ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಿದೆ. ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ ಅಭಿಮಾನಿಗಳನ್ನು ರಂಜಿಸಿದೆ. ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಮೀಬಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದರೆ ಸೂರ್ಯ ಪಡೆಗೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ.
ಗುರುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಮೀಬಿಯಾವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆದ್ದು ಮುಂದಿನ ಹಂತಕ್ಕೆ ಹೋಗುವ ದಾರಿಯನ್ನು ಸುಲಭ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೂರ್ಯ ಪಡೆ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ ಗಾಯ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಮೊದಲ ಪಂದ್ಯದಲ್ಲಿ ಅಲಭ್ಯರಾಗಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಎರಡನೇ ಪಂದ್ಯದಲ್ಲಿ ಆಡುವುದು ಪಕ್ಕಾ ಆದಂತೆ ಕಾಣುತ್ತಿದೆ. ಆದರೆ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಗುರುವಾರ ಕಣಕ್ಕೆ ಇಳಿಯುವುದು ಅನುಮಾನ ಎನ್ನಲಾಗುತ್ತಿದೆ.

ಮಂಗಳವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕಾಣಿಸಿಕೊಳ್ಳಲಿಲ್ಲ. ಇವರ ಅನುಪಸ್ಥಿತಿ ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿತ್ತು. ಅಭಿಷೇಕ್ ಅವರ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರು ಅಭ್ಯಾಸ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಅವರು ಮುಂದಿನ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂಬ ಆಶಯವನ್ನು ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಹೊಂದಿದ್ದಾರೆ.
ಅಭಿಷೇಕ್ ಶರ್ಮಾ ಯುಎಸ್ಎ ವಿರುದ್ಧದ ಪಂದ್ಯಕ್ಕೂ ಮುನ್ನ ಅಸ್ವಸ್ಥರಾಗಿದ್ದರು. ಇದರ ಹೊರತಾಗಿಯೂ ಅವರು ಮುಂಬೈನಲ್ಲಿ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಇವರ ಬ್ಯಾಟ್ನಿಂದ ದೊಡ್ಡ ಇನಿಂಗ್ಸ್ ಮೂಡಿ ಬರಲಿಲ್ಲ. ಮೊದಲ ಪಂದ್ಯದಿಂದ ಎರಡನೇ ಪಂದ್ಯಕ್ಕೆ ಐದು ದಿನಗಳ ವಿರಾಮ ಸಿಕ್ಕಿತು. ಆದರೆ ಅಭಿಷೇಕ್ ಅವರ ಆರೋಗ್ಯ ಚೇತರಿಕೆ ಕಂಡಿಲ್ಲ. ಇವರು ಆರೋಗ್ಯ ಸುಧಾರಣೆ ಆಗದೇ ಇರುವುದು ನಿಜಕ್ಕೂ ಕೋಚ್ ಗೌತಮ್ ಗಂಭೀರ್ ಅವರ ಚಿಂತೆಯನ್ನು ಹೆಚ್ಚಿಸಿದೆ.

ವಿಶ್ವದ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಗಾಯದ ಸಮಸ್ಯೆಯಿಂದ ಎರಡನೇ ಪಂದ್ಯಕ್ಕೆ ಅಲಭ್ಯರಾದರೆ, ಇನ್ನೊಬ್ಬ ಬ್ಯಾಟರ್ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಲಭಿಸಬಹುದು. ಇವರು ಇಶಾನ್ ಕಿಶನ್ ಅವರ ಜೊತೆಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇನ್ನು ಟೀಮ್ ಮ್ಯಾನೇಜ್ಮೆಂಟ್ ಸಹ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಮುಂದೆ ಭಾರತದ ಮುಂದೆ ದೊಡ್ಡ ಸವಾಲುಗಳು ಎದುರಾಗಲಿವೆ. ಇದನ್ನೆಲ್ಲಾ ಗಮನಿಸಿ ಅಭಿಷೇಕ್ ಅವರಿಗೆ ಮ್ಯಾನೇಜ್ಮೆಂಟ್ ವಿಶ್ರಾಂತಿ ನೀಡಬಹುದು. ಟೀಮ್ ಇಂಡಿಯಾ ಕೊಲಂಬೋದಲ್ಲಿ ಪಾಕಿಸ್ತಾನದ ವಿರುದ್ಧ ಫೆಬ್ರವರಿ 15 ರಂದು ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೆ ಸ್ಟಾರ್ ಆಟಗಾರರು ಫಿಟ್ ಆಗಿರುವುದು ಅನಿವಾರ್ಯವಾಗಿದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲ.