
ಭಾರತದ ದಿಗ್ಗಜ ಕ್ರಿಕೆಟಿಗ ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಇಂದು ಲಘು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ದೆಹಲಿಯ ಆಸ್ಪತ್ರೆಗೆ ದಾಖಲಾಗಿರುವ ಕಪಿಲ್ ದೇವ್ ಅವರಿಗೆ ಆ್ಯಂಜಿಯೋಪ್ಲಾಸ್ಟಿ ನಡೆಸಲಾಗಿದೆ. ಕಪಿಲ್ ದೇವ್ ಅಪಾಯದಿಂದ ಹೊರಬಂದಿದ್ದಾರೆಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ.
ಇನ್ನು ಕ್ರಿಕೆಟ್ ದಿಗ್ಗಜನ ಚೇತರಿಕೆಗೆ ವಿಶ್ವದ ಹಲವಾರು ದಿಗ್ಗಜ ಕ್ರಿಕೆಟಿಗರು ಶುಭಹಾರೈಸಿದ್ದಾರೆ. ಶೀಘ್ರ ಚೇತರಿಕೆಗಾಗಿ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರದ ಸಚಿವರೊಬ್ಬರು ಕಪಿಲ್ ದೇವ್ ಚೇತರಿಕೆಗೆ ಪ್ರಾರ್ಥಿಸುತ್ತಾ ಭಾವುಕ ಸಂದೇಶವೊಂದನ್ನು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
"ಒಹ್, ಶೀಘ್ರದಲ್ಲೇ ಚೇತರಿಸಿಕೊಳ್ಳಿ ಕಪಿಲ್ದೇವ್ ಸರ್, ನಮ್ಮ ಹೃದಯಕ್ಕೆ ಹತ್ತಿರುವಾಗಿರುವ ಕ್ರಿಕೆಟ್ ಯುಗಕ್ಕೆ ಸೇರಿದವರಾಗಿದ್ದೀರಿ. ನಿಮ್ಮ ಆರೋಗ್ಯಕ್ಕಾಗಿ ಹಾಗೂ ಶೀಘ್ರ ಚೇತರಿಕೆಗಾಗಿ ಪಾಕಿಸ್ತಾನದ ಕಡೆಯಿಂದ ನಮ್ಮ ಪ್ರಾರ್ಥನೆ" ಎಂದು ಟ್ವೀಟ್ ಮಾಡಿದ್ದಾರೆ ಫಾವದ್ ಹಸ್ಸನ್.
ಪಾಕಿಸ್ತಾನ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾಗಿರುವ ಫಾವದ್ ಹುಸ್ಸೇನ್ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ಪಾಕಿಸ್ತಾನ ಮಾಧ್ಯಮದಲ್ಲಿ ಕಪಿಲ್ ದೇವ್ಗೆ ಹೃದಯಾಘಾತವಾಗಿರುವ ಸುದ್ದಿಯನ್ನು ರೀಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸುವ ಜೊತೆಗೆ ತಮ್ಮ ಸಂದೇಶವನ್ನು ತಿಳಿಸಿದ್ದಾರೆ.
ಈ ಟ್ವಿಟ್ಗೆ ಸಾವಿರಾರು ಪ್ರತಿಕ್ರಿಯೆಗಳು ಹರಿದುಬರುತ್ತಿದ್ದು ದೇಶ, ಭಾಷೆ, ರಾಜಕೀಯ ಭಿನ್ನತೆಗಳನ್ನು ಮೀರಿ ಕಪಿಲ್ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಗುತ್ತಿದೆ.