
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದ ನಂತರ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಅಂಡರ್ 19 ಹಾಗೂ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾದವು. ಯುವ ತಂಡವನ್ನು ಸಮರ್ಥವಾಗಿ ಬೆಳೆಸುವಲ್ಲಿ ರಾಹುಲ್ ಪಾತ್ರ ನಿರ್ಣಾಯಕವಾಗಿದೆ ಎಂಬ ಮಾತನ್ನು ಪ್ರತಿಯೊಬ್ಬರು ಒಪ್ಪಿಕೊಂಡಿದ್ದರು. ಈ ಮಾತಿಗೆ ಪೂರಕವಾಗಿ ಪ್ಯಾಡಿ ಅಪ್ಟಾನ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಮೆಂಟಲ್ ಕಂಡೀಶನಿಂಗ್ ಕೋಚ್ ಕರ್ತವ್ಯ ನಿರ್ವಹಿಸಿರುವ ಪ್ಯಾಡಿ ಅಪ್ಟಾನ್ ರಾಹುಲ್ ದ್ರಾವಿಡ್ ಅವರ ವೃತ್ತಿಪರತೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ರಾಹುಲ್ ದ್ರಾವಿಡ್ ರೀತಿಯ ವ್ಯಕ್ತಿಗಳು ಕೋಚ್ ಆಗುವುದರಿಂದ ಯುವ ಆಟಗಾರರ ಬೆಳವಣಿಗೆಗೆ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.
"ರಾಹುಲ್ ದ್ರಾವಿಡ್ ಯುವ ಆಟಗಾರರು ಮಾಡುವ ತಪ್ಪುಗಳಿಂದ ಅಸಮಾಧಾನಗೊಳ್ಳುವುದಿಲ್ಲ. ಇದು ಆಟಗಾರರು ತಮ್ಮ ತಪ್ಪುಗಳನ್ನು ತಾವೇ ಅರ್ಥ ಮಾಡಿಕೊಳ್ಳಲು ಅವಕಾಶ ಮಾಡುವುದಲ್ಲದೆ ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಗುತ್ತದೆ" ಎಂದು ಪ್ಯಾಡಿ ಅಪ್ಟಾನ್ ಹೇಳಿದರು.
"ಕೋಚ್ ಅಥವಾ ನಾಯಕ ಯಾರಾದರೂ ಆಟಗಾರ ತಪ್ಪೆಸಗಿದಾಗ ಕಿರುಚುವ ಅಥವಾ ನಿರಾಶೆ ವ್ಯಕ್ತಪಡಿಸುವ ಅಥವಾ ಅಸಮಾಧಾನಗೊಳ್ಳುವವರಾಗಿದ್ದರೆ ಆಗ ವೈಫಲ್ಯದ ಭಯ ಆವರಿಸುತ್ತದೆ. ಹೀಗಿರುವ ತಂಡ ವೈಫಲ್ಯವನ್ನು ಹೊಂದಿರುವುದನ್ನು ನಾನು ನಿಮಗೆ ತೋರಿಸಬಲ್ಲೆ" ಎಂದು ಅಪ್ಟಾನ್ ಹೇಳಿದ್ದಾರೆ.
"ದ್ರಾವಿಡ್ ತರಹದ ವ್ಯಕ್ತಿಗಳು ಆಟಗಾರರ ತಪ್ಪುಗಳಿಗೆ ಅಸಮಾಧಾಗೊಳ್ಳುವುದಿಲ್ಲ. ತಪ್ಪುಗಳನ್ನು ಮಾಡಲು ಬಿಡುತ್ತಾರೆ. ಆಟಗಾರರ ಮನಸ್ಸನ್ನು ವ್ಯಕ್ತಪಡಿಸಲು ಹಾಗೂ ನಿರ್ವಹಿಸಲು ಅವರು ಮುಕ್ತಗೊಳಿಸುತ್ತಾರೆ. ಅವರು ತಪ್ಪುಗಳನ್ನು ಮಾಡಿದರೆ ಉತ್ತಮ ಮಾತುಕತೆ ನಡೆಸುತ್ತಾರೆ. ಹೀಗಾಗಿ ಆಟಗಾರರಲ್ಲಿ ಸಮಚಿತ್ತತೆ ಹಾಗೂ ಪ್ರಶಾಂತತೆ ಇರುತ್ತದೆ" ಎಂದು ರಾಹುಲ್ ದ್ರಾವಿಡ್ ಬಗ್ಗೆ ಪ್ಯಾಡಿ ಅಪ್ಟಾನ್ ವಿವರಿಸಿದರು.