ಜೂನ್ 12 ಬುಧವಾರ, ಕಳೆದ ಎರಡು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾ ವೈಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದ ಪ್ರಯಾಣಿಕರು ತುಂಬಿದ್ದ ಬಸ್ ಮೇಲೆ ಭಯೋತ್ಪಾದಕರು ಭಾರೀ ಗುಂಡಿನ ದಾಳಿ ನಡೆಸಿದ್ದರು.
ಈ ಹೀಯಕೃತ್ಯದಲ್ಲಿ 9 ಮಂದಿ ಸಾವನ್ನಪ್ಪಿದರೆ, 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಬಸ್ ಕಂದಕಕ್ಕೆ ಬಿದ್ದ ನಂತರವೂ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದರು ಎಂದು ಬಸ್ನಲ್ಲಿದ್ದವರು ಹೇಳಿದ್ದಾರೆ.

ಈ ಘಟನೆ ನಂತರ ರಾಷ್ಟ್ರದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಬೆಂಬಲವನ್ನು ಸೂಚಿಸಿದ್ದಾರೆ.
ಮತ್ತೊಂದೆಡೆ ಭಾರತೀಯ ಸೇನೆ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಬೇಟೆಯಾಡಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಇದೇ ವೇಳೆ ಪಾಕಿಸ್ತಾನದ ಅಪಾಯಕಾರಿ ವೇಗದ ಬೌಲರ್ ಹಸನ್ ಅಲಿ ಅವರ ಇನ್ಸ್ಟಾಗ್ರಾಮ್ ಸ್ಟೋರಿ ಎಲ್ಲರ ಗಮನ ಸೆಳೆದಿದೆ.

ಭಯೋತ್ಪಾದಕ ದಾಳಿಯಿಂದ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿರುವ ಹಸನ್ ಅಲಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಎಲ್ಲ ಕಣ್ಣುಗಳು ವೈಷ್ಣೋದೇವಿ ದಾಳಿಯ ಮೇಲೆ' ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲೆಡೆ ಹಸನ್ ಅಲಿ ಅವರ ಮಾನವೀಯತೆಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. "ಹಸನ್ ಅಲಿ ಪಾಕಿಸ್ತಾನದಿಂದ ಇಷ್ಟವಾಗುವ ಕ್ರಿಕೆಟಿಗ ಮಾತ್ರ" ಎಂದು ಮತ್ತೊಬ್ಬ ಎಕ್ಸ್ ಬಳಕೆದಾರರು ಬರೆದಿದ್ದಾರೆ.
ಹಸನ್ ಅಲಿ ಅವರ ಪತ್ನಿ ಭಾರತೀಯತಾರಾಗಿದ್ದಾರೆ. ಹರಿಯಾಣದ ನುಹ್ ಮೂಲದ ಫ್ಲೈಟ್ ಇಂಜಿನಿಯರ್ ಸಮಿಯಾ ಅರ್ಜೂ ಅವರೊಂದಿಗೆ ಹಸನ್ ಅಲಿ ಪ್ರೇಮ ವಿವಾಹವಾಗಿದ್ದರು. ಎರಡು ವರ್ಷಗಳ ಕಾಲ ಪ್ರೀತಿಯಲ್ಲಿ ಬಿದ್ದಿದ ಈ ಜೋಡಿ ನಂತರ ಮದುವೆಯಾದರು.
ಈ ಜೋಡಿಗೆ ಒಬ್ಬ ಮಗಳೂ ಇದ್ದಾಳೆ. ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಸನ್ ಅಲಿ ಪಾಕಿಸ್ತಾನದ ತಂಡದ ಪ್ರಮುಖ ಬೌಲಿಂಗ್ ಭಾಗವಾಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ 2016ರಲ್ಲಿ ಪದಾರ್ಪಣೆ ಮಾಡಿದ್ದ ಹಸನ್ ಅಲಿ ಪಾಕಿಸ್ತಾನ ಪರ 24 ಟೆಸ್ಟ್, 66 ಏಕದಿನ ಮತ್ತು 51 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಳೆದ ತಿಂಗಳು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಕೊನೆಯದಾಗಿ ಪಾಕಿಸ್ತಾನದ ಪರ ಆಡಿದ್ದರು.
ಬಳಿಕ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಸನ್ ಅಲಿ ಕಣಕ್ಕೀಳಿಯಿತ್ತಾರೆ ಎನ್ನುವಷ್ಟರಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಭಿಮಾನಿಗಳಿಗೆ ಶಾಕ್ ನೀಡಿತ್ತು. 'ಹಸನ್ ಅಲಿ ಕೌಂಟಿ ಕ್ರಿಕೆಟ್ಗೆ ತಮ್ಮ ಬದ್ಧತೆಯನ್ನು ಪೂರೈಸಲು ತಂಡದಿಂದ ಅವರನ್ನು ಬಿಡುಗಡೆ ಮಾಡಲು ನಿರ್ಧಾರಿಸಲಾಗಿದೆ ಎಂದು ತಿಳಿಸಿತ್ತು. ಹೀಗಾಗಿ ಈ ಬಾರಿ ಚುಟುಕು ಕ್ರಿಕೆಟ್ ಸಮರದಿಂದ ದೂರು ಉಳಿಯಬೇಕಾಯಿತು.