ಭರವಸೆಯ ಬ್ಯಾಟರ್ ದೇವದತ್ ಪಡೀಕ್ಕಲ್ ಅರ್ಧಶತಕ ಬಾರಿಸಿದರೂ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ 1 ರನ್ ಗಳಿಂದ ಸೌರಾಷ್ಟ್ರ ತಂಡದ ವಿರುದ್ಧ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಿಶ್ವರಾಜ್ ಜಡೇಜಾ ಹಾಗೂ ಹಾರ್ಷಿಕ್ ದೇಸಾಯಿ ಜೋಡಿ ಮೊದಲ ವಿಕೆಟ್ಗೆ 55 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಹಾರ್ವಿಕ್ ದೇಸಾಯಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 28 ರನ್ ಬಾರಿಸಿ ಔಟ್ ಆದರು. ಪ್ರೇರಕ್ ಮಂಕದ್ (9) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ವಿಶ್ವರಾಜ್ ಜಡೇಜಾ 7 ಬೌಂಡರಿ ನೆರವಿನಿಂದ 40 ರನ್ ಬಾರಿಸಿದರು.

4ನೇ ವಿಕೆಟ್ಗೆ ಸಿರ್ಧಾರ್ಥ ರಾಣಾ ಹಾಗೂ ಜೇ ಗೋಹಿಲ್ ಜೋಡಿ ಉತ್ತಮ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಅರ್ಧಶತಕದ ಜೊತೆಯಾಟ ನೀಡಿದ್ದಲ್ಲದೆ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಶ್ರಮಿಸಿತು. ಸಿರ್ಧಾರ್ಥ್ ರಾಣಾ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 42 ರನ್ ಬಾರಿಸಿ ಅಬ್ಬರಿಸಿದರು. ಜೇ ಗೋಹಿಲ್ 27 ರನ್ ಸಿಡಿಸಿದರು. ಅಂತಿಮವಾಗಿ ಸೌರಾಷ್ಟ್ರ 20 ಓವರ್ಗಳಲ್ಲಿ 8 ವಿಕೆಟ್ಗೆ 178 ರನ್ ಸೇರಿಸಿತು. ಕರ್ನಾಟಕದ ಪರ ವಿಜಯ್ಕುಮಾರ್ ವೈಶಾಖ್ 3 ವಿಕೆಟ್ ಕಬಳಿಸಿದರು.
ಗುರಿಯನ್ನು ಹಿಂಬಾಲಿಸಿದ ಕರ್ನಾಟಕದ ಆರಂಭ ಕಳಪೆಯಾಗಿತ್ತು. ಬಿಆರ್ ಶರತ್ (0), ಮ್ಯಾಕ್ನೀಲ್ ನೊರೊನ್ಹಾ (10), ಕರುಣ್ ನಾಯರ್ (6) ರನ್ ಗಳಿಸಲು ಪರದಾಟ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ಆರ್ ಸ್ಮರಣ್ 30 ರನ್ಗಳಿಗೆ ಆಟ ಮುಗಿಸಿದರು. ಭರವಸೆಯ ಆಟಗಾರ ದೇವದತ್ ಪಡೀಕ್ಕಲ್ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 66 ರನ್ ಬಾರಿಸಿ ಔ ಟ್ ಆದರು. ಉಳಿದ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಕರ್ನಾಟಕ 20 ಓವರ್ಗಳಲ್ಲಿ 9 ವಿಕೆಟ್ಗೆ 177 ರನ್ ಸೇರಿಸಿ ಸೋಲು ಕಂಡಿತು. ಸೌರಾಷ್ಟ್ರ ಪರ ಜಯದೇವ್ ಉನಾದ್ಕಟ್, ಚೇತನ್ ಸಕಾರಿಯಾ, ಪ್ರೇರಕ್ ಮಂಕದ್ ತಲಾ 2 ವಿಕೆಟ್ ಉರುಳಿಸಿದರು.
ಎ ಗುಂಪಿನ ಪಂದ್ಯದಲ್ಲಿ ಚತ್ತೀಸಗಢ್ ತಂಡವನ್ನು ಮುಂಬೈ ತಂಡ 8 ವಿಕೆಟ್ಗಳಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಚತ್ತೀಸಗಢ್ 19.4 ಓವರ್ಗಳಲ್ಲಿ 121 ರನ್ಗಳಿಗೆ ಆಲೌಟ್ ಆಯಿತು. ಚತ್ತೀಸಗಢ್ ಪರ ಆಯುಶ್ ಪಾಂಡೆ (25), ಶಶಾಂಕ್ ಸಿಂಗ್ (10), ಶುಭಮ್ ಅಗರ್ವಾಲ್ (19), ಮಾಯಾಂಕ್ ಯಾದವ್ (24) ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಮುಂಬೈ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸಿದರು. ಗುರಿಯನ್ನು ಹಿಂಬಾಲಿಸಿದ ಮುಂಬೈ ತಂಡ 15.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 132 ರನ್ ಸೇರಿಸಿ ಜಯ ಸಾಧಿಸಿತು. ಆಯುಷ್ ಮಾತ್ರೆ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 69 ರನ್ ಬಾರಿಸಿ ಜಯದಲ್ಲಿ ಮಿಂಚಿದರು.