
ಮುಂಬಯಿ, ಏಪ್ರಿಲ್ 17: ವಿಕೆಟ್ಕೀಪರ್ ರಿಷಭ್ ಪಂತ್, ಅನುಭವಿ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ಹಾಗೂ ಯುವ ವೇಗಿ ನವದೀಪ್ ಸೈನಿ, ಮೇ 30ರಂದು ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸ್ಟ್ಯಾಂಡ್ ಬೈ ಆಟಗಾರರಾಗಿ ನೇಮಕಗೊಂಡಿದ್ದಾರೆ.
ವಿಶ್ವಕಪ್ಗೆ ಈಗಾಗಲೇ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಇದೀಗ ಕಾಯ್ದಿರಿಸಲ್ಪಟ್ಟ ಆಟಗಾರರ ಹೆಸರನ್ನು ಬಿಡುಗಡೆ ಮಾಡಿದೆ. ಸ್ಟ್ಯಾಂಡ್ ಬೈ ಆಟಗಾರರಲ್ಲಿ ಬದಲಾವಣೆ ಮಾಡುವ ಅವಕಾಶವಿದೆಯಾದರೂ, ಈ ಮೂವರ ಆಯ್ಕೆಯಲ್ಲಿ ಬದಲಾವಣೆ ಸಾಧ್ಯತೆ ಬಹುತೇಕ ಇಲ್ಲವಾಗಿದೆ.
"ಐಸಿಸಿ ಚಾಂಪಿಯನ್ಸ್ ಟ್ರೋಫಿ ಮಾದರಿಯಲ್ಲಿ ವಿಶ್ವಕಪ್ಗೂ ಮೂವರು ಆಟಗಾರರನ್ನು ಕಾಯ್ದಿರಿಸಲಾಗಿದೆ. ರಿಷಭ್ ಪಂತ್ ಮತ್ತು ಅಂಬಾಟಿ ರಾಯುಡು ಕಾಯ್ದಿರಿಸಿದ ಮೊದಲೆರಡು ಆಟಗಾರರಾಗಿದ್ದು, ಬೌಲರ್ಗಳ ಪೈಕಿ ನವದೀಪ್ ಸೈನಿ ಏಕಮಾತ್ರ ಸ್ಟ್ಯಾಂಡ್ ಬೈ ಆಗಿದ್ದಾರೆ. ವಿಶ್ವಕಪ್ಗೆ ಪ್ರಕಟಿಸಲಾದ ತಂಡದಲ್ಲಿ ಯಾರಾದರು ಗಾಯಗೊಂಡಲ್ಲಿ ಈ ಮೂವರಲ್ಲಿ ಒಬ್ಬರು ತಂಡ ಸೇರಿಕೊಳ್ಳಲಿದ್ದಾರೆ,'' ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಯುವ ವೇಗದ ಬೌಲರ್ಗಳಾದ ದೀಪಕ್ ಚಹರ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ಅವರನ್ನು ವಿಶ್ವಕಪ್ ವೇಳೆ ಟೀಮ್ ಇಂಡಿಯಾದ ನೆಟ್ ಬೌಲರ್ಗಳನ್ನಾಗಿ ಆಯ್ಕೆ ಮಾಡಲಾಗಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ ಮೇ 12ಕ್ಕೆ ಅಂತ್ಯಗೊಳ್ಳಲಿದೆ. ಬಳಿಕ ವಿಶ್ವಕಪ್ಗೆ ಆಯ್ಕೆಯಾಗಿರುವ ಆಟಗಾರರು ಯೋ ಯೋ ಟೆಸ್ಟ್ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
"ಆಟಗಾರರು ಸದ್ಯ ಐಪಿಎಲ್ ಟಿ20 ಟೂರ್ನಿಯಲ್ಲಿ ಮುಳುಗಿದ್ದಾರೆ. ಇದಾದ ಬಳಿಕ ಅವರಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಅಂದಹಾಗೆ ಎರಡು ಸರಣಿಯ ಮಧ್ಯೆ ಪರೀಕ್ಷೆ ಎಂದರ್ಥವಲ್ಲ. ಆಟಗಾರರು ದಣಿದಿದ್ದರೆ ಫಲಿತಾಂಶದಲ್ಲಿಖಂಡಿತಾ ವ್ಯತ್ಯಾಸ ಕಂಡುಬರಲಿದೆ,'' ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ