ಈ ವರ್ಷದ ಬಹುನಿರೀಕ್ಷಿತ ಟೆಸ್ಟ್ ಸರಣಿಗಳಲ್ಲಿ ಬಾರ್ಡರ್ ಗವಾಸ್ಕರ್ ಸರಣಿ ಒಂದು. ಈ ಸರಣಿಯ ಮೇಲೆ ಎಲ್ಲ ತಂಡಗಳ ಚಿತ್ತ ನೆಟ್ಟಿದೆ. ಈ ಪ್ರತಿಷ್ಠಿತ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಈ ಟೆಸ್ಟ್ ಸರಣಿಗೆ ಈಗಾಗಲೇ ಆಸೀಸ್ ತಂಡ ಮೈಂಡ್ ಗೇಮ್ ಆರಂಭಿಸಿದೆ.
ಈ ವರ್ಷದ ಕೊನೆಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಐದು ಟೆಸ್ಟ್ ಪಂದ್ಯಗಳನ್ನು ಆಡಲಿವೆ. ಈ ಹಿಂದೆ ಪ್ರವಾಸ ಬೆಳೆಸಿದ್ದಾಗ ಭಾರತ ಅಬ್ಬರದ ಪ್ರದರ್ಶನ ನೀಡಿತ್ತು. ಈಗಾಗಲೇ ಸತತ ಎರಡು ಪ್ರವಾಸಗಳಲ್ಲಿ ಸರಣಿ ವಶಕ್ಕೆ ಪಡೆದಿರುವ ಭಾರತ ತಂಡ, ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ.

ಬಲಿಷ್ಠ ತಂಡಗಳ ನಡುವಿನ ಕಾದಾಟವನ್ನು ನೊಡಲು ಅಭಿಮಾನಿಗಳು ಸಹ ರೆಡಿಯಾಗಿದ್ದಾರೆ. ಆಸ್ಟ್ರೇಲಿಯಾ ತವರಿನಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಆಸೀಸ್, ಟೀಮ್ ಇಂಡಿಯಾ ಜಯದ ಅಭಿಯಾನಕ್ಕೆ ಬ್ರೇಕ್ ಹಾಕಲು ಬೇಕಾದ ಪ್ಲ್ಯಾನ್ಗಳನ್ನು ಮಾಡಿಕೊಂಡಿದೆ. ಮುಂಬರುವ ಸರಣಿಯಲ್ಲಿ ಆಲ್ರೌಂಡರ್ಗಳ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಭಾರತ ವಿರುದ್ಧದ ಸರಣಿಯಲ್ಲಿ ಆಲ್ ರೌಂಡರ್ ಗಳಾದ ಮಿಚೆಲ್ ಮಾರ್ಷ್ ಹಾಗೂ ಕ್ಯಾಮೆರಾನ್ ಗ್ರೀನ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ಪ್ಯಾಟ್ ಕಮಿನ್ಸ್, ಆಲ್ ರೌಂಡರ್ ಆಟಗಾರನಿದ್ದರೆ, ನೀವು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಕ್ಯಾಮೆರಾನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್ ಅವರನ್ನು ಹೆಚ್ಚು ಬಳಸಲು ನಮಗೆ ಸಾಧ್ಯವಾಗಲಿಲ್ಲ. ಈಗ ಸರಿಯಾದ ವೇದಿಕೆ ಸಿದ್ಧವಾಗಿದೆ. ಮುಂಬರುವ ಸರಣಿ ಕೊಂಚ ವಿಭಿನ್ನವಾಗಿರಬಹುದು ಎಂದು ತಿಳಿಸಿದ್ದಾರೆ. ಶೀಲ್ಡ್ ಕ್ರಿಕೆಟ್ನಲ್ಲಿ ಬೌಲರ್ ಆಗಿ ಗ್ರೀನ್ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ ಆದರೆ ಇಲ್ಲಿಯವರೆಗೆ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ಬೌಲಿಂಗ್ ಮಾಡಿಲ್ಲ. ಮುಂಬರುವ ಸರಣಿಗಳಲ್ಲಿ ಅವರನ್ನು ಚೆನ್ನಾಗಿ ಬಳಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಮಿಚೆಲ್ ಮಾರ್ಷ್ ಹಾಗೂ ಕ್ಯಾಮರೂನ್ ಗ್ರೀನ್ ಇಬ್ಬರಲಿ ಆಡುವ ತಂಡದಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂದು ಪ್ರಶ್ನೆ ಕೇಳಲಾಯಿತು. ಇಬ್ಬರಿಗೂ ತಂಡದಲ್ಲಿ ಸ್ಥಾನ ಪಡೆಯುವ ಸಾಮರ್ಥ್ಯವಿದೆ. ಇಬ್ಬರೂ ತಂಡದಲ್ಲಿದ್ದರೆ ಬೌಲಿಂಗ್ನಲ್ಲೂ ಭಿನ್ನತೆಯನ್ನು ಹೊಂದಬಹುದಾಗಿದೆ. ಬ್ಯಾಟಿಂಗ್ನಲ್ಲಿ ಅಗ್ರ ಆರು ಬ್ಯಾಟ್ಸ್ಮನ್ಗಳು ಅವರ ಬ್ಯಾಟಿಂಗ್ ಆಧಾರದ ಮೇಲೆ ಮಾತ್ರ ತಂಡದಲ್ಲಿ ಸ್ಥಾನ ಪಡೆಯಬೇಕು. ಸ್ಪಿನ್ ಬೌಲರ್ ರೂಪದಲ್ಲಿ ನಾಥನ್ ಲಿಯಾನ್ ತಂಡದಲ್ಲಿರುವುದು ನಮಗೆ ಒಳ್ಳೆಯದು ಎಂದು ತಿಳಿಸಿದ್ದಾರೆ.

ಈಗಾಗಲೇ ಈ ಸರಣಿಯ ಬಗ್ಗೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಈ ವೇಳೆ ಅವರು ಆಸೀಸ್ ಈ ಬಾರಿ ಸರಣಿ ಗೆಲ್ಲಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.