ಕುಂಬ್ಳೆ ಮಾಡಿದ್ದೇ ಸರಿ; ಕೊಹ್ಲಿ - ರವಿಶಾಸ್ತ್ರಿ ಕೈಗೊಂಡಿದ್ದ ಆ ನಿರ್ಧಾರವನ್ನು ಕಿತ್ತೊಗೆದ ಕೋಚ್ ದ್ರಾವಿಡ್!

ಇತ್ತೀಚೆಗಷ್ಟೇ ಯುಎಇಯಲ್ಲಿ ಮುಕ್ತಾಯಗೊಂಡ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ವಿಫಲವಾದ ಟೀಮ್ ಇಂಡಿಯಾ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು. ಸೂಪರ್ 12 ಹಂತದಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಸೋಲುವುದರ ಮೂಲಕ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡ ಟೀಮ್ ಇಂಡಿಯಾ ಮಂಕಾಯಿತು. ಹಾಗೂ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಿದವು. ಇತ್ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ಸೋಲುವುದರ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ತನ್ನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲ ಹೊಂದಿ, ರನ್ನರ್ ಅಪ್ ಆಗಿ ಟೂರ್ನಿಯಿಂದ ಹೊರ ಹೊಮ್ಮಿತು.
ಹೀಗೆ ಟಿ 20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ನ್ಯೂಜಿಲೆಂಡ್ ಭಾರತ ಪ್ರವಾಸವನ್ನು ಕೈಗೊಂಡಿದ್ದು 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಇತ್ತಂಡಗಳ ನಡುವೆ ನಡೆದ ಟಿ ಟ್ವೆಂಟಿ ಸರಣಿಯಲ್ಲಿ ಈಗಾಗಲೇ ಭಾರತ ಎಲ್ಲ 3 ಪಂದ್ಯಗಳನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ವೈಟ್ ವಾಶ್ ಬಳಿದಿದೆ. ಇನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿ ಕೂಡ ಆರಂಭವಾಗಿದ್ದು ಇತ್ತಂಡಗಳ ನಡುವಿನ ಮೊದಲನೇ ಪಂದ್ಯ ಕಾನ್ಪುರದ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಹಲವಾರು ಅನುಭವಿ ಆಟಗಾರರು ಅಲಭ್ಯರಾಗಿರುವ ಕಾರಣದಿಂದಾಗಿ ತಂಡದಲ್ಲಿ ನೂತನ ಆಟಗಾರರಿಗೆ ಆಡುವ ಅವಕಾಶ ದೊರೆತಿದೆ.
ಹೌದು, ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅಂತಾರಾಷ್ಟ್ರೀಯ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದಾರೆ. ಭಾರತದ ಪರ 303ನೇ ಟೆಸ್ಟ್ ಆಟಗಾರನಾಗಿ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ಅವರಿಗೆ ಹಲವಾರು ಕ್ರಿಕೆಟ್ ದಿಗ್ಗಜರಿಂದ ಶುಭಾಶಯಗಳು ಹರಿದು ಬಂದಿವೆ. ಇನ್ನು ಟೀಮ್ ಇಂಡಿಯಾಗೆ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಆಗಮನದಿಂದ ಬದಲಾವಣೆಯ ಗಾಳಿ ಬೀಸುತ್ತಿರುವುದು ನಿಜ. ರಾಹುಲ್ ದ್ರಾವಿಡ್ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗಲಿವೆ ಎಂದು ಹಲವಾರು ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿದಿದ್ದರು. ಅದರಂತೆಯೇ ಇದೀಗ ತಾವು ತರಬೇತುದಾರನಾಗಿ ಕೆಲಸ ಆರಂಭಿಸಿದ ಮೊದಲನೇ ಸರಣಿಯಲ್ಲಿಯೇ ರಾಹುಲ್ ದ್ರಾವಿಡ್ ದೊಡ್ಡ ಬದಲಾವಣೆಯೊಂದನ್ನು ತಂದಿದ್ದಾರೆ. ಈ ಹಿಂದೆ ಅನಿಲ್ ಕುಂಬ್ಳೆ ಅನುಸರಿಸುತ್ತಿದ್ದ ಈ ಕೆಳಕಂಡ ಸಂಪ್ರದಾಯವನ್ನು ರಾಹುಲ್ ದ್ರಾವಿಡ್ ಮತ್ತೆ ಜಾರಿಗೆ ತಂದಿದ್ದಾರೆ.

ಪದಾರ್ಪಣೆ ಮಾಡುವ ಆಟಗಾರರಿಗೆ ದಿಗ್ಗಜರಿಂದ ಕ್ಯಾಪ್ ವಿತರಣೆ
ಈ ಹಿಂದೆ ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಕೋಚ್ ಆಗಿದ್ದಾಗ ಯಾರಾದರೂ ನೂತನ ಆಟಗಾರ ತಂಡ ಸೇರಿದರೆ ಭಾರತ ಕ್ರಿಕೆಟ್ ದಿಗ್ಗಜರಿಂದ ಆ ನೂತನ ಆಟಗಾರರಿಗೆ ಕ್ಯಾಪ್ ವಿತರಣೆ ಮಾಡುವ ಮೂಲಕ ತಂಡಕ್ಕೆ ಸ್ವಾಗತಿಸುತ್ತಿದ್ದರು. ಇದೀಗ ಅನಿಲ್ ಕುಂಬ್ಳೆ ಅವರ ಈ ಹಳೆಯ ಸಂಪ್ರದಾಯವನ್ನೇ ರಾಹುಲ್ ದ್ರಾವಿಡ್ ಮರಳಿ ಜಾರಿಗೆ ತಂದಿದ್ದು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಟೆಸ್ಟ್ ತಂಡ ಸೇರಿದ ಶ್ರೇಯಸ್ ಅಯ್ಯರ್ ಅವರಿಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರಿಂದ ಕ್ಯಾಪ್ ಕೊಡಿಸಲಾಯಿತು. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಹರ್ಷಲ್ ಪಟೇಲ್ ಅವರಿಗೂ ಕೂಡ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರಿಂದ ಕ್ಯಾಪ್ ಕೊಡಿಸಲಾಗಿತ್ತು.

ರವಿಶಾಸ್ತ್ರಿ ಕೋಚ್ ಆದ ನಂತರ ಬದಲಾಗಿತ್ತು ಈ ಸಂಪ್ರದಾಯ!
2016ರಿಂದ 2017ರವರೆಗೆ ಅನಿಲ್ ಕುಂಬ್ಳೆ ಭಾರತದ ಹೆಡ್ ಕೋಚ್ ಆಗಿದ್ದರು. ಈ ಸಂದರ್ಭದಲ್ಲಿ ತಂಡಕ್ಕೆ ಪದಾರ್ಪಣೆ ಮಾಡುವ ನೂತನ ಆಟಗಾರರಿಗೆ ದಿಗ್ಗಜ ಕ್ರಿಕೆಟಿಗರಿಂದ ಕ್ಯಾಪ್ ಕೊಡಿಸಲಾಗುತ್ತಿತ್ತು. ಆದರೆ ಈ ಸಂಪ್ರದಾಯಕ್ಕೆ 2017ರಲ್ಲಿ ಅನಿಲ್ ಕುಂಬ್ಳೆ ನಂತರ ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಬ್ರೇಕ್ ಹಾಕಿದ್ದರು. ರವಿಶಾಸ್ತ್ರಿ ಹೆಡ್ ಕೋಚ್ ಆಗಿ ಆಯ್ಕೆಯಾದ ನಂತರ ತಂಡ ಸೇರುತ್ತಿದ್ದ ಪ್ರತಿಯೊಬ್ಬ ಆಟಗಾರನಿಗೂ ನಾಯಕ ವಿರಾಟ್ ಕೊಹ್ಲಿ ಅಥವಾ ಸದ್ಯ ಟೀಮ್ ಇಂಡಿಯಾಲ್ಲಿ ಸ್ಥಾನ ಪಡೆದುಕೊಂಡಿರುವ ಕೆಲ ಪ್ರಮುಖ ಆಟಗಾರರಿಂದ ಕ್ಯಾಪ್ ಕೊಡಿಸಲು ಶುರು ಮಾಡಲಾಗಿತ್ತು. ಆದರೆ ಇದೀಗ ರಾಹುಲ್ ದ್ರಾವಿಡ್ ಆಗಮನದಿಂದ ಕೊಹ್ಲಿ ಮತ್ತು ರವಿಶಾಸ್ತ್ರಿ ಸಮಯದಲ್ಲಿ ಅನುಸರಿಸುತ್ತಿದ್ದ ಸಂಪ್ರದಾಯವನ್ನು ತೆಗೆದು ಹಾಕಲಾಗಿದ್ದು, ಅನಿಲ್ ಕುಂಬ್ಳೆ ಮಾದರಿಯಲ್ಲೇ ನೂತನ ಆಟಗಾರರಿಗೆ ರಾಹುಲ್ ದ್ರಾವಿಡ್ ದಿಗ್ಗಜ ಕ್ರಿಕೆಟಿಗರಿಂದ ಕ್ಯಾಪ್ ಕೊಡಿಸುತ್ತಿದ್ದಾರೆ.

ದಿಗ್ಗಜ ಕ್ರಿಕೆಟಿಗರಿಂದ ಕ್ಯಾಪ್ ಕೊಡಿಸುವುದು ಉತ್ತಮ ಬೆಳವಣಿಗೆ
ರಾಹುಲ್ ದ್ರಾವಿಡ್ ಮತ್ತೆ ಅನಿಲ್ ಕುಂಬ್ಳೆ ಅವರ ಸಂಪ್ರದಾಯವನ್ನು ಜಾರಿಗೆ ತಂದಿರುವುದು ಒಳ್ಳೆಯ ವಿಷಯವೇ. ತಂಡದಲ್ಲಿ ಇರುವ ಸಹ ಆಟಗಾರರಿಂದ ಯುವ ಆಟಗಾರರು ಕ್ಯಾಪ್ ಸ್ವೀಕರಿಸುವ ಬದಲು, ತಾವು ಚಿಕ್ಕ ಹುಡುಗರಾಗಿದ್ದಾಗಿನಿಂದ ಕ್ರಿಕೆಟ್ ನೋಡುತ್ತಾ, ಆರಾಧಿಸುತ್ತಾ ಬಂದಿದ್ದ ದಿಗ್ಗಜ ಕ್ರಿಕೆಟಿಗರಿಂದ ಕ್ಯಾಪ್ ಸ್ವೀಕರಿಸಿದರೆ ಹೆಚ್ಚಿನ ಉತ್ತೇಜನ ಸಿಕ್ಕಂತಾಗಲಿದೆ. ಹೀಗಾಗಿಯೇ ರಾಹುಲ್ ದ್ರಾವಿಡ್ ಅವರ ಈ ನಿರ್ಧಾರಕ್ಕೆ ಭಾರತ ಕ್ರಿಕೆಟ್ ಅಭಿಮಾನಿಗಳು ಜೈ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications