ಟಿ20 ವಿಶ್ವಕಪ್ ಫೈನಲ್ನ ಕೊನೆಯ ಓವರ್
ಟಿ20 ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಟೀಮ್ ಇಂಡಿಯಾಗೆ ಫೈನಲ್ನಲ್ಲಿ ಎದುರಾಗಿದ್ದು ಬದ್ಧ ಎದುರಾಳಿ ಮಿಸ್ಬಾ ಉಲ್ ಹಕ್ ನೇತೃತ್ವದ ಪಾಕಿಸ್ತಾನ ತಂಡ. ಮೊದಲಿಗೆ ಬ್ಯಾಟಿಂಗ್ ನಡೆಸಿದ್ದ ಟೀಮ್ ಇಂಡಿಯಾ ನೀಡಿದ್ದ ಗುರಿಯನ್ನು ಪಾಕಿಸ್ತಾನ ಬೆನ್ನಟ್ಟಿತ್ತು. ಕೊನೆಯ ಓವರ್ನಲ್ಲಿ ಪಾಕಿಸ್ತಾನಕ್ಕೆ 13 ರನ್ಗಳ ಅಗತ್ಯವಿತ್ತು. ಪಾಕಿಸ್ತಾನ ತನ್ನ 9 ವಿಕೆಟ್ ಕಳೆದುಕೊಂಡಿತ್ತು. ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಅಂತೊಮ ಓವರ್ನಲ್ಲಿ ಕ್ರೀಸ್ನಲ್ಲಿದ್ದರು.
ಜೋಗಿಂದರ್ ಶರ್ಮಾಗೆ ಚೆಂಡು ನೀಡಿದ್ದ ಧೋನಿ
ಧೋನಿಯ ಮುಂದೆ ಈ ಸಂದರ್ಭದಲ್ಲಿ ಎರಡು ಬೌಲಿಂಗ್ ಆಯ್ಕೆಗಳು ಇದ್ದವು. ಅನುಭವಿ ಹರ್ಭಜನ್ ಸಿಂಗ್ ಅವರ ಬೌಲಿಂಗ್ ಕೋಟಾ ಇನ್ನೂ ಬಾಕಿಯಿತ್ತು. ಮತ್ತೊಂದೆಡೆ ಯುವ ಆಟಗಾರ ಜೋಗಿಂದರ್ ಶರ್ಮಾಕೂಡ ಒಂದು ಓವರ್ ಎಸೆಯುವ ಅವಕಾಶವಿತ್ತು. ಎಲ್ಲರೂ ಅನುಭವಿ ಹರ್ಭಜನ್ ಸಿಂಗ್ ಕೈಗೆ ಬಾಲ್ ನೀಡುತ್ತಾರೆ ಎಂದೇ ಯೋಚಿಸಿದ್ದರು. ಆದರೆ ಧೋನಿ ಚೆಂಡು ನೀಡಿದ್ದು ಜೋಗಿಂದರ್ ಶರ್ಮಾ ಕೈಗೆ. ಮೊದಲೆರಡು ಎಸೆತದಲ್ಲಿ ಸಿಕ್ಸರ್ ಸಹಿತ ರನ್ ನೀಡಿದ ಜೋಗಿಂದರ್ ಶರ್ಮಾ ಧೋನಿ ನಿರ್ಧಾರವನ್ನು ಬುಡಮೇಲು ಮಾಡುತ್ತಾರೆ ಎಂದೇ ಎಲ್ಲಾರೂ ಭಾವಿಸಿದ್ದರು. ಆದರೆ ಮುಂದಿನ ಎಸೆತದಲ್ಲಿ ಪಾಕಿಸ್ತಾನ ನಾಯಕ ಮಿಸ್ಬಾ ಉಲ್ ಹಕ್ ವಿಕೆಟ್ ಕಿತ್ತು ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದರು.
2011ರ ವಿಶ್ವಕಪ್ ಫೈನಲ್ನಲ್ಲಿಯೂ ಅಚ್ಚರಿ ಮೂಡಿಸಿದ್ದ ಧೋನಿ
ಧೋನಿ ತೆಗೆದುಕೊಂಡ ಇನ್ನೊಂದು ಅಚ್ಚರಿಯ ನಿರ್ಧಾರವೆಂದರೆ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದ ಫೈನಲ್ ಪಂದ್ಯದಲ್ಲಿ. ಟೀಮ್ ಇಂಡಿಯಾ ಗೆಲ್ಲಲು 28.2 ಓವರ್ಗಳಲ್ಲಿ 161ರನ್ಗಳ ಅಗತ್ಯವಿತ್ತು. ಟೀಮ್ ಇಂಡಿಯಾ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟ್ ರೂಪದಲ್ಲಿ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆಯೇ ಟೂರ್ನಿಯುದ್ದಕ್ಕೂ ಅದ್ಭುತ ಫಾರ್ಮ್ನಲ್ಲಿದ್ದ ಯುವರಾಜ್ ಅಂಗಳಕ್ಕಿಳಿಯಬೇಕಿತ್ತು.
ಯುವಿ ಬದಲು ಅಂಗಳಕ್ಕಿಳಿದಿದ್ದರು ಧೋನಿ
ಕ್ರಿಕೆಟ್ನ ಅಭಿಮಾನಿಗಳು ಇಂತಾ ಸಂದರ್ಭದಲ್ಲಿ ಯುವರಾಜ್ ಸಿಂಗ್ ಅಂಗಳದಕ್ಕಿಳಿಯುವುದನ್ನು ನಿರೀಕ್ಷಿಸುತ್ತಿದ್ದರು. ಕ್ರಮಾಂಕದ ಪ್ರಕಾರ ಯುವರಾಜ್ ಸಿಂಗ್ ಅವರೇ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಯುವಿಯ ಬದಲು ಟೀಮ್ ಇಂಡಿಯಾ ನಾಯಕ ಧೋನಿ ತಾನೇ ಆಡಲು ನಿರ್ಧರಿಸಿದ್ದರು. ಮಾತ್ರವಲ್ಲ ಗೌತಮ್ ಗಂಭೀರ್ ಜೊತೆಗೆ ಅದ್ಭುತ ಪ್ರದರ್ಶನ ನೀಡುತ್ತಾ ಸಾಗಿದ್ದರು. ಈ ಪಂದ್ಯದಲ್ಲಿ ಧೋನಿ ಅಜೇಯ 91 ರನ್ ಗಳಿಸಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಭಾರತ ವಿಶ್ವಕಪ್ ಗೆದ್ದು ಬೀಗಿತ್ತು
ವಿವಾದಕ್ಕೆ ಕಾರಣವಾದ ರೊಟೇಶನ್ ಪದ್ದತಿ
ಮಹೇಂದ್ರ ಸಿಂಗ್ ಧೋನಿ ತೆಗೆದುಕೊಂಡ ಒಂದು ವಿವಾದಿತ ನಿರ್ಧಾರವೆಂದರೆ ಅದು 2012ರ ಏಕದಿನ ತ್ರಿಕೋನ ಸರಣಿಯ ನಿರ್ಧಾರ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಈ ಸರಣಿಯಲ್ಲಿ ಭಾಗಿಯಾಗಿತ್ತು. ಟೀಮ್ ಇಂಡಿಯಾದ ಅಗ್ರ ಮೂವರು ಆಟಗಾರರನ್ನು ರೊಟೇಶನ್ ಪದ್ದತಿಯಲ್ಲಿ ಆಡಿಸಿದ್ದರು ಧೋನಿ. ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರಿಗೆ ರೊಟೆಶನ್ ಆಧಾರದಲ್ಲಿ ವಿಶ್ರಾಂತಿ ನೀಡಲು ನಾಯಕ ಮಾಹಿ ನಿರ್ಧಾರ ಮಾಡಿದ್ದರು.
ಧೋನಿ ನಿರ್ಧಾರ ವೈಫಲ್ಯ
ರೊಟೇಶನ್ ಪದ್ದತಿಯಲ್ಲಿ ಧೋನಿ ಅಪರೂಪವೆಂಬಂತೆ ವೈಫಲ್ಯವನ್ನು ಕಂಡರು. ಈ ನಿರ್ಧಾರ ಸಾಕಷ್ಟು ವಿವಾದಕ್ಕೂ ಕಾರಣವಾಯಿತು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸದೆಯೇ ಹೊರಬಿದ್ದಿದ್ದು ಈ ವಿವಾದ ಹೆಚ್ಚಾಗಲು ಕಾರಣವಾಗಿತ್ತು. ಆದರೆ ತಮ್ಮ ನಿರ್ಧಾರವನ್ನು ನಾಯಕ ಮಾಹಿ ಸಮರ್ಥಿಸಿಕೊಂಡರು. ಆಟಗಾರರು ಗಾಯಗೊಳ್ಳುವುದರಿಂದ ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ಸ್ಪಷ್ಟನೆ ನೀಡಿದ್ದರು ಧೋನಿ. ಆದರೆ ಈ ನಿರ್ಧಾರದ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ನಿವೃತ್ತಿಯ ಬಳಿಕ ಧೋನಿಯನ್ನು ಟೀಕಿಸಿದ್ದರು.
ಡ್ಯಾಡ್ಸ್ ಆರ್ಮಿ ಜೊತೆಗೆ ಐಪಿಎಲ್ನಲ್ಲಿ ಕಣಕ್ಕೆ
ಐಪಿಎಲ್ನಲ್ಲಿ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ವರ್ಷಗಳ ನಿಷೇಧವನ್ನು ಪೂರ್ಣಗೊಳಿಸಿ ವಾಪಾಸ್ ಸ್ಪರ್ಧಾ ಕಣಕ್ಕೆ ಇಳಿದಿತ್ತು. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸದಾಗಿ ಆಯ್ಕೆ ಮಾಡಿಕೊಳ್ಳುವಾಗಲೂ ಹಿರಿಯ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಂಡಿತ್ತು. ತಂಡದ ಎಲ್ಲಾ ಆಟಗಾರರೂ 30 ವರ್ಷ ದಾಟಿದವರೇ ಆಗಿದ್ದರು. ಕೆಲವರಂತೂ 40ರ ಸನಿಹದಲ್ಲಿದ್ದರು. ಈ ಕಾರಣಕ್ಕೆ ಸಿಎಸ್ಕೆ ತಂಡವನ್ನು ಡ್ಯಾಡ್ಸ್ ಆರ್ಮಿ ಎಂದು ತಮಾಷೆಯಾಡಲು ಆರಂಭಿಸಿದರು. ಆದರೆ ಈ ಟೀಕೆಯ ಮಧ್ಯೆಯೂ ಹಿರಿಯ ಆಟಗಾರರ ಅದ್ಭುತ ಪ್ರದರ್ಶನದೊಂದಿಗೆ ಧೋನಿ ನೇತೃತ್ವದ ತಂಡ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.