ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಸಾಯಿ ಕೃಷ್ಣನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಪರಿಕಲ್ಪನೆಯಲ್ಲಿ ಫೆಬ್ರವರಿ 8 ರಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ಲೆಂಜೆಡ್ಸ್ ವಿರುದ್ಧ ಇಂಡಿಯಾ ಲೆಂಜೆಡ್ಸ್ ತಂಡ ಗೆದ್ದು ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಟೂರ್ನಿಯಲ್ಲಿ ಹಲವಾರು ಮಾಜಿ ದಿಗ್ಗಜರಾದ ವೆಂಕಟೇಶ್ ಪ್ರಸಾದ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಮಾರ್ವನ್ ಅಟಪಟ್ಟು, ಅರವಿಂದ ಡಿ ಸಿಲ್ವಾ, ಮುತ್ತಯ್ಯ ಮುರಳೀಧರನ್, ಅರ್ಜುನ ರಣತುಂಗ ಮತ್ತು ಚಮಿಂಡಾ ವಾಸ್ ಮುಖಾಮುಖಿಯಾದವರಲ್ಲಿ ಪ್ರಮುಖರಾಗಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಶ್ರೀಲಂಕಾ ಲೆಜೆಂಡ್ಸ್ ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಇಂಡಿಯಾ ಲೆಜೆಂಡ್ಸ್ ಬ್ಯಾಟಿಂಗ್ ಮಾಡಿತು. ನಮನ್ ಓಜಾ (53) ಮತ್ತು ಯೂಸುಫ್ ಪಠಾಣ್ (61) ಅರ್ಧಶತಕದ ನೆರವಿನಿಂದ ಇಂಡಿಯಾ ಲೆಜೆಂಡ್ಸ್ 6 ವಿಕೆಟ್ ನಷ್ಟಕ್ಕೆ 195 ರನ್ಗಳನ್ನು ಕಲೆ ಹಾಕಿತು. ಶ್ರೀಲಂಕಾ ಪರ ತಿಲನ್ ಸಮರವೀರ ಹಾಗು ಅಸೇಲ ಗುಣರತ್ನೆ ತಲಾ ಎರಡು ವಿಕೆಟ್ ಪಡೆದರು.

ಇಂಡಿಯಾ ಲೆಜೆಂಡ್ಸ್ ನೀಡಿದ 196 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ಲೆಜೆಂಡ್ಸ್ ದಿಟ್ಟ ಪ್ರದರ್ಶನ ನೀಡಿತು. ಆದರೆ ಇಂಡಿಯಾ ಲೆಜೆಂಡ್ಸ್ ನಾಯಕ ವೆಂಕಟೇಶ್ ಪ್ರಸಾದ್ ಮತ್ತು ಮನೋಜ್ ತಿವಾರಿ ಉರಿ ಬೌಲಿಂಗ್ ದಾಳಿ ನಡೆಸಿದರು. ಪರಿಣಾಮ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು ಕೇವಲ 190 ರನ್ ಗಳಿಸಿತು. ಈ ಮೂಲಕ ಇಂಡಿಯಾ 6 ರನ್ಗಳಿಂದ ಗೆದ್ದು ಬೀಗಿತು. ವೆಂಕಟೇಶ್ ಪ್ರಸಾದ್ ಮತ್ತು ಮನೋಜ್ ತಿವಾರಿ ತಲಾ ಮೂರು ವಿಕೆಟ್ ಕಬಳಿಸಿದರು.
ಒನ್ ವರ್ಲ್ಡ್ (ಭಾರತ) ತಂಡದ ನಾಯಕ ವೆಂಕಟೇಶ್ ಪ್ರಸಾದ್ ಮಾತನಾಡಿ, 'ಮತ್ತೊಮ್ಮೆ ಮೈದಾನದಲ್ಲಿ ಮಾನವೀಯ ಕಾರಣಕ್ಕಾಗಿ ಆಡುವುದು ತುಂಬಾ ಖುಷಿಯಾಗಿದೆ. ಅಂತಿಮವಾಗಿ ಗೆಲುವು ಮತ್ತು ಸೋಲು ಇಲ್ಲಿ ಮುಖ್ಯವಲ್ಲ, ಏಕೆಂದರೆ ಅಗತ್ಯವಿರುವವರು ಪಂದ್ಯದ ಆದಾಯದಿಂದ ಪ್ರಯೋಜನ ಪಡೆಯುತ್ತಾರೆ. ಮಕ್ಕಳಿಗೆ ಪೌಷ್ಟಿಕ ಬೆಳಗಿನ ಊಟ, ಅಗತ್ಯವಿರುವವರಿಗೆ ಉಚಿತ ಆರೋಗ್ಯ ಸೇವೆ ಮತ್ತು ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಮೀಸಲಾಗಿರುವ ಎಸ್ಎಂಎಸ್ ಜಿ ಎಚ್ಎಂನೊಂದಿಗೆ ನಾವು ಸಂಬಂಧ ಹೊಂದಲು ವಿನಮ್ರರಾಗಿದ್ದೇವೆ. ಅಂತಿಮವಾಗಿ, ಮಾನವೀಯತೆಯನ್ನು ಉತ್ತೇಜಿಸಲು ಮತ್ತು ಸದ್ಗುರು ಶ್ರೀ ಮಧುಸೂದನ್ ಸಾಯಿ ನೇತೃತ್ವದ ಅಸಾಧಾರಣ ಜಾಗತಿಕ ಉಪಕ್ರಮಕ್ಕೆ ಸಹಾಯ ಹಸ್ತ ಚಾಚಲು 'ಒನ್ ವರ್ಲ್ಡ್ ಒನ್ ಕಪ್' ಕುಟುಂಬದ ಭಾಗವಾಗುವುದು ದೊಡ್ಡ ಗುರಿಯಾಗಿದೆ' ಎಂದು ಹೇಳಿದರು.
ಪಂದ್ಯದ ಅಧ್ಯಕ್ಷತೆ ವಹಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ, 'ಈ ಕ್ರಿಕೆಟ್ ಫಾರ್ ಎ ಕಾಸ್ ಮಾನವೀಯತೆಯನ್ನು ಆಚರಿಸುವ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನದಲ್ಲಿ ಬದಲಾವಣೆ ತರುವ ಮಿಷನ್ ಅನ್ನು ಬೆಂಬಲಿಸುವ ಸಂದರ್ಭವಾಗಿದೆ. ಕ್ರಿಕೆಟ್ ಭಾರತದಲ್ಲಿ ಎಂದಿಗೂ ಕೇವಲ ಒಂದು ಕ್ರೀಡೆಯಾಗಿರಲಿಲ್ಲ. ಬದಲಿಗೆ ಅದನ್ನು ಯಾವಾಗಲೂ ಒಂದು ಧರ್ಮವಾಗಿ ಗೌರವಿಸಲಾಗುತ್ತದೆ. ಮಾನವೀಯತೆಯನ್ನು ಬೆಂಬಲಿಸಲು ಮತ್ತು ಅಭಿವೃದ್ಧಿಪಡಿಸಲು ಕ್ರಿಕೆಟ್ ಐಕಾನ್ಗಳು ಒಟ್ಟಾಗಿ ಬರುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ ಎಂದು ನುಡಿದರು.