
ಅಬುಧಾಬಿ: ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 59 ರನ್ಗಳ ಸೋಲನುಭವಿಸಿದೆ. ಡೆಲ್ಲಿಯಲ್ಲಿ ನಾಯಕ ಶ್ರೇಯಸ್ ಐಯ್ಯರ್ ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ಗಮನಾರ್ಹ ಕೊಡುಗೆ ನೀಡದಿದ್ದರಿಂದ ಡೆಲ್ಲಿ ಪಂದ್ಯ ಸೋತಿತು.
ಟೂರ್ನಿಯ ಆರಂಭದಿಂದಲೂ ಬಲಿಷ್ಠ ತಂಡವಾಗಿ ಹೊರ ಹೊಮ್ಮಿದ್ದ ಡೆಲ್ಲಿ ಈಗ ಮತ್ತೆ ಸೋಲಿನ ಹಾದಿ ಹಿಡಿದಿದೆ. ಕೆಕೆಆರ್ಗೂ ಮುನ್ನ ಕಿಂಗ್ಸ್ 11 ಪಂಜಾಬ್ ವಿರುದ್ಧವೂ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ಗಳ ಸೋಲನುಭವಿಸಿತ್ತು. ತಂಡ ಕೊಂಚ ಸೋಲಿನ ಒತ್ತಡದಲ್ಲಿದ್ದಂತೆ ಕಾಣುತ್ತಿದೆ.
ಸೋಲಿನತ್ತ ವಾಲುತ್ತಿರುವ ತಂಡಕ್ಕೆ ನಾಯಕ ಐಯ್ಯರ್ ಉತ್ತಮ ಸಲಹೆ ನೀಡಿದ್ದಾರೆ. ಮುಂದಿನ ಪಂದ್ಯಗಳನನ್ನು ಗೆಲ್ಲಬೇಕಾದರೆ ಪಂದ್ಯದಲ್ಲಿ, ಟೂರ್ನಿಯಲ್ಲಿ ಬದುಕುಳಿಯಬೇಕು ಅನ್ನುವ ಮನಸ್ಸಿನಲ್ಲಿ ಆಡಬೇಡಿ. ಸ್ವತಂತ್ರ ಮನಸ್ಸಿನಲ್ಲಿ ಆಡಿ ಎಂದು ಶ್ರೇಯಸ್ ಹೇಳಿದ್ದಾರೆ.
'ನಾವು ಮಾನಸಿಕವಾಗಿ ಮೊದಲು ಬಲಿಷ್ಠರಾಗಬೇಕು ಸ್ವತಂತ್ರ ಮನಸ್ಸಿನಿಂದ ಆಡಬೇಕು. ಬದುಕುಳಿಯಬೇಕು ಎನ್ನುವಂತೆ ಒತ್ತಡದಲ್ಲಿ ಆಡಬಾರದು,' ಎಂದು ಐಪಿಎಲ್ ಪ್ರಚಾರಕ ಸ್ಟಾರ್ಸ್ಪೋರ್ಟ್ಸ್ ಜೊತೆ ಮಾತನಾಡುತ್ತ ಶ್ರೇಯಸ್ ಹೇಳಿದ್ದಾರೆ.