
ಲಕ್ನೋ: ಉತ್ತರಪ್ರದೇಶದ ಬಲಗೈ ವೇಗಿ ಸುದೀಪ್ ತ್ಯಾಗಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಟೀಮ್ ಇಂಡಿಯಾ ಪರ ನಾಲ್ಕು ಏಕದಿನ ಪಂದ್ಯಗಳು ಮತ್ತು ಒಂದು ಟಿ20ಐ ಪಂದ್ಯದಲ್ಲಿ ತ್ಯಾಗಿ ಆಡಿದ್ದರು. ಅವರಿಗೀಗ 33ರ ಹರೆಯ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಸುದೀಪ್ ತ್ಯಾಗಿ, ನಿವೃತ್ತಿ ನಿರ್ಧಾರ ಪ್ರಕಟಿಸಾಗ, ತಾನು ಭಾರತ ತಂಡಕ್ಕಾಗಿ ಆಡುವಾಗ ತಂಡದಲ್ಲಿದ್ದು ಮಾರ್ಗದರ್ಶನ ಮಾಡಿದ ಎಂಎಸ್ ಧೋನಿ, ಮೊಹಮ್ಮದ್ ಕೈಫ್, ಸುರೇಶ್ ರೈನಾ ಮತ್ತು ಆರ್ಪಿ ಸಿಂಗ್ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಮಂಗಳವಾರ (ನವೆಂಬರ್ 17) ಟ್ವೀಟ್ ಮೂಲಕ ನಿವೃತ್ತಿ ನಿರ್ಧಾರ ಪ್ರಕಟಿಸಿರುವ ತ್ಯಾಗಿ, 'ನಾನು ನನ್ನ ಬದುಕಿನಲ್ಲಿ ಕೈಗೊಂಡಿರುವ ನಿರ್ಧಾರಗಳಲ್ಲಿ ಬಲು ಕಠಿಣ ನಿರ್ಧಾರ. ನನ್ನ ಕನಸಿಗೆ ನಾನಿಂದು ಗುಡ್ಬೈ ಹೇಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
'ಕ್ರಿಕೆಟ್ ನನ್ನ ಅಸ್ತಿತ್ವ ಮತ್ತು ಆತ್ಮ. ಈ ನಿರ್ಧಾರ ತುಂಬಾ ಕಷ್ಟ. ಆದರೆ ಮುಂದೆ ಹೋಗಲೇಬೇಕು. ನಾನು ಇನ್ನೂ ಹೆಚ್ಚು ಆಡಬಹುದು ಮತ್ತು ದೇಶಕ್ಕೆ ಹೆಚ್ಚಿನದನ್ನು ನೀಡಬಹುದಿತ್ತು,' ಎಂದು ತ್ಯಾಗಿ ಹೇಳಿಕೊಂಡಿದ್ದಾರೆ. ತ್ಯಾಗಿ 4 ಏಕದಿನ ಪಂದ್ಯಗಳಲ್ಲಿ 3 ವಿಕೆಟ್, 14 ಐಪಿಎಲ್ ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ.