
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿಯೂ ವಿಫಲವಾಗಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಟೀಮ್ ಇಂಡಿಯಾ ಇದೀಗ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗಿದೆ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಇದೇ ತಿಂಗಳ 17ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಕಾದಾಟ ನಡೆಸಲಿದೆ.
ಮೊದಲಿಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಲಿದ್ದು, ಮೊದಲನೇ ಟಿ ಟ್ವೆಂಟಿ ಪಂದ್ಯ ನವೆಂಬರ್ 17ರ ಬುಧವಾರದಂದು ರಾಜಸ್ತಾನದ ಜೈಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗೆ ನಾಳೆಯಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಮತ್ತು ಭಾರತ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಗೆ ಇತ್ತಂಡಗಳಲ್ಲಿಯೂ ಭಾರಿ ಬದಲಾವಣೆಯಾಗಿದ್ದು ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದರೆ, ಕೇನ್ ವಿಲಿಯಮ್ಸನ್ ಅಲಭ್ಯರಾಗಿರುವ ಕಾರಣ ನ್ಯೂಜಿಲೆಂಡ್ ತಂಡವನ್ನು ಟಿಮ್ ಸೌಥಿ ಮುನ್ನಡೆಸಲಿದ್ದಾರೆ.
ಈಗಾಗಲೇ ಎರಡೂ ತಂಡಗಳ ಆಟಗಾರರು ಜೈಪುರ ತಲುಪಿದ್ದು ಕಳೆದೆರಡು ದಿನಗಳಿಂದ ಅಭ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರವಿಶಾಸ್ತ್ರಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದು ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಹೀಗೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಿ ನೇಮಕಗೊಂಡ ನಂತರ ತಂಡವನ್ನು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೂಲಕ ಮೊಟ್ಟಮೊದಲ ಬಾರಿಗೆ ಮುನ್ನಡೆಸಲಿದ್ದಾರೆ. ರಾಹುಲ್ ದ್ರಾವಿಡ್ ಖುದ್ದಾಗಿ ನಿಂತು ತಂಡದ ವಿವಿಧ ಆಟಗಾರರಿಗೆ ತರಬೇತಿ ನೀಡುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಹೊಸ ಜವಾಬ್ದಾರಿಗಳು, ಹೊಸ ಸವಾಲುಗಳು ಮತ್ತು ಹೊಸ ಆರಂಭಗಳು ಎಂದು ಬರೆದುಕೊಂಡಿದೆ.
ಇನ್ನು ಈ ಟಿ20 ಸರಣಿ ಮೂಲಕ ಭಾರತ ಟಿ20 ತಂಡದ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದು, ಉಪನಾಯಕನಾಗಿ ಕೆಎಲ್ ರಾಹುಲ್ ಆಯ್ಕೆಯಾಗಿದ್ದಾರೆ. ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಕೆಎಲ್ ರಾಹುಲ್ ಕೂಡ ಜೈಪುರ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದರು. ಹೀಗೆ ಇದೇ ಮೊದಲ ಬಾರಿಗೆ ಉಪನಾಯಕನಾಗಿ ಆಯ್ಕೆಯಾಗಿರುವ ಕೆ ಎಲ್ ರಾಹುಲ್ ಜೈಪುರದಲ್ಲಿ ಇರುವ ವಾಯು ಮಾಲಿನ್ಯದ ಕುರಿತಾಗಿ ಮಾತನಾಡಿದ್ದು ಕಿಡಿಕಾರಿದ್ದಾರೆ. ನಾವು ಕ್ರೀಡಾಂಗಣಕ್ಕೆ ಬಂದಿದ್ದೇವಷ್ಟೇ, ಆದರೆ ಕ್ರೀಡಾಂಗಣದಿಂದ ಹೊರಗೆ ಬಂದು ಸುತ್ತಾಡಿಲ್ಲ. ಹೀಗಾಗಿ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಎಷ್ಟಿದೆ ಎಂಬುದು ನನಗೆ ತಿಳಿದಿಲ್ಲ, ನಾನು ಕೈನಲ್ಲಿ ವಾಯುಮಾಲಿನ್ಯ ಮಾಪಕವನ್ನು ಇಟ್ಟುಕೊಂಡು ಓಡಾಡುತ್ತಿಲ್ಲ ಎಂದು ಕೆಎಲ್ ರಾಹುಲ್ ವಾಯು ಮಾಲಿನ್ಯದ ಕುರಿತು ಪತ್ರಕರ್ತ ಕೇಳಿದ ಪ್ರಶ್ನೆಗೆ ಉತ್ತರಿಸುವ ಮೂಲಕ ಕಿಡಿಕಾರಿದ್ದಾರೆ.