
ಯುವ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮುಂಬೈನ ಒಶಿವಾಡಾ ಪೊಲೀಸರು ಸಪ್ನಾ ಗಿಲ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಮುಂಬೈನ ಪಂಚತಾರಾ ಹೋಟೆಲ್ನ ಹೊರಭಾಗದಲ್ಲಿ ಫೆಬ್ರವರಿ 15ರಂದು ತಡರಾತ್ರಿ ಸೆಲ್ಫಿ ವಿಚಾರವಾಗಿ ಗಲಾಟೆಯಾಗಿದೆ. ಸೆಲ್ಫಿ ನಿರಾಕರಿಸಿದ ಕಾರಣಕ್ಕೆ ಪೃಥ್ವಿ ಶಾ ಮೇಲೆ ಹಲ್ಲೆಗೆ ಮುಂದಾಗಿದ್ದು ಶಾ ಸ್ನೇಹಿತನ ಕಾರಿಗೆ ಹಾನಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೃಥ್ವಿ ಶಾ ಸ್ನೆಹಿತ 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಎಫ್ಐಆರ್ನಲ್ಲಿ ಪೃಥ್ವಿ ಶಾ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ 8 ಮಂದಿಯ ಗುಂಪು ದಾಳಿ ಮಾಡಿದ್ದಲ್ಲದೆ ತಮ್ಮ ಕಾರನ್ನು ಬೆನ್ನಟ್ಟಿಕೊಂಡು ಬಂದಿದ್ದು ಹಣ ನೀಡದಿದ್ದರೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಪೃಥ್ವಿ ಶಾ ತಮ್ಮ ಸ್ನೇಹಿತರ ಜೊತೆಗೆ ವಾಯುವ್ಯ ಮುಂಬೈನ ಸಾಂತಾಕ್ರೂಜ್ನಲ್ಲಿರುವ ಪಂಚತಾರಾ ಹೋಟೆಲ್ಗೆ ಊಟಕ್ಕಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ಆರೋಪಿಗಳು ಅವರ ಬಳಿಗೆ ಬಂದು ಸೆಲ್ಫಿಗೆ ಒತ್ತಾಯಿಸಿದ್ದಾರೆ. ಮೊದಲಿಗೆ ಇಬ್ಬರು ವ್ಯಕ್ತಿಗಳು ಪೃಥ್ವಿ ಶಾ ಬಳಿ ಸೆಲ್ಫಿಗಾಗಿ ಒತ್ತಾಯಿಸಿದ್ದರು. ಬಳಿಕ ಗುಂಪಾಗಿ ಬಂದು ಸೆಲ್ಫಿಗಾಗಿ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಾರಿ ಶಾ ಸೆಲ್ಫಿಗೆ ನಿರಾಕರಿಸಿದರು. ಆದರೆ ಆ ಗುಂಪು ಒತ್ತಡ ಹೇರಿದಾಗ ಪೃಥ್ವಿ ಶಾ ಸ್ನೇಹಿತ ಹೋಟೆಲ್ನ ಮ್ಯಾನೇಜರ್ಗೆ ಕರೆಮಾಡಿ ದೂರು ನೀಡಿದ್ದಾರೆ. ಆರೋಪಿಗಳನ್ನು ಹೊಟೇಲ್ನಿಂದ ಹೊರಹೋಗುವಂತೆ ಮ್ಯಾನೇಜರ್ ಸೂಚಿಸಿದರು. ಇದರಿಂದ ಕೆರಳಿದ ಆರೋಪಿಗಳು ಪೃಥ್ವಿ ಶಾ ಮತ್ತು ಅವರ ಸ್ನೇಹಿತ ರಾತ್ರಿ ಊಟ ಮುಗಿಸಿ ಹೋಟೆಲ್ನಿಂದ ಹೊರಗೆ ಬಂದಾಗ ಕೆಲವರು ಬೇಸ್ಬಾಲ್ ಬ್ಯಾಟ್ಗಳೊಂದಿಗೆ ಹೋಟೆಲ್ನ ಹೊರಗೆ ನಿಂತಿದ್ದರು. ಬಳಿಕ ಆರೋಪಿಗಳು ಬೇಸ್ಬಾಲ್ ಬ್ಯಾಟ್ಗಳಿಂದ ಬಳಸಿ ಪೃಥ್ವಿ ಶಾ ಸ್ನೇಹಿತನ ವಾಹನದ ಮುಂಭಾಗ ಮತ್ತು ಹಿಂಭಾಗದ ಗಾಜುಗಳನ್ನು ಒಡೆದು ಹಾಕಿದ್ದು ಕಾರಿಗೆ ಹಾನಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಮಹಿಳೆ ಕೂಡ ಪೃಥ್ವಿ ಶಾ ವಿರುದ್ಧ ಆರೋಪವನ್ನು ಮಾಡಿದ್ದು ಪಂಚತಾರಾ ಹೋಟೆಲ್ನ ಹೊರಭಾಗದಲ್ಲಿ ದೈಹಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಪ್ನಾ ಗಿಲ್ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು ಪ್ರಕರಣದ ವಿಚಾರವಾಗಿ ಮತ್ತಷ್ಟು ಆರೋಪಿಗಳನ್ನು ಬಂದಿಸುವ ಸಾಧ್ಯತೆಯಿದೆ.