ಆ ಒಂದು ಟ್ರೋಫಿಯ ಮುಂದೆ ಟಿ20 ವಿಶ್ವಕಪ್ ಟ್ರೋಫಿ ದೊಡ್ಡದೇನಲ್ಲ: ಗೌತಮ್ ಗಂಭೀರ್

ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕಳೆದ ಭಾನುವಾರದಿಂದ ಆರಂಭವಾಗಿದೆ. ಹೌದು, ಕಳೆದ ಭಾನುವಾರದಿಂದ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು ಇದರ ಜೊತೆ ವಿವಿಧ ತಂಡಗಳ ಅಭ್ಯಾಸ ಪಂದ್ಯಗಳು ಕೂಡ ನಡೆಯುತ್ತಿವೆ. ಇನ್ನು ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರ ಶನಿವಾರದಿಂದ ಆರಂಭವಾಗುತ್ತಿವೆ. ಹೀಗೆ ಸೂಪರ್ 12 ಹಂತದ ಪಂದ್ಯಗಳು ಸನಿಹವಾಗುತ್ತಿದ್ದಂತೆ ಟೂರ್ನಿಯ ಕುರಿತಾಗಿ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.
2016ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಇಲ್ಲಿಯವರೆಗೂ ಕೂಡಾ ಯಾವುದೇ ವರ್ಷದಲ್ಲಿಯೂ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆದಿರಲಿಲ್ಲ. ಹೀಗೆ ಸುಮಾರು 5 ವರ್ಷಗಳ ಬಳಿಕ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮರಳಿ ಬಂದಿದ್ದು ಕ್ರಿಕೆಟ್ ಪ್ರಿಯರಿಗೆ ಭರಪೂರ ಮನರಂಜನೆ ಸಿಗಲಿದೆ. ಅದರಲ್ಲಿಯೂ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಪಾಲಿಗೆ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿ ತುಸು ಹೆಚ್ಚೇ ಪ್ರಮುಖವಾದದ್ದು ಎಂದು ಹೇಳಿದರೆ ತಪ್ಪಾಗಲಾರದು. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾದ ವರ್ಷದಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದ ಟೀಮ್ ಇಂಡಿಯಾ ಈ ಬಾರಿ ಟ್ರೋಫಿ ಗೆಲ್ಲುವ ತಂಡಗಳ ಪೈಕಿ ಮುಂಚೂಣಿಯಲ್ಲಿದೆ.
ಈಗಾಗಲೇ ಟೂರ್ನಿಯಲ್ಲಿ ನಡೆದಿರುವ 2 ಅಭ್ಯಾಸ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡಿದ್ದು, ಬಲಿಷ್ಠ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳಿಗೆ ಸೋಲುಣಿಸುವುದರ ಮೂಲಕ ಟ್ರೋಫಿ ಗೆಲ್ಲುವ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಿರುವಾಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಏಕದಿನ ವಿಶ್ವಕಪ್ ಮುಂದೆ ಟಿ ಟ್ವೆಂಟಿ ವಿಶ್ವಕಪ್ ದೊಡ್ಡದೇನಲ್ಲ
ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯ ಕುರಿತಾಗಿ ಮಾತನಾಡಿರುವ ಗೌತಮ್ ಗಂಭೀರ್ ಏಕದಿನ ವಿಶ್ವಕಪ್ ಟೂರ್ನಿಗೆ ಹೋಲಿಸಿದರೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮಹತ್ವದ್ದೇನಲ್ಲ ಎಂಬ ಹೇಳಿಕೆ ನೀಡಿದ್ದಾರೆ. "1981ರಲ್ಲಿ ಹುಟ್ಟಿದ ನಾನು 90ರ ದಶಕದಿಂದ ಏಕದಿನ ಕ್ರಿಕೆಟ್ ನೋಡುತ್ತಾ ಬೆಳೆದು ಬಂದಿದ್ದೇನೆ. ಏಕದಿನ ವಿಶ್ವಕಪ್ ಟೂರ್ನಿ 4 ವರ್ಷಗಳಿಗೊಮ್ಮೆ ನಡೆಯಲಿದ್ದು ತನ್ನದೇ ಆದ ಮಹತ್ವವನ್ನು ಹೊಂದಿದೆ. ಆದರೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಹಾಗಲ್ಲ, ಈ ವರ್ಷ ಸದ್ಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಮತ್ತೆ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಹೀಗೆ ಆಗಿಂದಾಗ್ಗೆ ನಡೆಯುವ ಟಿ ಟ್ವೆಂಟಿ ವಿಶ್ವಕಪ್ಗೆ ಏಕದಿನ ವಿಶ್ವಕಪ್ ರೀತಿಯ ಮಹತ್ವವಿಲ್ಲ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿ 3 ವರ್ಷಗಳಿಗೊಮ್ಮೆ ನಡೆಯಬೇಕು
ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು ಸರಿಯಾದ ಅವಧಿಗಳ ಅಂತರದಲ್ಲಿ ನಡೆಯದೆ ಇರುವುದರ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು 3 ವರ್ಷಗಳ ಅಂತರದಲ್ಲಿ ನಡೆಯಬೇಕು. ಹೀಗಿದ್ದಾಗ ಮಾತ್ರ ಚಾಂಪಿಯನ್ ಆಗುವ ತಂಡ 3 ವರ್ಷಗಳ ಕಾಲ ಟಿ ಟ್ವೆಂಟಿ ವಿಶ್ವಕಪ್ ಚಾಂಪಿಯನ್ಸ್ ಎಂದು ಕರೆಸಿಕೊಳ್ಳುತ್ತದೆ. ಹೀಗೆ ವರ್ಷಕ್ಕೊಂದು ಬಾರಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ನಡೆಸಿದರೆ ವರ್ಷಕ್ಕೊಮ್ಮೆ ನೂತನ ಚಾಂಪಿಯನ್ಸ್ ತಂಡ ಹೊರಬೀಳುತ್ತದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ ಈ ಬಾರಿಯ ಟೂರ್ನಿಯಲ್ಲಿ ಮಿಂಚಲಿರುವ ಆಟಗಾರ
"ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರಾಗಿದ್ದಾರೆ. ಆದರೆ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬಲ್ಲ ಆಟಗಾರನೆಂದರೆ ಅದು ಜಸ್ಪ್ರೀತ್ ಬುಮ್ರಾ ಮಾತ್ರ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications