
ನವದೆಹಲಿ, ಮೇ 2: ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದಿದ್ದ ಸರಣಿ ಗೆದ್ದಿದ್ದಕ್ಕಾಗಿ ಭಾರತದ ವಿಕಲ ಚೇತನ ಕ್ರಿಕೆಟಿಗರಿಗೆ ಮತ್ತು ಸಿಬ್ಬಂದಿಗೆ ನೀಡಬೇಕಿದ್ದ ನಗದು ಪುರಸ್ಕಾರವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶನಿವಾರ (ಮೇ 2) ನೀಡಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ನಡೆದಿದ್ದ ವಿಕಲ ಚೇತನರ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾರತ 36 ರನ್ ಗೆಲುವನ್ನಾಚರಿಸಿ ಸರಣಿ ಜಯಿಸಿತ್ತು. ಇದಕ್ಕಾಗಿ ಕಳೆದ ಮಾರ್ಚ್ನಲ್ಲಿ ಬಿಸಿಸಿಐಯು ಸಾಂಕೇತಿಕವಾಗಿ 65 ಲಕ್ಷ ರೂ.ಗಳ ಚೆಕ್ಕನ್ನು ನಾಯಕ ವಿಕ್ರಾಂತ್ ಕೇಣಿಗೆ ವಿತರಿಸಿತ್ತು.
ಈ ಬಾರಿ ನೈಜ ಹಣವನ್ನು ಬಿಸಿಸಿಐ ನೀಡುತ್ತಿದ್ದು, ಎಲ್ಲಾ ಆಟಗಾರರಿಗೆ, ಸಿಬ್ಬಂದಿಗೆ ಅವರವರ ಅಕೌಂಟ್ಗಳಿಗೆ ನೇರವಾಗಿ ಹಣ ವರ್ಗಾಯಿಸಲಾಗುತ್ತದೆ ಎಂದು ವಿಕಲ ಚೇತನರ ಆಲ್ ಇಂಡಿಯಾ ಕ್ರಿಕೆಟ್ ಅಸೋಸಿಯೇಶನ್ನ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದಿದ್ದ ಭಾರತೀಯ ತಂಡದಲ್ಲಿ ಒಟ್ಟು 17 ಮಂದಿ ಆಟಗಾರರು ಮತ್ತು 6 ಮಂದಿ ಸಿಬ್ಬಂದಿಯಿದ್ದರು. ಅವರೆಲ್ಲರಿಗೂ ಪುರಸ್ಕಾರದ ಹಣ ಬಿಸಿಸಿಐ ಮೂಲಕ ತಲುಪಲಿದೆ.