
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಟೀಮ್ ಇಂಡಿಯಾವನ್ನು ಪ್ರತಿನಿಧಿಬೇಕೆಂಬುದು ಪ್ರತಿಯೊಬ್ಬ ಭಾರತೀಯ ಯುವ ಕ್ರಿಕೆಟಿಗರ ಮಹತ್ವದ ಗುರಿಯಾಗಿರುತ್ತದೆ. ಹಾಗೆಯೇ ಐಪಿಎಲ್ ಕೂಡ ಯುವ ಕ್ರಿಕೆಟಿಗರ ಕನಸಿನ ವೇದಿಕೆಯಾಗಿದೆ. ಅದರಲ್ಲೂ ಕೆಲ ಆಟಗಾರರಿಗೆ ತಮ್ಮದೇ ಆದ ನೆಚ್ಚಿನ ತಂಡವನ್ನು ಪ್ರತಿನಿಧಿಬೇಕು ಎಂಬ ಕನಸು ಇರುತ್ತದೆ. ಈ ರೀತಿಯ ಕನಸನ್ನು ಕೇರಳದ ಯುವ ಕ್ರಿಕೆಟಿಗ ವ್ಯಕ್ತಡಿಸಿದ್ದಾರೆ.
ಕಳೆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ದಿಗ್ಗಜ ಆಟಗಾರರಿಂದ ಹೊಗಳಿಸಿಕೊಂಡ ಯುವ ಕ್ರಿಕೆಟಿಗ ಮೊಹಮ್ಮದ್ ಅಜರುದ್ಧೀನ್. ಈ ಬಾರಿಯ ಐಪಿಎಲ್ನ ಹರಾಜಿನಲ್ಲಿ ಈ ಆಟಗಾರನ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿದೆ. ಈ ಹರಾಜಿಗೂ ಮುನ್ನ ಅಜರುದ್ಧೀನ್ ಆರ್ಸಿಬಿ ತಂಡದ ಪರವಾಗಿ ಆಡಿದರೆ ಅದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣವಾಗಿರಲಿದೆ ಎಂದು ಹೇಳಿದ್ದಾರೆ.
"ನಾನು ವಿರಾಟ್ ಭಾಯ್ ಅವರ ಕಾರಣದಿಂದಾಗಿ ಆರ್ಸಿಬಿ ತಂಡವನ್ನು ಅನುಸರಿಸುತ್ತಾ ಬಂದಿದ್ದೇನೆ. ಹೀಗಾಗಿ ಆರ್ಸಿಬಿ ತಂಡದ ಪರವಾಗಿ ನಾನು ಆಡಿದರೆ ಅದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣವಾಗಿರಲಿದೆ. ವಿರಾಟ್ ಕೊಹ್ಲಿ ಜೊತೆಯಲ್ಲಿ ಬ್ಯಾಟಿಂಗ್ ಮಾಡುವುದು ಅತ್ಯಂತ ವಿಶೇಷ ಕ್ಷಣವಾಗಿರಲಿದೆ" ಎಂದು ಮೊಹಮ್ಮದ್ ಅಜರುದ್ದೀನ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗುವ ಅವಕಾಶ ಎನ್ಸಿಎನಲ್ಲಿ ನನಗೆ ದೊರೆತಿತ್ತು. ಕಿರನ್ ಮೋರೆ ಸರ್ ಜೊತೆಗೆ ಅಂಡರ್ 23 ತಂಡದ ಪರವಾಗಿ ತರಬೇತಿಯಲ್ಲಿದ್ದಾಗ ಕೊಹ್ಲಿಯನ್ನು ಭೇಟಿಯಾಗಿದ್ದೆವು. ಆದರೆ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಅಂದು ಅವಕಾಶ ದೊರೆತಿಲ್ಲ ಎಂದು ಅಜರುದ್ಧೀನ್ ಹೇಳಿಕೊಂಡಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನೀಡಿದ ಒಂದು ಶ್ರೇಷ್ಠ ಪ್ರದರ್ಶನ ಮೊಹಮ್ಮದ್ ಅಜರುದ್ಧೀನ್ ಅವರ ಸಾಮರ್ಥ್ಯವನ್ನು ಬಹಿರಂಗಪಡಿಸಿದೆ. ಹೀಗಾಗಿ ಈ ಪ್ರದರ್ಶನದ ಕಾರಣದಿಂದಾಗಿ ಮೊಹಮ್ಮದ್ ಅಜರುದ್ಧೀನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಗಮನಸೆಳೆಯುವ ಸಾಧ್ಯತೆ ದಟ್ಟವಾಗಿದೆ.