
ಬೆಂಗಳೂರು, ಮೇ 26: ಕೊರೊನಾವೈರಸ್ನಿಂದಾಗಿ ನಿಲುಗಡೆಯಾಗಿದ್ದ ಕ್ರಿಕೆಟ್ ಚಟುವಟಿಕೆಗಳನ್ನು ಪುನರಾರಂಭಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ. ಜೀವ ಸುರಕ್ಷತಾ ತಾಣಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಇಸಿಬಿ ಯೋಚಿಸಿತ್ತು. ಆದರೆ ಇಸಿಬಿಯ ಈ ಯೋಚನೆ ಸರಿಯಲ್ಲ ಎಂದು ಭಾರತದ ದಂತಕತೆ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಕೋವಿಡ್ 19ನಿಂದಾಗಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಬಯೋ ಸೆಕ್ಯೂರ್ (ಜೀವ ಸುರಕ್ಷತಾ) ತಾಣಗಳಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಸರಣಿಗಳನ್ನು ನಡೆಸುವುದಾಗಿ ಇಸಿಬಿ ಇತ್ತೀಚೆಗೆ ಘೋಷಿಸಿತ್ತು. 'ಬಯೋ ಸೆಕ್ಯೂರ್' ಅಂದರೆ ಮಾರಕ ಅಥವಾ ಹಾನಿಕಾರಕ ಜೀವಿಗಳು ಮತ್ತು ರೋಗಗಳ ಹರಡುವಿಕೆಯಿಂದ ರಕ್ಷಿಸಲು ತೆಗೆದುಕೊಳ್ಳಲಾಗುವ ಮುನ್ನೆಚ್ಚರಿಕೆಗಳು.
'ಇಸಿಬಿ ಹೇಳುವ ಮಟ್ಟದಲ್ಲಿ ವಿಚಾರಗಳು ನಡೆಯಲಿವೆ ಅನ್ನೋದು ಸ್ವಲ್ಪ ಅವಾಸ್ತವಿಕ. ಇಸಿಬಿ ಕ್ರಿಕೆಟ್ ಸರಣಿಗಳನ್ನು ಅಂಥ ವಾತಾವರಣಗಳಲ್ಲಿ ನಡೆಸಲಿದೆ ಅನ್ನೋದನ್ನು ನಿಸ್ಸಂಶಯವಾಗಿ ಹೇಳಬಹುದು. ಯಾಕೆಂದರೆ ಅವರಿಗೆ ಬೇರೆ ಕ್ರಿಕೆಟ್ ಪಂದ್ಯಗಳಿಲ್ಲ..,' ಎಂದು ದ್ರಾವಿಡ್ ಹೇಳಿದ್ದಾರೆ.
'ಬಯೋ ಸೆಕ್ಯೂರ್ ಪರಿಸರದಲ್ಲಿ ಪಂದ್ಯಗಳನ್ನು ನಡೆಸಲು ಇಂಗ್ಲೆಂಡ್ ಸಮರ್ಥರಿರಬಹುದು. ಆದರೆ ಪ್ರವಾಸದ ವೇಳೆ ನೀವು ಮಾಡುವ ಪ್ರಯಾಣ, ಪ್ರವಾಸದಲ್ಲಿ ಪಾಲ್ಗೊಳ್ಳುವ ಮಂದಿಯನ್ನೆಲ್ಲ ಗಣನೆಗೆ ತೆಗೆದುಕೊಂಡರೆ ಎಲ್ಲರಿಗೂ ಆಂಗ್ಲರಂತೆ ಪಂದ್ಯಗಳನ್ನು ಆಯೋಜಿಸಲು ಖಂಡಿತಾ ಸಾಧ್ಯವಿಲ್ಲ,' ಎಂದು ಭಾರತದ ಮಾಜಿ ನಾಯಕ ದ್ರಾವಿಡ್ ವಿವರಿಸಿದ್ದಾರೆ.
ಕೊರೊನಾ ವಿಶ್ವದಗಲ ವ್ಯಾಪಿಸಿ ಕ್ರೀಡಾ ಚಟುವಟಿಕೆಗಳು ನಿಲುಗಡೆಯಾಗುವ ಮುನ್ನ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು. ಆದರೆ ಕೊರೊನಾದಿಂದ ಪ್ರವಾಸ ಸರಣಿ ನಡೆಯಲಿಲ್ಲ. ಹೀಗಾಗಿ ಮತ್ತೆ ಪ್ರವಾಸ ಸರಣಿ ನಡೆಸುವುದಾದರೆ ಬಯೋ ಸೆಕ್ಯೂರ್ ತಾಣಗಳಲ್ಲಿ ಪಂದ್ಯ ನಡೆಸುವಂತೆ ದಕ್ಷಿಣ ಆಫ್ರಿಕಾ ಕೂಡ ಭಾರತಕ್ಕೆ ಸಲಹೆ ನೀಡಿತ್ತು. ಆದರೆ ಜೀವ ಸುರಕ್ಷತಾ ತಾಣಗಳಲ್ಲಿ ಪಂದ್ಯ ನಡೆಸೋದು ಎಲ್ಲಾ ದೇಶಗಳಿಗೂ ಸುಲಭ ಸಾಧ್ಯವಿಲ್ಲ ಎಂದು 'ಗ್ರೇಟ್ ವಾಲ್' ದ್ರಾವಿಡ್ ಅಭಿಪ್ರಾಯಿಸಿದ್ದಾರೆ.