
ನವದೆಹಲಿ, ಜನವರಿ 21: ಟೀಮ್ ಇಂಡಿಯಾ ಆಟಗಾರರಿಗೆ ವರ್ತನಾ ಸಮಾಲೋಚನೆ (ಬಿಹೇವಿಯರಲ್ ಕೌನ್ಸೆಲಿಂಗ್) ನಡೆಸಲು ಸುಪ್ರೀಮ್ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ) ಮುಂದಾಗಿದೆ. ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರ ಪರಿಣಾಮವಿದು.
ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೊಹರ್ ನಡೆಸಿ ಕೊಡುವ ಕಾಫೀ ವಿತ್ ಕರಣ್ ಟಾಕ್ ಶೋನಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಮತ್ತು ಕನ್ನಡಿಗ ಕೆಎಲ್ ರಾಹುಲ್ ಮಹಿಳೆಯರ ಬಗ್ಗೆ ಕೀಳು ಅಭಿರುಚಿ ತೋರಿಕೊಂಡಿದ್ದರು. ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಇಬ್ಬರೂ ಯುವ ಆಟಗಾರರ ಹೇಳಿಕೆ ಸಾರ್ವಜನಿಕರ, ಕ್ರಿಕೆಟ್ ಅಭಿಮಾನಿಗಳ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಪರಿಣಾಮವಾಗಿ ರಾಹುಲ್ ಮತ್ತು ಪಾಂಡ್ಯ ಇಬ್ಬರಿಗೂ ಬಿಸಿಸಿಐ ಅಮಾನತು ಶಿಕ್ಷೆಯನ್ನು ನೀಡಿತ್ತು. ಅಷ್ಟಕ್ಕೇ ನಿಲ್ಲದ ಬಿಸಿಸಿಐ ಈಗ ಭವಿಷ್ಯದ ದಿನಗಳಲ್ಲಿ ಆಟಗಾರರಿಂದ ಆಗಬಹುದಾದ ಇಂಥದ್ದೇ ಪ್ರಮಾದಗಳನ್ನು ತಡೆಯುವುದಕ್ಕೆ ಮುಂದಾಗಿದೆ (ಇಬ್ಬರ ಮಾತಿನ ವಿಡಿಯೋ ತುಣುಕೊಂದು ಮೇಲಿದೆ).
'ಭಾರತದ ಹಿರಿಯರ ತಂಡ, ಉದಯೋನ್ಮುಖ ಆಟಗಾರರು, 'ಎ' ತಂಡಗಳು, ಅಂಡರ್-19 ತಂಡಗಳು ಬಿಹೇವಿಯರಲ್ ಕೌನ್ಸೆಲಿಂಗ್ನಲ್ಲಿ ಪಾಲ್ಗೊಳ್ಳಲಿವೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ಈ ಕೌನ್ಸೆಲಿಂಗ್ ನಡೆಯಲಿದೆ. ಕ್ರೀಡಾಪಟುಗಳಿಗೆ ವೃತ್ತಿ ಬದುಕನ್ನು ನಡೆಸಲು ಇದು ನೆರವಾಗಲಿದೆ' ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.