
ನವದೆಹಲಿ, ಜುಲೈ 13: ಸಿಹಿದ್ದಿರಲಿ ಇಲ್ಲ ಕಹಿಯದ್ದೇ ಆಗಿರಲಿ ನೆನಪುಗಳೆಷ್ಟು ಚಂದವಲ್ಲವೆ? ಸಿಹಿ ನೆನಪುಗಳು ಖುಷಿ ತಂದರೆ ಕಹಿ ನೆನಪುಗಳು ಕಿವಿಯ ಬಳಿ ಎಂಥದ್ದೋ ಪಾಠ ಉಸುರುತ್ತವೆ. ಭಾರತದ ಕ್ರಿಕೆಟ್ ಇತಿಹಾಸದಲ್ಲೂ ಅಪರೂಪದ ಕ್ಷಣವನ್ನು ನೆನಪಿಸೋ ದಿನವೊಂದಿಗೆ; ಅದು ಪ್ರತೀ ಜುಲೈ 13.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಈಗ ಕಾಮೆಂಟರಿ ಬಾಕ್ಸ್ನಲ್ಲಿ ಕೂತು, ಟೀಮ್ ಇಂಡಿಯಾ ಮೇಲುಗೈ ಸಾಧಿಸಿದಾಗೆಲ್ಲ ಹುರುಪಿನಿಂದ ದನಿ ಸೇರಿಸುವ, ಪ್ರಮುಖ ಪಂದ್ಯದಲ್ಲಿ ದೇಸಿ ತಂಡ ಸೋಲಿನಂಚಿಗೆ ಸರಿದಾಗ ಮಾತೇ ಬಾರದೆ ಮನಸ್ಸಲ್ಲೇ ಮರುಗುವ ಹೆಮ್ಮೆಯ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇದ್ದಾರಲ್ಲ? ಅದೇ ದಾದ ಹಿಂದೊಮ್ಮೆ ಇದೇ ಜುಲೈ 13ರಂದು ಲಂಡನ್ನ ಲಾರ್ಡ್ಸ್ ಸ್ಟೇಡಿಯಂ ನಲ್ಲಿ ಭಾರತದ ಗೆಲುವನ್ನು ಬಟ್ಟೆ ಬಿಟ್ಟಿ ಸಂಭ್ರಮಾಚರಿಸಿಕೊಂಡಿದ್ದರು.
2002ರ ಜುಲೈ 13ರಂದು ಲಂಡನ್ನ ಲಾರ್ಡ್ಸ್ನಲ್ಲಿ ನಡೆದಿದ್ದ ಇಂಗ್ಲೆಂಡ್, ಭಾರತ, ಶ್ರೀಲಂಕಾ ನಡುವಣ ತ್ರಿಕೋನ ಸರಣಿಯ (ನ್ಯಾಟ್ ವೆಸ್ಟ್ ಸೀರೀಸ್) ಕೊನೇ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ 2 ವಿಕೆಟ್ ಗೆಲುವಿನೊಂದಿಗೆ ಸರಣಿ ಜಯಿಸಿತ್ತು. ಈ ವೇಳೆ ಬಂಗಾಳ ಹುಲಿ ಗಂಗೂಲಿ ಪೆವಿಲಿಯನ್ನಲ್ಲಿ ಬಟ್ಟೆ ಬಿಚ್ಚಿ ಸಂಭ್ರಮಿಸಿದ್ದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ಮಾರ್ಕಸ್ ಟ್ರೆಸ್ಕೊಥಿಕ್ ಮತ್ತು ನಾಯಕ ನಾಸಿರ್ ಹುಸೇನ್ ಶತಕದ ನೆರವಿನೊಂದಿಗೆ 50 ಓವರ್ಗೆ 5 ವಿಕೆಟ್ ನಷ್ಟದಲ್ಲಿ 325 ರನ್ ಗಳಿಸಿತ್ತು. ಗುರಿ ಬೆಂಬತ್ತಿದ ಭಾರತ, ನಾಯಕ ಗಂಗೂಲಿ 60, ವೀರೇಂದ್ರ ಸೆಹ್ವಾಗ್ 45, ಯುವರಾಜ್ ಸಿಂಗ್ 69, ಮೊಹಮ್ಮದ್ ಕೈಫ್ ಅಜೇಯ 87 ರನ್ನೊಂದಿಗೆ 49.3 ಓವರ್ನಲ್ಲಿ 8 ವಿಕೆಟ್ ಕಳೆದು 326 ರನ್ ಬಾರಿಸಿತ್ತು.