆದರೆ ಹಲವಾರು ಕ್ರಿಕೆಟಿಗರನ್ನು ವಜಾಗೊಳಿಸುವ ವಿಚಾರಣಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಈ ಕುರಿತಂತೆ ತೀರ್ಪು ನೀಡುವಂತೆ ದೆಹಲಿ ಕೋರ್ಟ್ ಗೆ ಸುಪ್ರೀಮ್ ಕೋರ್ಟ್ ಸೂಚಿಸಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಪಾಲ್ಗೊಂಡು ಶ್ರೀಶಾಂತ್ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿಂದ ಜೀವಿತಾವಧಿ ನಿಷೇಧಕ್ಕೀಡಾಗಿದ್ದರು. ಸುಮಾರು 4 ವರ್ಷಗಳಿಂದಲೂ ನಿಷೇಧಕ್ಕೀಡಾಗಿದ್ದ ಶ್ರೀಶಾಂತ್ ಇಂಗ್ಲೆಂಡ್ ಟೆಸ್ಟ್ ನಲ್ಲಿ ಪಾಲ್ಗೊಳ್ಳುವ ಇಂಗಿತವನ್ನಿಟ್ಟುಕೊಂಡಿದ್ದರು. ಆದರೆ ಅವರಿಗೆ ಹಿನ್ನಡೆಯಾಗಿದೆ.
ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶ ಎಎಮ್ ಖಾನ್ವಿಲ್ಕಾ ಅವರಿದ್ದ ತಂಡ, ಶ್ರೀಕಾಂತ್ ಚಡಪಟಿಕೆ ನಮಗೆ ಅರ್ಥವಾಗುತ್ತದೆ. ಆದರೆ ಹೈಕೋರ್ಟ್ ತೀರ್ಪಿನವರೆಗೂ ಅವರು ಕಾಯಲೇಬೇಕಿದೆ ಎಂದಿದೆ.
2013ರ ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಕ್ಕಾಗಿ ದೆಹಲಿ ಪೊಲೀಸರು ಶ್ರೀಶಾಂತ್, ಅಜಿತ್ ಚಾಂಡಿಲ, ಅಂಕಿತ್ ಚವಾನ್ ಹಾಗು ಇನ್ನಿತರರನ್ನು ಬಂಧಿಸಿದ್ದರು. ಬಂಧನವಾಗುವಾಗ ಶ್ರೀಶಾಂತ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು.