
ನವದೆಹಲಿ, ಮೇ 18: ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗಿನ್ನು ಬರೀ ಎರಡು ವಾರವಿದೆಯಷ್ಟೇ. ಆದರೆ ಟೀಮ್ ಇಂಡಿಯಾ ಈ ವಿಶ್ವ ಮಟ್ಟದ ಟೂರ್ನಿಗೆ ತಯಾರಾಗುತ್ತಿರುವ ರೀತಿಯೇ ಭಿನ್ನ ಅನ್ನಿಸಿದೆ. ಈ ದೊಡ್ಡ ಟೂರ್ನಿಗೆ ಅಭ್ಯಾಸ ಹೇಗೆ ಮಾಡುತ್ತಿದ್ದೀರಿ ಎಂದು ಭಾರತ ತಂಡದ ಆಟಗಾರರಲ್ಲಿ ಕೇಳಿದರೆ, ಅಭ್ಯಾಸವೇನಿಲ್ಲ; ಬರೀ ವಿಶ್ರಾಂತಿ-ಆರಾಮವಷ್ಟೇ ಎಂಬ ಉತ್ತರ ಅಲ್ಲಿಂದ ಬರುತ್ತದೆ!
ಮೇ 30ರಂದು ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ಮತ್ತು ವೇಲ್ಸ್ಗೆ ಹೊರಡೋಕೂ ಮುನ್ನ ಟೀಮ್ ಇಂಡಿಯಾ ಮುಂಬೈನಲ್ಲಿ ಮೇ 21ರಂದು ಒಟ್ಟು ಸೇರಲಿದೆ. ಅದರ ಮರುದಿನ ಅಂದರೆ ಮೇ 22ರಂದು ಮುಂಬೈನಿಂದ ಲಂಡನ್ಗೆ ವಿಮಾನ ಹತ್ತುವ ಯೋಜನೆಯಲ್ಲಿದೆ.
ಭಾರತ ವಿಶ್ವಕಪ್ 15 ಜನರ ತಂಡದಲ್ಲಿ ಹೆಸರಿಸಲಾಗಿದ್ದ ಎಲ್ಲಾ ಆಟಗಾರರು ಮೇ 12ರಂದಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಮತ್ತೊಂದು ಪ್ರಮುಖ ಟೂರ್ನಿ ಇರುವಾಗ ಅಭ್ಯಾಸ ನೆವದಲ್ಲಿ ದೈಹಿಕ ಆಯಾಸ ಅನುಭವಿಸದೆ ವಿಶ್ರಾಂತಿ ಪಡೆದುಕೊಳ್ಳುವ ಯೋಚನೆ ಟೀಮ್ ಇಂಡಿಯಾದ್ದು.
'ಐಪಿಎಲ್ ಮುಗಿದ ಬಳಿಕ ಅಭ್ಯಾಸ ನಡೆಸದೆ ವಿಶ್ರಾಂತಿ ಪಡೆದುಕೊಳ್ಳುವುದಾಗಿ ಆಟಗಾರರು ತಿಳಿಸಿದ್ದಾರೆ. ಹೀಗಾಗಿ ಆಟಗಾರರು ಖುಷಿಯ ಕ್ಷಣಗಳನ್ನು ಕಳೆದು ಟೂರ್ನಿಗೆ ಮನಸ್ಸು ಸಜ್ಜುಗೊಳಿಸುವಂತೆ ಹೇಳಲಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಸಣ್ಣಮಟ್ಟಿನಲ್ಲಿ ಅಭ್ಯಾಸ ನಡೆಸಲು ನಿರ್ಧರಿಸಲಾಗಿದೆ' ಎಂದು ತಂಡ ನಿರ್ವಹಣಾ ಸಮಿತಿ ಮೂಲವೊಂದು ತಿಳಿಸಿದೆ.