
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ತೆರಳಿದೆ. ಐಪಿಎಲ್ ವೇಳೆ ಕೆಲ ಆಟಗಾರರು ಗಾಯಕ್ಕೀಡಾಗಿದ್ದರಿಂದ ಭಾರತ ತಂಡದಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿತ್ತು.
ಕೋಲ್ಕತ್ತಾ ನೈಟ್ ರೈಸರ್ಸ್ನ ವರುಣ್ ಚಕ್ರವರ್ತಿ ಅವರು ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗಾಗಿ ಆಯ್ಕೆಯಾಗಿದ್ದರು. ಆದರೆ ವರುಣ್ ಗಾಯಕ್ಕೀಡಾಗಿದ್ದರಿಂದ ಅವರ ಜಾಗಕ್ಕೆ ಸನ್ ರೈಸರ್ಸ್ ಹೈದರಾಬಾದ್ ವೇಗಿ ಟಿ ನಟರಾಜನ್ ಅವರನ್ನು ಬದಲಾಯಿಸಲಾಯ್ತು.
ವೃದ್ಧಿಮಾನ್ ಸಾಹ ಕೂಡ ಸದ್ಯ ಆಸ್ಟ್ರೇಲಿಯಾ-ಭಾರತ ಟೆಸ್ಟ್ ತಂಡದಲ್ಲಿದ್ದಾರೆ. ಆದರೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಸಾಹ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲವಾದ್ದರಿಂದ ಅವರ ಟೆಸ್ಟ್ ಭವಿಷ್ಯವೂ ಸಮಸ್ಯೆಯಲ್ಲಿದ್ದಂತಿದೆ. ಹ್ಯಾಮ್ಸ್ಟ್ರಿಂಗ್ಗೆ ಒಳಗಾಗಿದ್ದ ಸಾಹ ಎಸ್ಆರ್ಎಚ್ ವಿರುದ್ಧದ ಕಡೇಯ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ.
ಆಸ್ಟ್ರೇಲಿಯಾ-ಭಾರತ ಸರಣಿಯಲ್ಲಿ ಆಟಗಾರರ ಬದಲಾವಣೆ, ತಂಡದ ಬಗ್ಗೆ ಮಾತನಾಡುತ್ತಿರುವ ಜನರ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಆಟಗಾರ ಗಾಯದ ಬಗ್ಗೆ ಯಾರಿಗೆ ಗೊತ್ತು? ನಮಗೆ ಮತ್ತು ಎನ್ಸಿಎ ಫಿಸಿಯೋಗೆ ಗೊತ್ತು. ಆದರೆ ಜನರಿಗೆ ಗಾಯಗಳು ಅರ್ಥವಾಗುವುದಿಲ್ಲ. ಹಾಗಾಗಿ ಅವರು ಬಾಯಿಗೆ ಬಂದಂತೆ ಮಾತಾಡ್ತಾರೆ,' ಎಂದು ಗಂಗೂಲಿ ಹೇಳಿದ್ದಾರೆ.