ಸರಣಿ ಸೋಲು: ಬಲಿಷ್ಠ ಭಾರತ ದಿಢೀರನೆ ಕಳಪೆಯಾಗಲು ಹೇಗೆ ಸಾಧ್ಯ ಎಂದು ಕುಟುಕಿದ ರವಿಶಾಸ್ತ್ರಿ

ತಂಡದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಿಕೊಂಡು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಯಾವೊಬ್ಬ ಕ್ರಿಕೆಟ್ ಅಭಿಮಾನಿಯೂ ಕೂಡ ಊಹಿಸಿರದ ರೀತಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಸೋಲುಂಡು ಮುಖಭಂಗಕ್ಕೆ ಒಳಗಾಗಿದೆ. ಹೌದು, ಕಳೆದ ವರ್ಷ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಟೀಮ್ ಇಂಡಿಯಾದಲ್ಲಿ ಭಾರೀ ದೊಡ್ಡ ಬದಲಾವಣೆಗಳಾದವು. ಕೋಚ್ ಆಗಿ ರವಿಶಾಸ್ತ್ರಿ ತಮ್ಮ ಅವಧಿ ಮುಗಿದ ಕಾರಣ ಕೋಚ್ ಸ್ಥಾನದಿಂದ ಕೆಳಗಿಳಿದರು ಹಾಗೂ ರವಿಶಾಸ್ತ್ರಿ ಜಾಗಕ್ಕೆ ಭಾರತದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ನೂತನ ಕೋಚ್ ಆಗಿ ನೇಮಕಗೊಂಡರು.
ಅತ್ತ ರವಿಶಾಸ್ತ್ರಿ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದದ್ದು ಮಾತ್ರವಲ್ಲದೆ ವಿರಾಟ್ ಕೊಹ್ಲಿ ಕೂಡ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದರು ಹಾಗೂ ಕೊಹ್ಲಿ ಸ್ಥಾನಕ್ಕೆ ರೋಹಿತ್ ಶರ್ಮಾ ನೂತನ ಟಿ ಟ್ವೆಂಟಿ ತಂಡದ ನಾಯಕನಾಗಿ ಆಯ್ಕೆಗೊಂಡರು. ತದನಂತರ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ವಜಾಗೊಳಿಸಿ ಏಕದಿನ ತಂಡಕ್ಕೂ ರೋಹಿತ್ ಶರ್ಮಾ ಅವರನ್ನೇ ನಾಯಕನನ್ನಾಗಿ ನೇಮಿಸಿತು. ಹೀಗೆ ತಂಡದ ಪ್ರಮುಖ ಸಾರಥಿಗಳ ಬದಲಾವಣೆಗಳೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಟೀಮ್ ಇಂಡಿಯಾ ಕೈಗೊಂಡಿತು.
ಆದರೆ ಸರಣಿ ಆರಂಭಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆಗೆ ಒಳಗಾದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸಿದರು. ಇನ್ನು ಇತ್ತಂಡಗಳ ನಡುವಿನ ಪಂದ್ಯಗಳು ಆರಂಭವಾಗುವುದಕ್ಕೂ ಮುನ್ನ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಟೀಮ್ ಇಂಡಿಯಾ ಜಯ ಸಾಧಿಸಲಿದೆ ಎಂಬ ಊಹೆಗಳಿದ್ದವು. ಆದರೆ ಈ ನಿರೀಕ್ಷೆಯ ಹಂತವನ್ನು ತಲುಪುವಲ್ಲಿ ಎಡವಿದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಅಂತರದಿಂದ ಸೋತರೆ, ನಂತರ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಹೀಗೆ ಟೀಮ್ ಇಂಡಿಯಾ ಎರಡೂ ಸರಣಿಗಳಲ್ಲಿಯೂ ಸೋತ ನಂತರ ವಿಶ್ವದ ಅನೇಕ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವಾರು ಮಂದಿ ಟೀಮ್ ಇಂಡಿಯಾ ನೆಲಕಚ್ಚಿದೆ, ಟೀಂ ಇಂಡಿಯಾ ಕಳಪೆ ತಂಡವಾಗಿದೆ ಎಂದೆಲ್ಲಾ ಟೀಕಿಸಲು ಆರಂಭಿಸಿದರು. ಹೀಗೆ ಟೀಮ್ ಇಂಡಿಯಾವನ್ನು ಟೀಕಿಸಿ ಕಾಲೆಳೆಯುತ್ತಿರುವವರ ಕುರಿತು ಪ್ರತಿಕ್ರಿಯಿಸಿರುವ ಭಾರತದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಈ ಕೆಳಕಂಡಂತೆ ಟೀಕಾಕಾರರಿಗೆ ಕುಟುಕಿದ್ದಾರೆ.

ಆಟವೆಂದ ಮೇಲೆ ಸೋಲು ಗೆಲುವು ಸಾಮಾನ್ಯ ಎಂದ ರವಿ ಶಾಸ್ತ್ರಿ
"ನೀವು ಸರಣಿಯೊಂದರಲ್ಲಿ ಸೋತಾಗ ಟೀಕಾಕಾರರು ನಿಮ್ಮ ಮೇಲೆ ಟೀಕಾ ಪ್ರಹಾರ ಮಾಡುವುದು ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಎಲ್ಲ ಪಂದ್ಯಗಳನ್ನು ನಾವೇ ಗೆಲ್ಲಲಾಗುವುದಿಲ್ಲ, ಆಟದಲ್ಲಿ ಸೋಲು ಮತ್ತು ಗೆಲುವು ಇದ್ದದ್ದೇ" ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ನಂಬರ್ ಒನ್ ತಂಡ ಧಿಡೀರನೆ ಕಳಪೆಯಾಗಲು ಹೇಗೆ ಸಾಧ್ಯ?
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಟೀಮ್ ಇಂಡಿಯಾ ಸೋತ ಬೆನ್ನಲ್ಲೇ ತಂಡ ಕಳಪೆಯಾಗಿದೆ ಎಂಬ ಟೀಕೆಗಳು ಆರಂಭವಾದವು. ಈ ಟೀಕೆಗಳ ಕುರಿತು ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ "ಟೀಮ್ ಇಂಡಿಯಾದ ಘನತೆ ದಿಢೀರನೆ ಇಳಿಕೆಯಾಗಲು ಹೇಗೆ ಸಾಧ್ಯ? ಇದು ಸತತ 5 ವರ್ಷಗಳಿಂದ ಅಗ್ರ ಸ್ಥಾನದಲ್ಲಿರುವ ತಂಡ ಎಂಬುದನ್ನು ಮರೆಯದಿರಿ. ಕಳೆದ 5 ವರ್ಷಗಳಿಂದ ಶೇ. 65ರಷ್ಟು ಗೆಲುವನ್ನು ಸಾಧಿಸಿರುವ ತಂಡ ಈ ಸೋಲಿನ ಕುರಿತು ಚಿಂತೆ ಏಕೆ ಮಾಡಬೇಕು? ನಮ್ಮ ತಂಡದ ಕುರಿತು ಇತರರು ಚಿಂತಿಸಬೇಕಷ್ಟೇ" ಎಂದು ಹೇಳಿಕೆ ನೀಡುವುದರ ಮೂಲಕ ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ್ದಾರೆ.

ಟೀಮ್ ಇಂಡಿಯಾದ ಮುಂದಿನ ಸರಣಿಗಳು ಯಾವಾಗ?
ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಗಿಸಿರುವ ಟೀಮ್ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಾಟ ನಡೆಸಲಿದ್ದು ಆ ಸರಣಿಗಳ ವೇಳಾಪಟ್ಟಿ ಈ ಕೆಳಕಂಡಂತಿದೆ.
ಮೊದಲನೇ ಏಕದಿನ ಪಂದ್ಯ: ಫೆಬ್ರವರಿ 6ಕ್ಕೆ ಅಹ್ಮದಾಬಾದ್ ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ
ದ್ವಿತೀಯ ಏಕದಿನ ಪಂದ್ಯ: ಫೆಬ್ರವರಿ 9ಕ್ಕೆ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣ
ತೃತೀಯ ಏಕದಿನ ಪಂದ್ಯ: ಫೆಬ್ರವರಿ 12ಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ
ಪ್ರಥಮ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 15ಕ್ಕೆ, ಬರಬತಿ ಕ್ರೀಡಾಂಗಣ, ಕಟಕ್
ದ್ವಿತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 18ಕ್ಕೆ ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣ, ವಿಶಾಖಪಟ್ಟಣ
ತೃತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 20, ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications