ಲಂಡನ್, ಜೂನ್ 08: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ. ಭಾರತದ ನಾಯಕ ವಿರಾಟ್ ಕೊಹ್ಲಿಗೆ ತಂಡದ ಆಯ್ಕೆ ಸಮಸ್ಯೆ ಎದುರಾಗಿದ್ದರೆ, ಉಭಯ ತಂಡಕ್ಕೂ ಮಳೆರಾಯನ ಕೃಪೆ ಸಿಗಬೇಕಿದೆ.
ಸೆಮಿಫೈನಲ್ ಹಂತಕ್ಕೇರಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಒಂದು ವೇಳೆ ಮಳೆ ಬಿದ್ದು, ಪಂದ್ಯ ರದ್ದಾದರೆ, ಅಂಕಪಟ್ಟಿಯಲ್ಲಿ ರನ್ ಸರಾಸರಿ ಲೆಕ್ಕಕ್ಕೆ ಬರುತ್ತದೆ.

ಪಾಕಿಸ್ತಾನ ವಿರುದ್ಧ 124ರನ್ ಅಂತರದ ಗೆಲುವು ಸಾಧಿಸಿದ ಭಾರತ, ಈ ಪಂದ್ಯ ಗೆಲ್ಲುವ ಫೇವರೀಟ್. ದಕ್ಷಿಣ ಆಫ್ರಿಕಾ ವಿರುದ್ಧ 96ರನ್ ಗಳಿಂದ ಸೋತಿರುವ ಶ್ರೀಲಂಕಾಕ್ಕೆ ಗೆಲುವಿನ ಅಗತ್ಯವಿದೆ. ನಾಯಕ ಏಂಜೆಲೋ ಮ್ಯಾಥ್ಯೂಸ್ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ.