ಮಹಾರಾಜ್ ಟಿ20 ಕ್ರಿಕೆಟ್ ಟೂರ್ನಿ ದಿನ ಕಳೆದಂತೆ ರೋಚಕತೆ ಹೆಚ್ಚಿಸುತ್ತಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ 5 ವಿಕೆಟ್ಗಳಿಂದ ಮೈಸೂರು ವಾರಿಯರ್ಸ್ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ 6 ವಿಕೆಟ್ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸೋಲಿಸಿತು.
ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ಸಾಧಾರಣ ಮೊತ್ತ ಕಲೆ ಹಾಕಿತು. ತಂಡದ ಪರ ಯಾರೊಬ್ಬ ಆಟಗಾರಾನೂ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಭರವಸೆಯ ಬ್ಯಾಟರ್ಗಳಾದ ಮನೋಜ್ ಭಂಡಾರೆ (38), ಜಗದೀಶ್ ಸುಚಿತ್ (25), ಎಸ್ಯು ಕಾರ್ತಿಕ್ (24) ರನ್ ಕಲೆ ಹಾಕುವ ಸೂಚನೆ ನೀಡಿದರು. ಆದರೆ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

ಮೈಸೂರು ಪರ ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ 20 ಓವರ್ಗಳಲ್ಲಿ ಮೈಸೂರು 9 ವಿಕೆಟ್ ಕಳೆದುಕೊಂಡು 154 ರನ್ ಸೇರಿಸಿತು. ಗುಲ್ಬರ್ಗ ತಂಡದ ಪರ ಅಭಿಷೇಕ್ ಪ್ರಭಾಕರ್ ಐದು ವಿಕೆಟ್ ಕಬಳಿಸಿ ಮಿಂಚಿದರು. ವಿಜಯ್ ಕುಮಾರ್ ವೈಶಾಖ್ 2 ವಿಕೆಟ್ ಪಡೆದು ಅಬ್ಬರಿಸಿದರು.
155 ರನ್ಗಳ ಗುರಿಯನ್ನು ಬೆನ್ನಟ್ಟಿದ ಗುಲ್ಬರ್ಗ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಲವನೀತ್ ಸಿಸೋಡಿಯಾ (23) ಹಾಗೂ ದೇವದತ್ ಪಡಿಕ್ಕಲ್ (24) ಮೊದಲ ವಿಕೆಟ್ 41 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಆರ್ ಸರ್ಮನ್ ಅಮೋಘ ಆಟದ ಪ್ರದರ್ಶನ ನೀಡಿದರು. ಇವರು 36 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿ ಔಟ್ ಆದರು. ಅಂತಿಮವಾಗಿ ಗುಲ್ಬರ್ಗ 18.5 ಓವರ್ಗಳಲ್ಲಿ 5 ವಿಕೆಟ್ಗೆ 157 ರನ್ ಬಾರಿಸಿ ಅಬ್ಬರಿಸಿದರು.

ಎರಡನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಮೊದಲು ಬ್ಯಾಟ್ ಮಾಡಿ 19.3 ಓವರ್ಗಳಲ್ಲಿ 141 ರನ್ ಕಲೆ ಹಾಕಿತು. ಹುಬ್ಬಳ್ಳಿ ತಂಡದ ಪರ ಮನೀಷ್ ಪಾಂಡೆ 44 ರನ್ ಬಾರಿಸಿದರು. ಇವರ ಅಮೋಘ ಇನಿಂಗ್ಸ್ನಲ್ಲಿ 2 ಬೌಂಡರಿ, 2 ಸಿಕ್ಸರ್ ಸೇರಿವೆ. ಶಿವಮೊಗ್ಗ ಪರ ವಾಸೂಕಿ ಕೌಶಿಕ್ ಹಾಗೂ ಡಿ ಅವಿನಾಶ್ ತಲಾ ಎರಡು ವಿಕೆಟ್ ಉರುಳಿಸಿದರು.
ಸಾಧಾರಣ ಗುರಿಯನ್ನು ಹಿಂಬಾಲಿಸಿದ ಶಿವಮೊಗ್ಗ ಲಯನ್ಸ್ ಪರ ಆರಂಭಿಕ ಧೀರಜ್ (17) ಹಾಗೂ ನಿಹಾಲ್ (37) ಮೊದಲ ವಿಕೆಟ್ಗೆ 32 ರನ್ಗಳ ಜೊತೆಯಾಟವನ್ನು ನೀಡಿದರು. ಮಧ್ಯಮ ಕ್ರಮಾಂಕದ ಅಭಿನವ್ ಮನೋಹರ್ 27 ಎಸೆತಗಳಲ್ಲಿ 2 ಬೌಂಡರಿ, 9 ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿದರು. ಅಂತಿಮವಾಗಿ ಶಿವಮೊಗ್ಗ 15.1 ಓವರ್ಗಳಲ್ಲಿ 4 ವಿಕೆಟ್ಗೆ 147 ರನ್ ಸೇರಿಸಿ ಜಯ ಸಾಧಿಸಿತು.