ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಾಕಷ್ಟು ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಅದರಲ್ಲೂ ಕೆಲ ಆಟಗಾರರ ಪ್ರದರ್ಶನ ದಿಗ್ಗಜ ಆಟಗಾರರನ್ನು ಮೆಚ್ಚಿಸಿದೆ. ಅದರಲ್ಲಿ ಒಬ್ಬರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರ ಋತುರಾಜ್ ಗಾಯಕ್ವಾಡ್. ಐದನೇ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಗಾಯಕ್ವಾಡ್ ನೀಡಿದ ಪ್ರದರ್ಶನ ಮಹತ್ವದ್ದಾಗಿತ್ತು ಎಂಬುದನ್ನು ಮರೆಯುವಂತಿಲ್ಲ.
ಋತುರಾಜ್ ಗಾಯಕ್ವಾಡ್ ಅವರ ಈ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿದ್ದು ಪಾಕಿಸ್ತಾನದ ದಿಗ್ಗಜ ವೇಗದ ಬೌಲರ್ ವಾಸಿಂ ಅಕ್ರಮ್ ಕೂಡ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಋತುರಾಜ್ ಗಾಯಕ್ವಾಡ್ ಭವಿಷ್ಯದಲ್ಲಿ ಭಾರತ ತಂಡ ಹಾಗೂ ಐಪಿಎಲ್ ಫ್ರಾಂಚೈಸಿಗೆ ಅದ್ಭುತವಾದ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ ಕ್ರಿಕೆಟಿಗನಾಗಲಿದ್ದಾರೆ ಎಂದಿದ್ದಾರೆ.

26ರ ಹರೆಯದ ಋತುರಾಜ್ ಗಾಯಕ್ವಾಡ್ ಈ ಬಾರಿಯ ಐಪಿಎಲ್ನಲ್ಲಿ 590 ರನ್ಗಳಿಸಿ ಮಿಂಚಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿಯೂ ಋತು 26 ರನ್ಗಳ ಕೊಡಗೆ ನೀಡಿದ್ದರು. ಐಪಿಎಲ್ನಲ್ಲಿ ಮಾತ್ರವಲ್ಲದೆ ದೇಶೀಯ ಕ್ರಿಕೆಟ್ನಲ್ಲಿಯೂ ಇಂಥಾದ್ದೇ ಪ್ರದರ್ಶನ ನೀಡಿರುವ ಋತುರಾಜ್ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರಣದಿಂದಾಗಿ ವಾಸಿಂ ಅಕ್ರಮ್ ಋತುರಾಜ್ ಗಾಯಕ್ವಾಡ್ ಭಾರತದ ಭವಿಷ್ಯದ ಆಟಗಾರ ಎಂದು ಬಣ್ಣಿಸಿದ್ದಾರೆ.
ಸ್ಪೋರ್ಟ್ಸ್ ಕೀಡಾ ಜೊತೆಗೆ ಮಾತನಾಡಿದ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಗಾಯಕ್ವಾಡ್ ಸಾಮರ್ಥ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಒತ್ತಡದ ಸಂದರ್ಭದಲ್ಲಿ ಆತ ಬಹಳ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಆತ ದೈಹಿಕವಾಗಿಯೂ ಬಹಳ ಸಮರ್ಥವಾಗಿದ್ದು ಅದ್ಭುತವಾಗಿ ಫಿಲ್ಡಿಂಗ್ ಕೂಡ ಮಾಡಬಲ್ಲವರಾಗಿದ್ದಾರೆ. ಆತ ಇನ್ನು ಯುವ ಆಟಗಾರನಾಗಿರುವ ಕಾರಣ ಬಹಳ ಅದ್ಭುತವಾದ ಭವಿಷ್ಯ ಆತನಿಗೆ ಇದೆ. ಫ್ರಾಂಚೈಸಿ ಕ್ರಿಕೆಟ್ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ಗೂ ಆತ ದೊಡ್ಡ ಅಸ್ತ್ರವಾಗಬಲ್ಲ" ಎಂದಿದ್ದಾರೆ ವಾಸಿಂ ಅಕ್ರಮ್.
ಐಪಿಎಲ್ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಮುಂಬೈ ಇಮಡಿಯನ್ಸ್ ತಂಡದ ದಾಖಲೆಯನ್ನು ಸರಿಗಟ್ಟಿದೆ. ಈ ಪಂದ್ಯದಲ್ಲಿ ಡೆವೋನ್ ಕಾನ್ವೆ, ಅಜಿಂಕ್ಯ ರಹಾನೆ, ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ಭರ್ಜರಿ ಪ್ರದರ್ಶನ ನೀಡಿದರು. ಜಡೇಜಾ ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಗೆಲುವು ಸಾರಿದರು.
ಕೊನೆಯ ಓವರ್ನಲ್ಲಿ ಸಿಎಸ್ಕೆ ತಂಡದ ಗೆಲುವಿಗೆ 13 ರನ್ಗಳ ಅಗತ್ಯವಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ ಅಮೋಘ ಬೌಲಿಂಗ್ ನಡೆಸಿದ ಮೋಹಿತ್ ಶರ್ಮಾ ಕೇವಲ ಮೂರು ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ ಕೊನೆಯ ಎರಡು ಎಸೆತಗಳಲ್ಲಿ ಜಡೇಜಾ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ಅಗತ್ಯವಿದ್ದ 10 ರನ್ಗಳನ್ನು ಗಳಿಸಿ ಜಿಟಿ ತಂಡದಿಂದ ಗೆಲುವನ್ನು ಕಸಿದುಕೊಂಡರು.