ಇಡೀ ವಿಶ್ವವೇ 2024ರ ಟಿ-20 ಕ್ರಿಕೆಟ್ ವಿಶ್ವಕಪ್ ಮೆಗಾ ಟೂರ್ನಿಗೆ ಕಾತುರದಿಂದ ಕಾಯುತ್ತಿದೆ. ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ರಾಷ್ಟ್ರಗಳು ಈ ಟೂರ್ನಿಯ ಆತಿಥ್ಯ ವಹಿಸಿಕೊಳ್ಳವ ಮೂಲಕ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿವೆ. ಜೂನ್ 1 ರಿಂದ ಜೂನ್ 29 ವರೆಗೆ ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ಸುಮಾರು 20 ರಾಷ್ಟ್ರೀಯ ತಂಡಗಳು ಭಾಗವಹಿಸಲಿವೆ.
ಇಂತಹ ಮೆಗಾ ಟೂರ್ನಿಯಲ್ಲಿ ಹಲವು ಪ್ರತಿಷ್ಠಿತ ಸಂಸ್ಥೆಗಳು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಅಥವಾ ಉತ್ಪನ್ನಗಳ ಮಾರುಕಟ್ಟೆ ದೃಷ್ಟಿಯಿಂದ ರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡುವುದು ಸಾಮಾನ್ಯವಾಗಿರುತ್ತದೆ. ಜೊತೆಗೆ ಪ್ರಾಯೋಜಕತ್ವಗಳನ್ನು ನೀಡುವಾಗ ಸ್ಪರ್ಧೆ ಕೂಡ ಪ್ರಬಲವಾಗಿ ನಡೆಯುತ್ತದೆ.

ಇಂತಹ ಪ್ರಬಲ ಸ್ಪರ್ಧೆ ನಡುವೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ತನ್ನ ನಂದಿನಿ ಬ್ರಾಂಡ್ ಡೈರಿ ಉತ್ಪನ್ನಗಳ ಪ್ರಯೋಜಕತ್ವವನ್ನು ಮುಂಬರುವ ಟಿ20 ವಿಶ್ವಕಪ್ನಲ್ಲಿ ನೀಡಲು ಮುಂದಾಗಿದೆ. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡುವ ಮೂಲಕ ತನ್ನ ಬ್ರ್ಯಾಂಡ್ ಅನ್ನು ಜನಪ್ರಿಯವಾಗಿಸುವುದು ಹಾಗೂ ಆಟಗಾರರನ್ನು ಫೋಟೋ ಶೂಟ್ಗಳಿಗೆ ಸೆಳೆದುಕೊಂಡು ಜಾಹೀರಾತುಗಳಿಗೆ ಅವರನ್ನು ಬಳಸಿಕೊಳ್ಳುವುದು ಕೆಎಂಎಫ್ ಉದ್ದೇಶವಾಗಿದೆ.
ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಲು ಕೆಎಂಎಫ್ ಈ ಮಾರ್ಗ ಕಂಡುಕೊಂಡತಿದೆ. ಈಗಾಗಲೇ ಸಿಂಗಾಪುರ, ಭೂತನ್ ಮತ್ತು ಮ್ಯಾನ್ಮಾರ್ ಮತ್ತು ಮಧ್ಯಪ್ರಾಷ್ಯ ರಾಷ್ಟ್ರಗಳಲ್ಲಿ ಕೆಎಂಎಫ್ ತನ್ನ ಮಾರುಕಟ್ಟೆಯನ್ನು ಪ್ರಬಲವಾಗಿ ಬೆಳಸಿದ್ದು, ಅಮೆರಿಕಕ್ಕೂ ಕೂಡ ಸಿಹಿ ತಿಂಡಿಗಳನ್ನು ರಫ್ತು ಮಾಡುವುದರಲ್ಲಿ ಮುಂದಿದೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದೇನು?: ಈ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್ ಅವರು, 2024ರ ಟಿ- 20 ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವವನ್ನು ನೀಡಲಿದ್ದೇವೆ. ನಂದಿನಿಯನ್ನು ಜಾಗತಿಕ ಬ್ರಾಂಡ್ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ನಮಗೆ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಮಳಿಗೆಗಳಿವೆ ಎಂದು ವಿವರಿಸಿದ್ದಾರೆ.
ಮತ್ತೊಂದೆಡೆ ಮಾಹಿತಿ ತಂತ್ರಜ್ಞಾನ ಉದ್ಯಮಿ ಮತ್ತು ಇನ್ಫೋಸಿಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ ವಿ ಮೋಹನ್ದಾಸ್ ಪೈ ಕೆಎಂಎಫ್ನ ಈ ಕ್ರಮವನ್ನು ಟೀಕಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋಹನ್ದಾಸ್ ಪೈ, ಇದು ಎಂತಹ ದೊಡ್ಡ ಅವಮಾನ. ಕರ್ನಾಟಕದ ರೈತರಿಗೆ ಸೇರಿದ, ಕನ್ನಡಿಗರಾದ ಗ್ರಾಹಕರು ಪಾವತಿಸುವ ಹಣವನ್ನು ವಿದೇಶಿ ತಂಡಗಳಿಗೆ ಪ್ರಾಯೋಜಿಸಲು ಏಕೆ ಬಳಸುತ್ತಿದ್ದಾರೆ? ಅದು ಯಾವ ಮೌಲ್ಯವನ್ನು ನೀಡುತ್ತದೆ? ಬಡವರಿಗೆ ಪಾವತಿಸಿ ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್, ಶೇ.85ರಷ್ಟು ಆದಾಯ ರೈತರಿಗೆ ಮಾತ್ರ. ನಮ್ಮ ಉತ್ಪನ್ನದ ಉತ್ತೇಜನಕ್ಕಾಗಿ ಪ್ರಾಯೋಜಕತ್ವ ನೀಡುತ್ತಿದ್ದೇವೆ. ನಾವು ಜಾಗತಿಕ ಮಟ್ಟದಲ್ಲಿ ಮುನ್ನಡೆಯಬೇಕು ಎಂದಿದ್ದಾರೆ.