ಕ್ರೀಡಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಅಥ್ಲೀಟ್ ಹಾಗೂ ಕೋಚ್ಗಳಿಗೆ ಅವರ ಸಾಧನೆಯನ್ನು ಗುರುತಿಸಿ ಪುರಸ್ಕಾರಗಳನ್ನು ನೀಡಲಾಗುತ್ತದೆ. ಗುರುವಾರ ಸಹ ಕಳೆದ ವರ್ಷ ಸ್ಥಿರ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದ ಆಟಗಾರರಿಗೆ ಪ್ರಾಶಸ್ತಿಗಳು ಸಂದಿವೆ. ಭಾರತದ ಖ್ಯಾತ ಶೂಟರ್ ಮನು ಭಾಕರ್, ಚೇಸ್ ಕ್ರೀಡಾ ಪಟು ಡಿ.ಗುಕೇಶ್, ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್, ಭಾರತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರಿಗೆ ಕ್ರೀಡಾ ಕ್ಷೇತ್ರದ ಮಹಾನ್ ಪ್ರಶಸ್ತಿ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಸಂದಿದೆ.
ಈ ಪಟ್ಟಿಯನ್ನು ಒಮ್ಮೆ ನೋಡುತ್ತಾ ಹೋದರೆ, ಈ ಪಟ್ಟಿಯಲ್ಲಿ ವಿಶೇಷ ಸಾಧನೆ ಮಾಡಿದ ಕ್ರೀಡಾ ಪಟುಗಳು ಹಾಗೂ ಕೋಚ್ಗಳ ಹೆಸರುಗಳು ಮರೆಯಾಗಿವೆ. ಈಗ ಬರುತ್ತಿರುವ ಅಥವಾ ಸೋರಿಕೆ ಆಗಿರುವ ಮಾಹಿತಿಯನ್ನೇ ನಂಬುವುದಾದರೆ, ದೀಪಾಲಿ ದೇಶಪಾಂಡೆ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಸಿಗಲಿದೆ ಎಂದು ತಿಳಿದು ಬಂದಿದೆ. ಈ ಸುದ್ದಿ ನಿಜಕ್ಕೂ ಕ್ರೀಡಾಭಿಮಾನಿಗಳಿಗೆ ಬೇಸರ ತಂದಿರುತ್ತದೆ. ಏಕೆಂದರೆ ದೇಶಕ್ಕೆ ಕೀರ್ತಿ ತಂದ ಕೋಚ್ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಈ ಪ್ರಶಸ್ತಿಯಿಂದ ವಂಚಿರಾಗುತ್ತಿದ್ದಾರೆ.

ಟೀಮ್ ಇಂಡಿಯಾದ ಯುವ ಆಟಗಾರರನ್ನು ರೂಪಿಸುವ ಜವಾಬ್ದಾರಿಯನ್ನು ಆರಂಭದಲ್ಲಿ ಹೊತ್ತ ಕೋಚ್ ರಾಹುಲ್ ದ್ರಾವಿಡ್ ಬಳಿಕ ರಾಷ್ಟ್ರೀಯ ತಂಡದ ಕೋಚ್ ಸಹ ಆದರು. ಇವರ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಅಂಡರ್ 19 ವಿಶ್ವಕಪ್ ಸಹ ಗೆದ್ದಿತ್ತು. ಅಲ್ಲದೆ 2024ರಲ್ಲಿ ಟಿ20 ವಿಶ್ವಕಪ್ ಗೆದ್ದಾಗಲು ತಂಡಕ್ಕೆ ಇವರದ್ದೇ ಮಾರ್ಗದರ್ಶನ. ದೇಶಕ್ಕೆ ಕೀರ್ತಿ ತಂದ ಸಾಧಕರ ಪಟ್ಟಿಯಲ್ಲಿ ಇವರಿಗೆ ಮುಂಚೂಣಿ ಸ್ಥಾನ. ಇವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಸಿಗದೇ ಇರುವುದು ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ದ್ರೋಣಾಚಾರ್ಯ ಪ್ರಶಸ್ತಿ ರೇಸ್ನಲ್ಲಿ ಒಬ್ಬನೇ ಒಬ್ಬ ಕ್ರಿಕೆಟ್ ಕೋಚ್ ಇಲ್ಲದೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಅದರಲ್ಲೂ 17 ವರ್ಷಗಳ ಬಳಿಕ ಭಾರತಕ್ಕೆ ಚಾಂಪಿಯನ್ ಮುಕುಟ ತೊಡಿಸಿದ ಕೋಚ್ಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸದೇ ಇರುವುದು ಕನ್ನಡಿಗರಿಗೆ ನೋವು ತಂದಿದೆ. ಈ ಬಾರಿ ಈ ಪ್ರಶಸ್ತಿ ಖಂಡಿತವಾಗಿಯೂ ದ್ರಾವಿಡ್ಗೆ ಸಿಗುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ದ್ರಾವಿಡ್ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಕ್ರೀಡಾಭಿಮಾನಿಗಳಿಗೆ ಬೇಸರ ತರಿಸಿದೆ.

ಟೀಮ್ ಇಂಡಿಯಾವನ್ನು ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸುತ್ತಿರುವ ಜಸ್ಪ್ರಿತ್ ಬುಮ್ರಾ ಅವರಿಗೂ ಅರ್ಜುನ್ ಪ್ರಶಸ್ತಿ ಮಿಸ್ ಆಗಿದೆ. ಇವರು ಭಾರತದ ಪರ ಮೂರು ಫಾರ್ಮೆಟ್ಗಳಲ್ಲಿ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಟಿ20 ವಿಶ್ವಕಪ್ ಗೆಲ್ಲುವಲ್ಲಿ ಇವರ ಕೊಡುಗೆ ಸಹ ಅಪಾರ. 2024ರಲ್ಲಿ ಇವರು ಬ್ಯಾಟರ್ಗಳಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದಾರೆ.
ಇಂತಹ ಸಾಧಕರಿಗೆ ಪ್ರಶಸ್ತಿಗಳು ಮಿಸ್ ಆಗುತ್ತಿರುವುದು ಹಲವು ಪ್ರಶ್ನೆಗಳು ಏಳುವಂತೆ ಮಾಡಿವೆ. ಆಯ್ಕೆ ಸಮಿತಿಯ ನಡೆಯ ಬಗ್ಗೆ ಈಗ ಪ್ರಶ್ನೆಗಳು ಏಳಲು ಆರಂಭಿಸಿವೆ. ಬುಮ್ರಾ 2024ರಲ್ಲಿ 71 ಟೆಸ್ಟ್ ವಿಕೆಟ್ ಗಳನ್ನು ಪಡೆದಿದ್ದು, ಟಿ20 ವಿಶ್ವಕಪ್ನಲ್ಲಿ ರನ್ಗಳಿಗೆ ಕಡಿವಾಣ ಹಾಕಿ 15 ವಿಕೆಟ್ ಕಬಳಸಿದ್ದು, ಈ ಎಲ್ಲ ಸಾಧನೆಗಳು ಆಯ್ಕೆ ಸಮಿತಿಗೆ ಕಾಣುತ್ತಿಲ್ಲವೇ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.