ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಇತ್ತೀಚಿನ ಹೇಳಿಕೆಗಳು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿವೆ. ಸೌರವ್ ಗಂಗೂಲಿಯ ಆ ಹೇಳಿಕೆಗೆ ಪರ-ವಿರೋಧಗಳ ವ್ಯಕ್ತವಾಗಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿ ಗೆಲ್ಲುವುದು ವಿಶ್ವಕಪ್ ಗೆಲ್ಲುವುದಕ್ಕಿಂತ ಹೆಚ್ಚು ಕಷ್ಟಕರವಾಗಿದೆ ಎಂದು ಸೌರವ್ ಗಂಗೂಲಿ ಹೇಳಿದ್ದರು. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ ನಂತರ, ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾ ಅವರನ್ನು ಬೆಂಬಲಿಸುತ್ತಿರುವಾಗ ಸೌರವ್ ಗಂಗೂಲಿ ಅವರಿಂದ ಈ ಹೇಳಿಕೆ ಬಂದಿತ್ತು.

ಸೌರವ್ ಗಂಗೂಲಿ ಅವರ ಹೇಳಿಕೆಗಳು ಪ್ರಪಂಚದಾದ್ಯಂತ ಕ್ರಿಕೆಟ್ ಅಭಿಮಾನಿಗಳಿಂದ ಪ್ರತಿಕ್ರಿಯೆಗಳು ಬಂದವು. ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಕೂಡ ಸೌರವ್ ಗಂಗೂಲಿ ಅವರ ಹೇಳಿಕೆಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದು, ಮಾಜಿ ಬಿಸಿಸಿಐ ಅಧ್ಯಕ್ಷರ ಹೇಳಿಕೆಯನ್ನು ಖಂಡಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 209 ರನ್ಗಳ ಹೀನಾಯ ಸೋಲಿನ ಬಳಿಕ, ಐಸಿಸಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರ ಸಾಮರ್ಥ್ಯದ ಬಗ್ಗೆ ಅನೇಕರು ಪ್ರಶ್ನೆಗಳನ್ನು ಎತ್ತಿದರು.
ಆದರೂ, ರೋಹಿತ್ ಶರ್ಮಾ ಅವರು 5 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರುವ ಕಾರಣ, ಅವರೇ ನಾಯಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಸೌರವ್ ಗಂಗೂಲಿ ಸಮರ್ಥಿಸಿಕೊಂಡರು.

"ನನಗೆ ರೋಹಿತ್ ಶರ್ಮಾ ಮೇಲೆ ಸಂಪೂರ್ಣ ನಂಬಿಕೆಯಿದೆ. ರೋಹಿತ್ ಮತ್ತು ಎಂಎಸ್ ಧೋನಿ ಮಾತ್ರ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಐಪಿಎಲ್ ಗೆಲ್ಲುವುದು ಸುಲಭವಲ್ಲ, ಏಕೆಂದರೆ ಇದು ಕಠಿಣ ಪಂದ್ಯಾವಳಿಯಾಗಿದೆ," ಎಂದು ಸೌರವ್ ಗಂಗೂಲಿ ಹೇಳಿದ್ದರು.
"ಐಪಿಎಲ್ ಗೆಲ್ಲುವುದು ವಿಶ್ವಕಪ್ ಗೆಲ್ಲುವುದಕ್ಕಿಂತ ಹೆಚ್ಚು ಕಷ್ಟಕರವಾಗಿದೆ. ಏಕೆಂದರೆ, 14 ಪಂದ್ಯಗಳನ್ನು ಆಡಿದ ಬಳಿಕ ಪ್ರಶಸ್ತಿ ಹಂತಕ್ಕೆ ಹೋಗಬೇಕು. ಆ ಬಳಿಕ ಪ್ಲೇಆಫ್ಗಳಲ್ಲಿ ಭಾಗವಹಿಸಬೇಕು".
"ವಿಶ್ವಕಪ್ನಲ್ಲಿ ಸೆಮಿಫೈನಲ್ಗೆ ತಲುಪಲು ಕೇವಲ 4-5 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಐಪಿಎಲ್ನಲ್ಲಿ ನೀವು ಚಾಂಪಿಯನ್ ಆಗಲು 17 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ," ಎಂದು ಸೌರವ್ ಗಂಗೂಲಿ ಇಂಡಿಯಾ ಟುಡೆಗೆ ತಿಳಿಸಿದ್ದರು.
ಪಾಕಿಸ್ತಾನ ತಂಡದ ಮಾಜಿ ಬ್ಯಾಟರ್ ಸಲ್ಮಾನ್ ಬಟ್ ಪ್ರಕಾರ, ಕ್ರಿಕೆಟ್ನ ಅಂತಿಮ ಸ್ವರೂಪವಾದ ಟೆಸ್ಟ್ ಆಟವನ್ನು, ಕಡಿಮೆ ಸ್ವರೂಪವಾದ ಟಿ20ಗೆ ಹೋಲಿಸುವುದು ಸೂಕ್ತವಲ್ಲ. ಐಪಿಎಲ್ನಲ್ಲಿ ಕೇವಲ ನಾಲ್ಕು ಅಂತಾರಾಷ್ಟ್ರೀಯ ಆಟಗಾರರು ಮಾತ್ರ ತಂಡದಲ್ಲಿ ಆಡುತ್ತಾರೆ ಎಂದರು.
ಸೌರವ್ ಗಂಗೂಲಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಲ್ಮಾನ್ ಬಟ್ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊದಲ್ಲಿ ಹೀಗೆ ಹೇಳಿದರು, "ವಿಶ್ವ ದರ್ಜೆಯ ಆಟಗಾರ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಈ ರೀತಿ ಮಾತನಾಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನೀವು ಲೀಗ್ ಕ್ರಿಕೆಟ್ ಅನ್ನು ಟೆಸ್ಟ್ ಕ್ರಿಕೆಟ್ನೊಂದಿಗೆ ಹೇಗೆ ಹೋಲಿಸಬಹುದೆ? ಹೋಲಿಕೆ ಸಾಧ್ಯವಿಲ್ಲ," ಎಂದು ಹೇಳಿದರು.
ನೀವು ಕ್ರಿಕೆಟ್ನ ಅಂತಿಮ ಸ್ವರೂಪವನ್ನು ಕೇವಲ ನಾಲ್ಕು ಅಂತಾರಾಷ್ಟ್ರೀಯ ಆಟಗಾರರು ಮಾತ್ರ ಇರುವ ಚುಟುಕು ಸ್ವರೂಪದೊಂದಿಗೆ ಹೋಲಿಸುತ್ತಿದ್ದೀರಾ? ಯಾವುದೇ ಹೋಲಿಕೆ ಮಾಡಲು ಆಗಲ್ಲ ಎಂದು ಸಲ್ಮಾನ್ ಬಟ್ ತಿಳಿಸಿದ್ದಾರೆ.
ಇನ್ನು ಭಾರತ ತಂಡದ ನಾಯಕನಾಗಿರುವ ರೋಹಿತ್ ಅವರ ಸ್ಥಾನಕ್ಕೆ ಸದ್ಯ ಯಾವುದೇ ಅಪಾಯವಿಲ್ಲ ಎಂದು ತೋರುತ್ತಿದೆ. ಆದರೂ, ಈ ವರ್ಷದ ಕೊನೆಯಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಬರಿಗೈಯಲ್ಲಿ ಮರಳಿದರೆ ದೊಡ್ಡ ಬದಲಾವಣೆಯಾಗಬಹುದು.