ನವದೆಹಲಿ, ಫೆ. 22: ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರು ಸೋಮವಾರ (ಫೆಬ್ರವರಿ 22) ಯುವ ಜನಾಂಗಕ್ಕೆ ಹುರುಪು ತುಂಬುವ ಮಾತುಗಳನ್ನಾಡಿದ್ದಾರೆ. ಈಗ ಕ್ರಿಕೆಟ್ ಕ್ಷೇತ್ರದಲ್ಲಿ ವೃತ್ತಿಪರರಾದರೆ ಗಳಿಕೆಗೇನು ಬರವಿಲ್ಲ, ಕೋಟಿಗಟ್ಟಲೇ ಸಿಗಲಿದೆ ಎಂದು ಲೆಕ್ಕಾಚಾರ ಮುಂದಿಟ್ಟಿದ್ದಾರೆ.
ಕ್ರೀಡಾಕ್ಷೇತ್ರವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ಮಕ್ಕಳ ಬಗ್ಗೆ ಪೋಷಕರು ಗಾಬರಿಗೊಳ್ಳುವ ಕಾಲ ಈಗ ಹೋಗಿದೆ. ಕ್ರಿಕೆಟ್ ಆಟವನ್ನು ವೃತ್ತಿಯಾಗಿ ಸ್ವೀಕರಿಸಿ ಸಾಕಷ್ಟು ಸಂಪಾದನೆ ಮಾಡಬಹುದಾಗಿದೆ ಎಂದು ಕಪಿಲ್ ಅವರು ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಫಿಕ್ಕಿ) ಆಯೋಜನೆಯ 7ನೇ ಜಾಗತಿಕ ಕ್ರೀಡಾ ಒಕ್ಕೂಟ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.

ಇಂಡಿಯನ್ ಪ್ರಿಮಿಯರ್ ಲೀಗ್ ಬಂದ ಮೇಲೆ ಕ್ರಿಕೆಟರ್ಸ್ 40 ದಿನಗಳಲ್ಲೇ 10 ಕೋಟಿ ರು ಸಂಪಾದಿಸುವ ಅವಕಾಶ ಸಿಕ್ಕಿದೆ. ಈಗ ಪೋಷಕರು ತಮ್ಮ ಮಕ್ಕಳನ್ನು ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ರಂಥ ಆದರ್ಶ ಕ್ರಿಕೆಟರ್ಸ್ ಗಳಾಗಿ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ಹೇಳಿದರು.
ಸರ್ಕಾರದ ನೆರವು ಬೇಕಿದೆ: ಕಾರ್ಪೊರೇಟ್ಸ್, ಮಾಧ್ಯಮಗಳು ಕ್ರಿಕೆಟ್ ಆಟವನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಆದರೆ, ಮೂಲ ಸೌಕರ್ಯ ಅಭಿವೃದ್ಧಿ, ಕ್ರೀಡಾ ಸಾಧನಗಳ ಖರ್ಚು ವೆಚ್ಚ ತಗ್ಗಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ. ಆಗಷ್ಟೇ ಗ್ರಾಮೀಣ ಭಾಗದ ಪ್ರತಿಭೆಗಳು ದೊಡ್ಡ ಮಟ್ಟದ ಕನಸು ಕಾಣಲು ಸಾಧ್ಯ ಎಂದರು.
ಕಳೆದ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ 835 ಕೋಟಿ ರು ಅನುದಾನ ನೀಡಿತ್ತು. ಸುಮಾರು 6,000 ಕೋಟಿ ರು ಸಿಗಬೇಕಿದೆ. ಪ್ರತಿ ಶಾಲೆಗೂ ಮೈದಾನ ಒದಗಿಸುವ ಕಾರ್ಯ ಮೊದಲು ಆಗಬೇಕಿದೆ ಎಂದು ಹೇಳಿದರು. (ಪಿಟಿಐ)