ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರನ್ನು ಜಗತ್ತಿನಾದ್ಯಂತ 'ಕ್ಯಾಪ್ಟನ್ ಕೂಲ್' ಎಂದೇ ಸಂಬೋಧಿಸಲಾಗುತ್ತದೆ.
ಮೈದಾನದಲ್ಲಿ ಕಠಿಣ ಪರಿಸ್ಥಿತಿಗಳಲ್ಲಿಯೂ ಎಂಎಸ್ ಧೋನಿ ಅವರ ಶಾಂತ ಮತ್ತು ಸಂಯೋಜನೆಯ ವರ್ತನೆಯಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಅವರ ನಾಯಕತ್ವದ ಶೈಲಿಯನ್ನು ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳಿಂದ ಶ್ಲಾಘಿಸಿದ್ದಾರೆ. ಹೀಗಾಗಿ ಕ್ಯಾಪ್ಟನ್ ಕೂಲ್ ಹೆಸರು ಭಾರತ ತಂಡದ ಮಾಜಿ ನಾಯಕನಿಗೆ ಬಹುತೇಕ ಸಮಾನಾರ್ಥಕವಾಗಿದೆ.

ಆದರೆ, "ಕ್ಯಾಪ್ಟನ್ ಕೂಲ್' ನಿಕ್ ನೇಮ್ಗೆ ಮತ್ತೊಬ್ಬ ಸ್ಪರ್ಧಿ ಇದ್ದಾರೆ ಎಂದು ಭಾರತದ ಲೆಜೆಂಡ್ ಆರಂಭಿಕ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಇತ್ತೀಚಿನ ಸಂವಾದದಲ್ಲಿ ಸುನಿಲ್ ಗವಾಸ್ಕರ್ ಅವರು ಕಪಿಲ್ ದೇವ್ ನಿಜವಾದ "ಕ್ಯಾಪ್ಟನ್ ಕೂಲ್' ಎಂದು ತಿಳಿಸಿದ್ದು, ಇದೇ ವೇಳೆ 1983ರ ವಿಶ್ವಕಪ್ನಲ್ಲಿ ಅವರ ಆಲ್ರೌಂಡ್ ಪ್ರದರ್ಶನವನ್ನು ನೆನಪಿಸಿಕೊಂಡರು.
"ಕಪಿಲ್ ದೇವ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ನೀಡಿದ ಪ್ರದರ್ಶನಗಳು ಬೆರಗುಗೊಳಿಸುವಂತಿದ್ದವು. ಫೈನಲ್ ಪಂದ್ಯದಲ್ಲಿ ವಿವಿಯನ್ ರಿಚರ್ಡ್ಸ್ ಅವರ ಕ್ಯಾಚ್ ಪಡೆದ ರೀತಿಯನ್ನು ಮರೆಯುವಂತಿಲ್ಲ. ಅಲ್ಲದೇ ಕಪಿಲ್ ದೇವ್ ಅವರ ನಾಯಕತ್ವವು ಕ್ರಿಯಾತ್ಮಕವಾಗಿತ್ತು. ಯಾವುದೇ ಆಟಗಾರನು ಕ್ಯಾಚ್ ಬಿಟ್ಟಾಗಲೂ ಅವರು ಸದಾ ನಗುತ್ತಿದ್ದರು. ಇದು ಮೂಲ 'ಕ್ಯಾಪ್ಟನ್ ಕೂಲ್' ಆಗಿ ಮಾಡುತ್ತದೆ".
ಭಾರತ ತಂಡವು 1983ರ ವಿಶ್ವಕಪ್ ಪ್ರಶಸ್ತಿಯನ್ನು ಅಂಡರ್ಡಾಗ್ ಆಗಿ ಅಭಿಯಾನ ಆರಂಭಿಸಿತು. ಅನಂತರ ಫೈನಲ್ನಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ನಂತರ ಟ್ರೋಫಿ ಎತ್ತಿ ಹಿಡಿದರು. ಅಂದಿನ ನಾಯಕ ಕಪಿಲ್ ದೇವ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಫೀಲ್ಡಿಂಗ್ ವೇಳೆ ವಿವ್ ರಿಚರ್ಡ್ಸ್ ಅವರನ್ನು ಔಟ್ ಮಾಡಲು ಕ್ಯಾಚ್ ಪಡೆದದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

1983ರ ವಿಶ್ವಕಪ್ ಗೆದ್ದ ಕ್ಷಣದಲ್ಲಿ ಭಾರತವು ಟೂತ್ಪೇಸ್ಟ್ಗಾಗಿ ಉತ್ತಮ ಜಾಹೀರಾತನ್ನು ಮಾಡಬಹುದಿತ್ತು ಎಂದು ಸುನಿಲ್ ಗವಾಸ್ಕರ್ ಹಾಸ್ಯ ಮಾಡಿದರು. ಏಕೆಂದರೆ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿ ನಿರಂತರವಾಗಿ ನಗುತ್ತಿದ್ದರು ಎಂದರು.
"ಗೆಲುವಿನ ನಂತರ ಆ ಕ್ಷಣಗಳು ಹೇಗಿದ್ದವು ಎಂಬುದನ್ನು ಪದಗಳಲ್ಲಿ ಹೇಳುವುದು ಕಷ್ಟ. ನಮ್ಮ ಸುತ್ತಲಿರುವ ಎಲ್ಲರೂ ನಗುತ್ತಿದ್ದರು. ಇದು ಟೂತ್ಪೇಸ್ಟ್ಗೆ ಉತ್ತಮ ಜಾಹೀರಾತನ್ನು ಆಗುತ್ತಿತ್ತು. ಅದನ್ನು ನೋಡುವುದೇ ಹೃದಯಕ್ಕೆ ಆನಂದವಾಗಿತ್ತು," ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
ಜೂನ್ 25, 1983 ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ಐತಿಹಾಸಿಕ ದಿನ. ಏಕೆಂದರೆ, ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ತಮ್ಮ ಮೊದಲ ವಿಶ್ವಕಪ್ ಟ್ರೋಫಿ ಗೆದ್ದ ಅವಿಸ್ಮರಣೀಯ ದಿನವಾಗಿದೆ.
ಭಾರತ ತಂಡವು 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆಲುವಿನೊಂದಿಗೆ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ ದಿನಕ್ಕೆ 40 ವರ್ಷಗಳು ಸಂದಿವೆ. ಇದೇ ವೇಳೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು 1983ರ ವಿಶ್ವಕಪ್ ಗೆಲುವಿನ 40ನೇ ವಾರ್ಷಿಕೋತ್ಸವವನ್ನು ಆಚರಿಸಿದರು.
ಜೂನ್ 25, 1983ರಂದು ಲಂಡನ್ನ ಲಾರ್ಡ್ಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡವು ಪಂದ್ಯಾವಳಿಯ ಫೇವರಿಟ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಭಾರತದ ಸಾಮರ್ಥ್ಯ ತೋರಿಸಿಕೊಟ್ಟಿತು.
60 ಓವರ್ಗಳ ಪಂದ್ಯದಲ್ಲಿ ಭಾರತ ತಂಡ 54.4 ಓವರ್ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಆಂಡಿ ರಾಬರ್ಟ್ಸ್ ಮತ್ತು ಮಾಲ್ಕಮ್ ಮಾರ್ಷಲ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು.
ಪ್ರತ್ಯುತ್ತರವಾಗಿ, ವೆಸ್ಟ್ ಇಂಡೀಸ್ ತಂಡ 52 ಓವರ್ಗಳಲ್ಲಿ 140 ರನ್ಗಳಿಗೆ ಸರ್ವಪತನ ಕಂಡಿತು. ಮೊಹಿಂದರ್ ಅಮರನಾಥ್ ಕೇವಲ 12 ರನ್ಗಳಿಗೆ 3 ವಿಕೆಟ್ಗಳನ್ನು ಪಡೆದರು ಮತ್ತು 43 ರನ್ಗಳಿಂದ ಗೆದ್ದು ಬೀಗಿದರು.