
ಪದಾರ್ಪಣೆ ಮಾಡುವ ಆಟಗಾರರಿಗೆ ದಿಗ್ಗಜರಿಂದ ಕ್ಯಾಪ್ ವಿತರಣೆ
ಈ ಹಿಂದೆ ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಕೋಚ್ ಆಗಿದ್ದಾಗ ಯಾರಾದರೂ ನೂತನ ಆಟಗಾರ ತಂಡ ಸೇರಿದರೆ ಭಾರತ ಕ್ರಿಕೆಟ್ ದಿಗ್ಗಜರಿಂದ ಆ ನೂತನ ಆಟಗಾರರಿಗೆ ಕ್ಯಾಪ್ ವಿತರಣೆ ಮಾಡುವ ಮೂಲಕ ತಂಡಕ್ಕೆ ಸ್ವಾಗತಿಸುತ್ತಿದ್ದರು. ಇದೀಗ ಅನಿಲ್ ಕುಂಬ್ಳೆ ಅವರ ಈ ಹಳೆಯ ಸಂಪ್ರದಾಯವನ್ನೇ ರಾಹುಲ್ ದ್ರಾವಿಡ್ ಮರಳಿ ಜಾರಿಗೆ ತಂದಿದ್ದು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಟೆಸ್ಟ್ ತಂಡ ಸೇರಿದ ಶ್ರೇಯಸ್ ಅಯ್ಯರ್ ಅವರಿಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರಿಂದ ಕ್ಯಾಪ್ ಕೊಡಿಸಲಾಯಿತು. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಹರ್ಷಲ್ ಪಟೇಲ್ ಅವರಿಗೂ ಕೂಡ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರಿಂದ ಕ್ಯಾಪ್ ಕೊಡಿಸಲಾಗಿತ್ತು.

ರವಿಶಾಸ್ತ್ರಿ ಕೋಚ್ ಆದ ನಂತರ ಬದಲಾಗಿತ್ತು ಈ ಸಂಪ್ರದಾಯ!
2016ರಿಂದ 2017ರವರೆಗೆ ಅನಿಲ್ ಕುಂಬ್ಳೆ ಭಾರತದ ಹೆಡ್ ಕೋಚ್ ಆಗಿದ್ದರು. ಈ ಸಂದರ್ಭದಲ್ಲಿ ತಂಡಕ್ಕೆ ಪದಾರ್ಪಣೆ ಮಾಡುವ ನೂತನ ಆಟಗಾರರಿಗೆ ದಿಗ್ಗಜ ಕ್ರಿಕೆಟಿಗರಿಂದ ಕ್ಯಾಪ್ ಕೊಡಿಸಲಾಗುತ್ತಿತ್ತು. ಆದರೆ ಈ ಸಂಪ್ರದಾಯಕ್ಕೆ 2017ರಲ್ಲಿ ಅನಿಲ್ ಕುಂಬ್ಳೆ ನಂತರ ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಬ್ರೇಕ್ ಹಾಕಿದ್ದರು. ರವಿಶಾಸ್ತ್ರಿ ಹೆಡ್ ಕೋಚ್ ಆಗಿ ಆಯ್ಕೆಯಾದ ನಂತರ ತಂಡ ಸೇರುತ್ತಿದ್ದ ಪ್ರತಿಯೊಬ್ಬ ಆಟಗಾರನಿಗೂ ನಾಯಕ ವಿರಾಟ್ ಕೊಹ್ಲಿ ಅಥವಾ ಸದ್ಯ ಟೀಮ್ ಇಂಡಿಯಾಲ್ಲಿ ಸ್ಥಾನ ಪಡೆದುಕೊಂಡಿರುವ ಕೆಲ ಪ್ರಮುಖ ಆಟಗಾರರಿಂದ ಕ್ಯಾಪ್ ಕೊಡಿಸಲು ಶುರು ಮಾಡಲಾಗಿತ್ತು. ಆದರೆ ಇದೀಗ ರಾಹುಲ್ ದ್ರಾವಿಡ್ ಆಗಮನದಿಂದ ಕೊಹ್ಲಿ ಮತ್ತು ರವಿಶಾಸ್ತ್ರಿ ಸಮಯದಲ್ಲಿ ಅನುಸರಿಸುತ್ತಿದ್ದ ಸಂಪ್ರದಾಯವನ್ನು ತೆಗೆದು ಹಾಕಲಾಗಿದ್ದು, ಅನಿಲ್ ಕುಂಬ್ಳೆ ಮಾದರಿಯಲ್ಲೇ ನೂತನ ಆಟಗಾರರಿಗೆ ರಾಹುಲ್ ದ್ರಾವಿಡ್ ದಿಗ್ಗಜ ಕ್ರಿಕೆಟಿಗರಿಂದ ಕ್ಯಾಪ್ ಕೊಡಿಸುತ್ತಿದ್ದಾರೆ.

ದಿಗ್ಗಜ ಕ್ರಿಕೆಟಿಗರಿಂದ ಕ್ಯಾಪ್ ಕೊಡಿಸುವುದು ಉತ್ತಮ ಬೆಳವಣಿಗೆ
ರಾಹುಲ್ ದ್ರಾವಿಡ್ ಮತ್ತೆ ಅನಿಲ್ ಕುಂಬ್ಳೆ ಅವರ ಸಂಪ್ರದಾಯವನ್ನು ಜಾರಿಗೆ ತಂದಿರುವುದು ಒಳ್ಳೆಯ ವಿಷಯವೇ. ತಂಡದಲ್ಲಿ ಇರುವ ಸಹ ಆಟಗಾರರಿಂದ ಯುವ ಆಟಗಾರರು ಕ್ಯಾಪ್ ಸ್ವೀಕರಿಸುವ ಬದಲು, ತಾವು ಚಿಕ್ಕ ಹುಡುಗರಾಗಿದ್ದಾಗಿನಿಂದ ಕ್ರಿಕೆಟ್ ನೋಡುತ್ತಾ, ಆರಾಧಿಸುತ್ತಾ ಬಂದಿದ್ದ ದಿಗ್ಗಜ ಕ್ರಿಕೆಟಿಗರಿಂದ ಕ್ಯಾಪ್ ಸ್ವೀಕರಿಸಿದರೆ ಹೆಚ್ಚಿನ ಉತ್ತೇಜನ ಸಿಕ್ಕಂತಾಗಲಿದೆ. ಹೀಗಾಗಿಯೇ ರಾಹುಲ್ ದ್ರಾವಿಡ್ ಅವರ ಈ ನಿರ್ಧಾರಕ್ಕೆ ಭಾರತ ಕ್ರಿಕೆಟ್ ಅಭಿಮಾನಿಗಳು ಜೈ ಎಂದಿದ್ದಾರೆ.


Click it and Unblock the Notifications












