ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಅವರು ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ 145 ರನ್ಗಳಿಂದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು ತಂಡವನ್ನು ಮಣಿಸಿದೆ. ಈ ಮೂಲಕ ಕರ್ನಾಟಕ ಪ್ರಸಕ್ತ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದೆ.
ಮಂಗಳವಾರ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಭರ್ಜರಿ ಆರಂಭವನ್ನು ಕಂಡಿತು. ಆರಂಭಿಕರಾದ ಬಿಆರ್ ಶರತ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 5.3 ಓವರ್ಗಳಲ್ಲಿ 69 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಮಯಾಂಕ್ ಅಗರ್ವಾಲ್ 15 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 24 ರನ್ ಬಾರಿಸಿ ಔಟ್ ಆದರು. ಆರಂಭಿಕ ಬಿಆರ್ ಶರತ್ ಸಹ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರು 23 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ 53 ರನ್ ಸಿಡಿಸಿ ಔಟ್ ಆದರು. ಕರುಣ್ ನಾಯರ್ (4) ರನ್ ಬರವನ್ನು ಅನುನಭವಿಸಿದರು.

ನಾಲ್ಕನೇ ವಿಕೆಟ್ಗೆ ದೇವದತ್ ಪಡಿಕ್ಕಲ್ ಹಾಗೂ ರವಿಚಂದ್ರನ್ ಸ್ಮರಣ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 56 ಎಸೆತಗಳಲ್ಲಿ 115 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಸ್ಮರಣ್ 29 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 46 ರನ್ ಬಾರಿಸಿ ಅಬ್ಬರಿಸಿದರು.
ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ತಮ್ಮ ನೈಜ್ಯ ಆಟ ಆಡಿದರು. ಇವರು 46 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ನೆರವಿನಿಂದ ಅಜೇಯ 102 ರನ್ ಸಿಡಿಸಿದರು. ಈ ವೇಳೆ ಇವರು 221ರ ಸ್ಟ್ರೈಕ್ ರೇಟ್ನಲ್ಲಿ ರನ್ ಕಲೆ ಹಾಕಿದರು. ಅಂತಿಮವಾಗಿ ಕರ್ನಾಟಕ 20 ಓವರ್ಗಳಲ್ಲಿ 3 ವಿಕೆಟ್ಗೆ 245 ರನ್ ಕಲೆ ಹಾಕಿತು.

ತಮಿಳುನಾಡು ತಂಡದ ಪರ ಅಮಿತ್ ಸಾತ್ವಿಕ್ 15, ತುಷಾರ್ ರಹೇಜಾ 29, ನಾರಾಯಣ್ ಜಗದೀಶನ್ 21, ಆರ್ ರಾಜಕುಮಾರ್ 16 ರನ್ ಬಾರಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ ಡಬಲ್ ಡಿಜಿಟ್ ಮುಟ್ಟಲಿಲ್ಲ. ತಮಿಳುನಾಡು 14.2 ಓವರ್ಗಳಲ್ಲಿ 100 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ ತಲಾ ಮೂರು ವಿಕೆಟ್ ಪಡೆದರು. ವಿಜಯಕುಮಾರ್ ವೈಶಾಖ್ ಹಾಗೂ ಶುಭಾಂಗ್ ಹೆಗ್ಡೆ ತಲಾ 2 ವಿಕೆಟ್ ಕಬಳಿಸಿದರು. ಈ ಗೆಲವಿನ ಮೂಲಕ ಕರ್ನಾಟಕ ಆಡಿದ 4 ಪಂದ್ಯಗಳಲ್ಲಿ 2 ಜಯ, 2 ಸೋಲು ಕಂಡಿದ್ದು 8 ಅಂಕಗಳಿಂದಿಗೆ ಡಿ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ.