ಏಕದಿನ ವಿಶ್ವಕಪ್ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಕ್ಟೋಬರ್ 8ರಂದು ಈ ಪಂದ್ಯ ನಡೆಯಲಿದ್ದು, ಈಗಾಗಲೇ ಉಭಯ ತಂಡಗಳು ಅಭ್ಯಾಸದಲ್ಲಿ ತೊಡಗಿವೆ.
ಏಕದಿನ ವಿಶ್ವಕಪ್ಗೆ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿದ್ದು, ವಿಶ್ವಕಪ್ ಪಂದ್ಯದಲ್ಲಿ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ, ಬಲಿಷ್ಠ ಆಸ್ಟ್ರೇಲಿಯಾ ಕೂಡ ಭಾರತ ತಂಡವನ್ನು ಕಟ್ಟಿ ಹಾಕಲು ತನ್ನದೇ ತಂತ್ರಗಳನ್ನು ರೂಪಿಸುತ್ತಿದೆ.

ಚೆನ್ನೈ ಪಿಚ್ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ನೀಡುತ್ತದೆ ಎಂದು ನಂಬಲಾಗಿದೆ. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಎಡಗೈ ಲೆಗ್ ಸ್ಪಿನ್ನರ್ ಕುಲ್ದೀಪ್ ಯಾದವ್ ಪ್ರಮುಖ ಅಸ್ತ್ರವಾಗಿದ್ದು ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ. ಭಾರತದ ಸ್ಪಿನ್ ದಾಳಿಯ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಭಾರತದ ಬೌಲಿಂಗ್ ಯಾವ ಭಯ ಇಲ್ಲ ಎಂದು ಹೇಳಿದ್ದಾರೆ.
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಮೊದಲ ಪಂದ್ಯದಲ್ಲಿ ಭಾರತದ ಸ್ಪಿನ್ನರ್ಗಳ ಬಗ್ಗೆ ಯಾವುದೇ ಭಯವೂ ಇಲ್ಲ, ಅವರನ್ನು ಎದುರಿಸಲು ಯೋಜನೆ ಹೊಂದಿದೆ. ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು, ತಂಡದ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
"ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನ ಕೆಲವು ದಿನಗಳ ತರಬೇತಿ ಪಡೆಯಲಿದ್ದು, ತಯಾರಿ ಮಾಡಿಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾ ಆಟಗಾರರು ಸಾಕಷ್ಟು ಸ್ಪಿನ್ ದಾಳಿ ವಿರುದ್ಧ ಆಡಲಿದ್ದಾರೆ. ಬಹುತೇಕ ಬ್ಯಾಟರ್ ಗಳು ಭಾರತದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಭಾರತದ ಬೌಲರ್ ಗಳ ಬಗ್ಗೆ ಅವರು ಹೆಚ್ಚು ತಿಳುವಳಿಕೆ ಹೊಂದಿದ್ದಾರೆ, ಅವರನ್ನು ಎದುರಿಸಲು ಯೋಜನೆಗಳನ್ನು ಹೊಂದಿದ್ದಾರೆ" ಎಂದು ಕಮ್ಮಿನ್ಸ್ ಹೇಳಿದ್ದಾರೆ.
"ರಾಜ್ಕೋಟ್ನಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದ್ದೇವೆ. ನಮ್ಮ ಪ್ಲೇಯಿಂಗ್ 11 ಬಲಿಷ್ಠವಾಗಿದೆ. ಭಾರತದಲ್ಲಿ ಏಕದಿನ ಮಾದರಿಯಲ್ಲಿ ನಾವು ಉತ್ತಮ ದಾಖಲೆ ಹೊಂದಿದ್ದೇವೆ" ಎಂದು ಅವರು ಹೇಳಿದರು.
ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಭಾರತದ ಪರಿಸ್ಥಿತಿ ಬಗ್ಗೆ ಹೆಚ್ಚಿನ ಅನುಭವ ಹೊಂದಿದ್ದಾರೆ ಈ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಇವರಿಬ್ಬರ ಪಾತ್ರ ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಡೇವಿಡ್ ವಾರ್ನರ್ ಈ ವರ್ಷ ಒಂಬತ್ತು ಇನ್ನಿಂಗ್ಸ್ಗಳಲ್ಲಿ 43.33 ಸರಾಸರಿ ಮತ್ತು 119.26 ಸ್ಟ್ರೈಕ್ ರೇಟ್ನಲ್ಲಿ ನಾಲ್ಕು ಅರ್ಧ ಶತಕ, ಒಂದು ಶತಕ ಸೇರಿ ಒಳಗೊಂಡಂತೆ 390 ರನ್ ಗಳಿಸಿದ್ದಾರೆ. ಭಾರತದಲ್ಲಿನ ಇತ್ತೀಚಿನ ಏಕದಿನ ಸರಣಿಯ ಸಮಯದಲ್ಲಿ, ವಾರ್ನರ್ ಸತತ ಮೂರು ಅರ್ಧಶತಕಗಳನ್ನು ಗಳಿಸಿ ಉತ್ತಮ ಫಾರ್ಮ್ನಲ್ಲಿದ್ದಾರೆ.
"ಭಾರತ ನಮಗೆ ಎರಡನೇ ಮನೆಯಂತೆ ಭಾಸವಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಐದು ಏಕದಿನ ಪಂದ್ಯಗಳು ಮತ್ತು ಭಾರತದ ವಿರುದ್ಧ ಮೂರು ಪಂದ್ಯಗಳೊಂದಿಗೆ ತಯಾರಿ ನಿಜವಾಗಿಯೂ ಉತ್ತಮವಾಗಿದೆ. ತಂಡದ ಎಲ್ಲಾ ಆಟಗಾರರು ತಯಾರಿಗೆ ಇಷ್ಟು ಸಾಕು ಎನಿಸುತ್ತದೆ" ಎಂದರು.