ಪ್ರಸ್ತುತ ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಬಲಿಷ್ಠ ಆರಂಭಿಕ ಜೋಡಿಯಾಗಿದ್ದಾರೆ. ನ್ಯೂಜಿಲೆಂಡ್ ಟೆಸ್ಟ್ ಸರಣಿ ಸೇರಿದಂತೆ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಜವಾಬ್ದಾರಿ ಈ ಆರಂಭಿಕ ಜೋಡಿ ಮೇಲಿದೆ.
ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಒಂದನ್ನು ಆಡುವುದು ಅನುಮಾನ ಎನ್ನಲಾಗುತ್ತಿದೆ. ವೈಯಕ್ತಿಕ ಕಾರಣಗಳಿಂದ ಅವರು ಒಂದು ಟೆಸ್ಟ್ ಪಂದ್ಯವನ್ನು ಆಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಮೂರನೇ ಆರಂಭಿಕ ಆಟಗಾರನ ಅಗತ್ಯವಿದೆ. ಅನೇಕ ಆಟಗಾರರು ಮೂರನೇ ಆಯ್ಕೆಯ ರೇಸ್ನಲ್ಲಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ, ರೋಹಿತ್ ಮತ್ತು ಯಶಸ್ವಿ ಜೊತೆಗೆ ಮೂರನೇ ಆರಂಭಿಕ ಬ್ಯಾಟರ್ ಯಾರೆಂದು ಆಯ್ಕೆ ಮಾಡಲು ಯೋಚಿಸುತ್ತಿದೆ. ಏಕೆಂದರೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆಲ್ಲುವುದು ಭಾರತಕ್ಕೆ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ಗೆಲುವು ಸಾಧಿಸಿದರೆ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪುವ ಅವಕಾಶ ಸಿಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರನ ಬಗ್ಗೆ ಬಿಸಿಸಿಐ ಬಹಳ ಎಚ್ಚರ ವಹಿಸಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡಕ್ಕೆ ಮೂರನೇ ಓಪನರ್ಗಾಗಿ ಹಲವು ಹೆಸರುಗಳನ್ನು ಪರಿಗಣಿಸಲಾಗುತ್ತಿದ್ದು, ಅದರಲ್ಲಿ ಪ್ರಮುಖರೆಂದರೆ ಋತುರಾಜ್ ಗಾಯಕ್ವಾಡ್ ಮತ್ತು ಅಭಿಮನ್ಯು ಈಶ್ವರನ್. ಋತುರಾಜ್ ಗಾಯಕ್ವಾಡ್ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಅಭಿಮನ್ಯು ಈಶ್ವರನ್ ದೇಶೀಯ ಕ್ರಿಕೆಟ್ನಲ್ಲಿ ಸತತ ಶತಕಗಳನ್ನು ಗಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೆ ಅವರಿಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಲ್ಲ. ಈ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರಿಗೆ ಟೀಮ್ ಇಂಡಿಯಾ ಬಾಗಿಲು ತರೆಯುವ ಸಾಧ್ಯತೆಯಿದೆ.
ರಣಜಿ ಟ್ರೋಫಿಯಲ್ಲಿ ಬಂಗಾಳದ ಪರ ಆಡುತ್ತಿರುವ ಅಭಿಮನ್ಯು ಈಶ್ವರನ್ ಉತ್ತರ ಪ್ರದೇಶ ವಿರುದ್ಧ ಲಕ್ನೋದಲ್ಲಿ ಅದ್ಭುತ ಶತಕ ಗಳಿಸಿದರು. ಅವರು 172 ಎಸೆತಗಳಲ್ಲಿ ಅಜೇಯ 127 ರನ್ ಗಳಿಸಿದರು. ಮೊದಲ ಇನಿಂಗ್ಸ್ನಲ್ಲಿ 5 ರನ್ ಗಳಿಸಿದ್ದ ಅಭಿಮನ್ಯು ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇದು ಅವರ ಸತತ 4 ಪಂದ್ಯಗಳಲ್ಲಿ ಬಂದ ನಾಲ್ಕನೇ ಶತಕವಾಗಿದೆ. ಅಭಿಮನ್ಯು ಇತ್ತೀಚೆಗೆ ದೇಶಿ ಕ್ರಿಕೆಟ್ನಲ್ಲಿ ಸತತ ಶತಕ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಕ್ಲಾಸಿಕ್ ಆಟ ಮತ್ತು ತಾಳ್ಮೆ ಭಾರತ ತಂಡಕ್ಕೆ ಪ್ರಮುಖ ಆಟಗಾರ ಎಂದು ತೋರಿಸುತ್ತಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಬ್ಯಾಕ್ಅಪ್ ಓಪನರ್ ಕುರಿತು ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಚರ್ಚೆ ಮುಂದುವರೆದಿದೆ. ಈ ಓಟದಲ್ಲಿ ಋತುರಾಜ್ ಗಾಯಕ್ವಾಡ್ ನಿರಂತರವಾಗಿ ಮುನ್ನಡೆ ಸಾಧಿಸಿದ್ದರು. ಇದೀಗ ಅಭಿಮನ್ಯು ಅವರು ಎಂಟ್ರಿ ಕೊಟ್ಟಿದ್ದು, ಟೀಮ್ ಇಂಡಿಯಾ ಬಾಗಿಲು ತಟ್ಟಿದ್ದಾರೆ. ಅಭಿಮನ್ಯು ತಮ್ಮ ಕೊನೆಯ 6 ಪ್ರಥಮ ದರ್ಜೆ ಪಂದ್ಯಗಳಲ್ಲಿ 5 ಶತಕಗಳನ್ನು ಬಾರಿಸಿ ಮಿಂಚಿದ್ದಾರೆ.
ಅಭಿಮನ್ಯು 2024ರ ಫೆಬ್ರವರಿ ತಿಂಗಳಲ್ಲಿ ಬಿಹಾರ ವಿರುದ್ಧ ಅಜೇಯ 200 ರನ್ಗಳ ಇನ್ನಿಂಗ್ಸ್ ಆಡಿದರು. ನಂತರ, ಸೆಪ್ಟೆಂಬರ್ನಲ್ಲಿ ನಡೆದ ದುಲೀಪ್ ಟ್ರೋಫಿಯಲ್ಲಿ ಅವರು ಭಾರತ ಬಿ ಪರ ಭಾರತ ಸಿ ವಿರುದ್ಧ ಅಜೇಯ 157 ರನ್ ಹೊಡೆದಿದ್ದರು. ಇದಾದ ಬಳಿಕ ಅವರು ಭಾರತ ಡಿ ವಿರುದ್ಧವೂ 116 ರನ್ಗಳ ಇನ್ನಿಂಗ್ಸ್ ಆಡಿದರು. ಇರಾನಿ ಕಪ್ನಲ್ಲಿ ರಣಜಿ ಟ್ರೋಫಿ ಚಾಂಪಿಯನ್ಸ್ ಮುಂಬೈ ತಂಡದ ವಿರುದ್ಧ 191 ರನ್ಗಳನ್ನು ಬಾರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಈಗ ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಟಿಕೆಟ್ ಪಡೆಯಲು ಮುಂದಾಗಿದ್ದಾರೆ.